ಇತ್ತೀಚಿನ ಸುದ್ದಿ
ರಸ್ತೆ, ಕರೆಂಟ್ ಸಹಿತ ಮೂಲ ಸೌಕರ್ಯ ಏನೂ ಇಲ್ಲ: ತೀರ್ಥಹಳ್ಳಿಯ ಬಿದರಗೋಡು ಗ್ರಾಪಂ ವ್ಯಾಪ್ತಿಯಲ್ಲಿ ಚುನಾವಣೆ ಬಹಿಷ್ಕಾರ
19/04/2024, 11:43
ಶಶಿ ಬೆತ್ತದಕೊಳಲು ಶಿವಮೊಗ್ಗ
info.reporterkarnataka@gmail.com
ಮೂಲ ಸೌಕರ್ಯ ವಂಚಿತ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಬಿದರಗೋಡು ಗ್ರಾಪಂ ವ್ಯಾಪ್ತಿಯ ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಎಚ್ಚರಿಕೆ ನೀಡಿದ್ದಾರೆ.
ಬಿದರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಗುಂಬೆ ಹೋಬಳಿಯ ಕಣಗಲು, ಸುರುಳಿಗದ್ದೆ ಹಾಗೂ ಉಳುಮಡಿ ಗ್ರಾಮಗಳಲ್ಲಿ ಸುಮಾರು 45 ಕುಟುಂಬಗಳು ವಾಸಿಸುತ್ತಿದ್ದು, ಇಲ್ಲಿಗೆ ಅನೇಕ ವರ್ಷಗಳಿಂದ ಮೂಲಭೂತ ಸೌಕರ್ಯಗಳಾದ ರಸ್ತೆ, ಕರೆಂಟ್ ವ್ಯವಸ್ಥೆಗಳಿಲ್ಲದೆ ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗುತ್ತಿದೆ. ಇಲ್ಲಿನ ಅವ್ಯವಸ್ಥೆ ಕಂಡು ಯುವಕರಿಗೆ ಮದುವೆಗೆ ಹೆಣ್ಣು ಕೊಡಕೊಡಲು ಹಿಂದೇಟು ಹಾಕುವಂತಾಗಿದೆ. ಕಾಡು ಪ್ರಾಣಿಗಳ ಸಮಸ್ಯೆ ಮತ್ತು ನೆಟ್ವರ್ಕ್ ಸಮಸ್ಯೆ ಉಂಟಾಗಿದ್ದು ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಬಗ್ಗೆ ಹಲವಾರು ಮನವಿ ಸಲ್ಲಿಸಿದ್ದರು ಕ್ಯಾರೇ ಎನ್ನದ ಸರ್ಕಾರ ಹಾಗೂ ಆಡಳಿತಕ್ಕೆ ಗ್ರಾಮಸ್ಥರು ಚುನಾವಣೆ ಬಹಿಷ್ಕಾರ ಮಾಡುವುದರ ಮೂಲಕ ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೆ ವೇಳೆ ತಲ್ಲೂರಂಗಡಿ ಕೈಮರದಿಂದ ಉಳುಮಡಿ ಹೋಗುವ ಸುಮಾರು 5 ಕಿಮೀ ರಸ್ತೆ 8 ತಿಂಗಳ ಹಿಂದೆ ಮಾಡಿದ್ದಾದರೂ ಅಲ್ಲಲ್ಲಿ ಕಿತ್ತು ಬಂದು ರಸ್ತೆ ಕಳಪೆಯಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.
ಈ ಪ್ರದೇಶ ನಕ್ಸಲ್ ಪೀಡಿತ ಪ್ರದೇಶಕ್ಕೆ ಒಳಪಟ್ಟಿದ್ದರೂ ಮೂಲಭೂತ ಸೌಕರ್ಯಗಳು ದೊರಕುತ್ತಿಲ್ಲ ಎಂಬುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ.