ಇತ್ತೀಚಿನ ಸುದ್ದಿ
ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ 70ನೇ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರಸ್ಕಾರ
03/11/2025, 22:14
ಮಂಗಳೂರು(reporterkarnataka.com): ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಯಲ್ಲಿ  70ನೇ ಕನ್ನಡ ರಾಜ್ಯೋತ್ಸವ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸಂಭ್ರಮದಿಂದ ಜರಗಿತು.





ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯನಿ ನಯನ ಕುಮಾರಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನರಿಂಗಾನ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಶಾಲಾ ಎಸ್. ಡಿ.ಎಂಸಿ ಅಧ್ಯಕ್ಷ ನವಾಜ್ ಎಂ. ಬಿ.,  ಉಪಾಧ್ಯಕ್ಷರಾದ ಅಬೂಬಕ್ಕರ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಾತಾ,  ಶಾಲಾಭಿಮಾನಿ ಫರ್ಝನ್, ಶಾಲಾ ಶಿಕ್ಷಕರು, ಹಳೆ ವಿದ್ಯಾರ್ಥಿಗಳು, ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಭುವನೇಶ್ವರಿ ತಾಯಿಯ ಭಾವಚಿತ್ರಕ್ಕೆ ಅತಿಥಿಗಳು ಪುಷ್ಪ ನಮನ ಗೈಯ್ಯುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಎಸ್. ಎಸ್. ಎಲ್. ಸಿ.ಯಲ್ಲಿ ಅತ್ಯಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ನಗದು ಬಹುಮಾನ ನೀಡುವ ಮೂಲಕ ಪ್ರತಿಭಾ ಪುರಸ್ಕಾರವನ್ನು ಮಾಡಲಾಯಿತು. ಪ್ರಥಮ ಭಾಷೆ ಕನ್ನಡದಲ್ಲಿ A+ ಶ್ರೇಣಿ ಪಡೆದ 11 ವಿದ್ಯಾರ್ಥಿಗಳಿಗೆ ಅಭಿನಂದಿಸಲಾಯಿತು. ಶಾಲಾ ವಿದ್ಯಾರ್ಥಿಗಳಾದ ಅಮೀನತ್ ಇಫಾ ಮತ್ತು ವಿನಿಶಾ ಡಿಸೋಜಾ ಅವರು ಕನ್ನಡ ರಾಜ್ಯೋತ್ಸವದ ಬಗ್ಗೆ ಭಾಷಣ ಮಾಡಿದರು. ಕನ್ನಡ ನಾಡು ನುಡಿ, ವೈಭವದ ಬಗ್ಗೆ ಸಮಾಜ ವಿಜ್ಞಾನ ಶಿಕ್ಷಕಿ ಯಶಲತಾ  ತಿಳಿಸಿದರು. ಮುಖ್ಯ ಅತಿಥಿಯಾಗಿ ನವಾಜ್ ರವರು ಎಲ್ಲಾ ವಿದ್ಯಾರ್ಥಿಗಳು ಕನ್ನಡವನ್ನು ಶಾಲೆಗಳಲ್ಲಿ ಮಾತನಾಡಬೇಕು,  ಕನ್ನಡವನ್ನು ಉಳಿಸಬೇಕು, ಬೆಳೆಸಬೇಕು  ಎಂದು ಹೇಳುತ್ತಾ ಕನ್ನಡ ಭಾಷೆ, ಕನ್ನಡ ನಾಡಿನ ಶ್ರೇಷ್ಠತೆಯ ಬಗ್ಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷರಾದ ನಯನ ಕುಮಾರಿಯವರು ವಿದ್ಯಾರ್ಥಿಗಳು ಶಾಲೆಯಲ್ಲಿ ಕನ್ನಡದಲ್ಲಿ ಶುದ್ಧವಾಗಿ ಮಾತನಾಡುವುದು ಮತ್ತು ಬರೆಯುವುದನ್ನು ರೂಢಿಸಿಕೊಳ್ಳುವ ಮೂಲಕ ಕನ್ನಡ ಭಾಷೆಯನ್ನು ಬೆಳೆಸಬೇಕು ಎಂದು ತಿಳಿಸಿದರು. ಕಾರ್ಯಕ್ರಮದ ಎಲ್ಲಾ ಅತಿಥಿಗಳನ್ನು ಶ್ರೀಮತಿ ಜಯಲಕ್ಷ್ಮಿ ಜಿ.  ಕನ್ನಡ ಭಾಷಾ ಶಿಕ್ಷಕಿಯವರು  ಕನ್ನಡ ಶಾಲು ಹಾಕುವ ಮೂಲಕ ಸ್ವಾಗತಿಸಿದರು. ಪ್ರತಿಭಾ ಪುರ ಸ್ಕೃತ ವಿದ್ಯಾರ್ಥಿಗಳ  ಪಟ್ಟಿಯನ್ನು ಗಣಿತ ಭಾಷಾ ಶಿಕ್ಷಕಿ ಸೀಮಾ ಮರಿಯಾ ಡಿಸೋಜ ವಾಚಿಸಿದರು. ಆಂಗ್ಲಭಾಷಾ ಶಿಕ್ಷಕ ಸಂತೋಷ್ ಕುಮಾರ್ ವಂದಿಸಿದರು. ಹಿಂದಿ ಭಾಷಾ ಶಿಕ್ಷಕಿ ಸುಗಂಧಿ ಕಾರ್ಯಕ್ರಮ ನಿರೂಪಣೆ ಮಾಡಿದರು. ವಿದ್ಯಾರ್ಥಿಗಳಿಂದ ಕನ್ನಡ ನಾಡು ನುಡಿಯ ಬಗ್ಗೆ ಹಾಡುಗಳು ಮತ್ತು ನೃತ್ಯ ಕಾರ್ಯಕ್ರಮ ನಡೆಯಿತು.












