ಇತ್ತೀಚಿನ ಸುದ್ದಿ
ಮಂಗಳೂರು ಪೊಲೀಸ್ ಕಮಿಷನ್ ಆದೇಶದ ಬಳಿಕವೂ ಫುಟ್ ಬೋರ್ಡ್ ನಲ್ಲಿ ಪ್ರಯಾಣ:123 ಪ್ರಕರಣ ದಾಖಲು
01/09/2023, 19:00
ಮಂಗಳೂರು(reporterkarnataka.com): ಕಡಲ ನಗರಿಯಲ್ಲಿ ನಿರ್ವಾಹಕರೊಬ್ಬರು ಸಿಟಿ ಬಸ್ಸಿನಿಂದ ರಸ್ತೆಗೆ ಬಿದ್ದು ಸಾವನ್ನಪ್ಪಿದ ಘಟನೆಯ ಬಳಿಕ ಮಂಗಳೂರು ಪೊಲೀಸ್ ಕಮಿಷನರ್ ಫುಟ್ ಬೋರ್ಡ್ ಪ್ರಯಾಣವನ್ನು ನಿಷೇಧಿಸಿ ನೀಡಿದ ಆದೇಶವನ್ನು ಉಲ್ಲಂಘಿಸಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು 123 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಬಸ್ಸಿನ ಫುಟ್ಬೋರ್ಡ್ ಪ್ರಯಾಣಕ್ಕೆ ಸಂಬಂಧಿಸಿದಂತೆ
ಪೊಲೀಸರು ವಿಶೇಷ ಕಾರ್ಯಾಚರಣೆ ಕೈಗೊಂಡಿದ್ದರು. ಇದರಂತೆ ನಗರದ ವಿವಿಧ ಕಡೆಗಳಲ್ಲಿ 123 ಪ್ರಕರಣಗಳನ್ನು ದಾಖಲಿಸಲಾಗಿದೆ.
ನಗರದ ನಂತೂರು ಬಳಿ ಸಿಟಿ ಬಸ್ಸಿನಿಂದ ಕಂಡಕ್ಟರ್ ಒಬ್ಬರು ರಸ್ತೆಗೆ ಎಸೆಯಲ್ಪಟ್ಟು ಸಾವಿಗೀಡಾದ ಬಳಿಕ ಮಂಗಳೂರು ಪೊಲೀಸರು ಎಚ್ಚೆತ್ತುಕೊಂಡು ಬಸ್ ಗಳಿಗೆ ಬಾಗಿಲು ಕಡ್ಡಾಯಗೊಳಿಸಿದ್ದಾರೆ. ಈ ನಡುವೆ ಕಾರ್ಯಾಚರಣೆ ಮುಂದುವರೆಸಲಾಗಿದೆ. ಫುಟ್ಬೋರ್ಡ್ನಲ್ಲಿ ನಿಂತವರ ವಿರುದ್ಧ ಕ್ರಮಕೈಗೊಂಡಿದ್ದಾರೆ. ಅಲ್ಲದೆ, ಇನ್ನು ಮುಂದಕ್ಕೆ ನಿಂತಿರುವುದು ಕಂಡುಬಂದರೆ ಬಸ್ ಮುಂದಕ್ಕೆ ಕೊಂಡೊಯ್ಯಬಾರದೆಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಬಾಗಿಲು ಹೊಂದಿರುವ ಬಸ್ಗಳು ಇನ್ನೂ ಕಟ್ಟುನಿಟ್ಟಾಗಿ ನಿಯಮ ಪಾಲಿಸಬೇಕು. ಹಾಗೂ ಬಾಗಿಲನ್ನು ಸಂಚಾರದ ಸಮಯದಲ್ಲಿ ಮುಚ್ಚಿರಬೇಕೆಂದು ಎಂದು ಪೊಲೀಸರು ತಿಳಿಸಿದ್ದಾರೆ.