ಇತ್ತೀಚಿನ ಸುದ್ದಿ
ಒಂದೇ ವೇದಿಕೆಯಲ್ಲಿದ್ದರೂ ಪರಸ್ಪರ ಮುಖ ನೋಡದ ಈಶ್ವರಪ್ಪ- ರಾಘವೇಂದ್ರ: ಆರೆಸ್ಸೆಸ್ ಯುಗಾದಿ ಸಮಾರಂಭದಲ್ಲಿ ಮುನಿಸಿಕೊಂಡೇ ಇದ್ದ ನಾಯಕರು!
09/04/2024, 21:03
ಜಯಶ್ರೀ ಪಾಟೀಲ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಶಿವಮೊಗ್ಗ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹಾಗೂ ಬಿಜೆಪಿ ರೆಬೆಲ್ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಅವರು ಒಂದೇ ವೇದಿಕೆಯಲ್ಲಿದ್ದರೂ ಕೈಕುಲುವುದು ಬಿಡಿ, ಪರಸ್ಪರ ಮುಖ ನೋಡದ ಘಟನೆ ನಡೆದಿದೆ.
ಆರೆಸ್ಸೆಸ್ ಆಯೋಜಿಸಿದ ಯುಗಾದಿ ಕಾರ್ಯಕ್ರಮದಲ್ಲಿ ಈ ಇಬ್ಬರು ನಾಯಕರು ಒಂದೇ ವೇದಿಕೆಯಲ್ಲಿದ್ದರು. ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ರಾಘವೇಂದ್ರ ಹಾಗೂ ಮಾಜಿ ಸಚಿವ ಈಶ್ವರಪ್ಪ ಅವರು ಆರೆಸ್ಸೆಸ್ ಕಪ್ಪು ಟೋಪಿ ಧರಿಸಿ ಭಾಗವಹಿಸಿದ್ದರು. ಇಬ್ಬರು ನಾಯಕರು ಆರೆಸ್ಸೆಸ್ ಸಮವಸ್ತ್ರವಾದ ಬಿಳಿ ಶರ್ಟ್/ ಜುಬ್ಬಾ ತೊಟ್ಟಿದ್ದರು. ದಶಕಗಳ ಕಾಲ ಒಂದೇ ಪಕ್ಷದಲ್ಲಿ ದುಡಿದಿದ್ದ ಆ ಇಬ್ಬರು ನಾಯಕರಲ್ಲಿ ಒಬ್ಬರು ಹಿರಿಯ ರಾಜಕಾರಣಿಯಾದರೆ, ಇನ್ನೊಬ್ಬರು ಯುವ ನೇತಾರ. ಆದರೆ ಈ ಇಬ್ಬರೂ ನಾಯಕರುಗಳು ಒಬ್ಬರ ಮುಖ ಇನ್ನೊಬ್ಬರು ನೋಡುವ ಗೋಜಿಗೆ ಹೋಗಿಲ್ಲ. ಯಾಕೆಂದರೆ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಈ ಇಬ್ಬರು ನಾಯಕರು ಸ್ಪರ್ಧಿಸುತ್ತಿದ್ದಾರೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರನಾದ ರಾಘವೇಂದ್ರ ಅವರು ಬಿಜೆಪಿಯ ಅಧಿಕೃತ ಅಭ್ಯರ್ಥಿಯಾದರೆ, ಈಶ್ವರಪ್ಪ ಅವರು ಬಿಜೆಪಿ ಬಂಡಾಯ ಅಭ್ಯರ್ಥಿ.