ಇತ್ತೀಚಿನ ಸುದ್ದಿ
ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಗುಡುಗು ಸಹಿತ ಮಳೆ: ಮನೆಗೆ ಸಿಡಿಲು ಬಡಿದು ಹಾನಿ
29/10/2023, 23:33
ಕಾರ್ಕಳ(reporterkarnataka.com): ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಗುಡುಗು ಸಹಿತ ಸಾಮಾನ್ಯ ಮಳೆಯಾಗಿದ್ದು, ಕಣಂಜಾರು ಗ್ರಾಮದ ಪೆಲತ್ತೂರು ಪಟ್ಲದ ಮನೆಯೊಂದಕ್ಕೆ ಸಿಡಿಲು ಬಡಿದು ಸಾವಿರಾರು ರೂಪಾಯಿ ಮೌಲ್ಯದ ಸೊತ್ತು ಹಾನಿಯಾಗಿದೆ.
ಬಜಗೋಳಿ, ನಾರಾವಿ , ಮಾಳ ಚೌಕಿ ಕಡಾರಿ , ಕೆರುವಾಶೆ , ಶಿರ್ಲಾಲು , ಈದು, ಕಣಂಜಾರು , ಗಾಳಿ ಸಿಡಿಲಿನಿಂದ ಆವೃತವಾದ ಮಳೆ ಸುರಿದಿದೆ. ಕೆಲವು ಕಡೆಗಳಲ್ಲಿ ಮಳೆಯಿಂದ ಹಾನಿ ಸಂಭವಿದಿದೆ.
ಹೆಬ್ರಿ ತಾಲೂಕಿನಲ್ಲಿ ಮಳೆಯಾಗಿದ್ದು,ಭಾನುವಾರ ಕೆಲವೆಡೆ ತುಂತುರು ಮಳೆ ಸುರಿದಿದ್ದು, ವರಂಗ ಗ್ರಾಪಂ ವ್ಯಾಪ್ತಿಯ ಮುನಿಯಾಲು, ನಾಡ್ಪಾಲು, ಕಬ್ಬಿನಾಲೆ ಭಾಗಗಳಲ್ಲಿ ಮಳೆಯಾಗಿದೆ. ಕಾರ್ಕಳ ಹೆಬ್ರಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಬಿಸಿಲಿನಿಂದ ಕೂಡಿದ ವಾತಾವರಣದಿಂದ ತಂಪಾಗಿಸಿದೆ.
ಕಾರ್ಕಳ ತಾಲೂಕಿನ ಕಣಂಜಾರು ಗ್ರಾಮದ ಪೆಲತ್ತೂರು ಪಟ್ಲ ದೇವೇಂದ್ರ ನಾಯಕ್ ಎಂಬವರ ಮನೆಯ ಪಕ್ಕದಲ್ಲಿ ಸಿಡಿಲು ಬಡಿದಿದ್ದು, ಈ ಮೂಲಕ ಸಾವಿರಾರು ಮೌಲ್ಯದ ವಿದ್ಯುತ್ ಉಪಕರಣಗಳು ಹಾನಿಗೀಡಾಗಿವೆ.
ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ: ಕಾರ್ಕಳ ಹಾಗೂ ಹೆಬ್ರಿಯಲ್ಲಿ ಸಿಡಿಲಿನ ಆರ್ಭಟಕ್ಕೆ ವಿದ್ಯುತ್ ಪೂರೈಕೆ ಯಲ್ಲಿ ವ್ಯತ್ಯಯವಾಗಿದ್ದು ಜನಸಾಮಾನ್ಯರು ತೊಂದರೆಗೀಡಾದರು.