ಇತ್ತೀಚಿನ ಸುದ್ದಿ
18 ವರ್ಷದ ಯುವಕನ ಆತ್ಮಹತ್ಯೆ: ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡ ನೋವುಗೆ ಬಲಿಯಾದ ವಿಘ್ನೇಶ್
23/03/2025, 11:15

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಭುವನ ಕೋಟೆ ಗ್ರಾಮದಲ್ಲಿ ಹೃದಯ ವಿದ್ರಾವಕ ಘಟನೆ ನಡೆದಿದೆ. 18 ವರ್ಷದ ಯುವಕ ವಿಘ್ನೇಶ್ 4 ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ 17 ಹಲ್ಲುಗಳನ್ನು ಕಳೆದುಕೊಂಡು ತೀವ್ರ ಶಾರೀರಿಕ ಹಾಗೂ ಮಾನಸಿಕ ನೋವು ಅನುಭವಿಸುತ್ತಿದ್ದ. ಈ ನೋವಿನಿಂದ ಮನನೊಂದು, ಆತ ತನ್ನ ಮನೆಯಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವಿಘ್ನೇಶ್ ಕೊಪ್ಪದಲ್ಲಿರುವ ಐಟಿಐ ಸಂಸ್ಥೆಯಲ್ಲಿ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದ. ದೈಹಿಕ ಹಾಗೂ ಮಾನಸಿಕ ಪೀಡನೆ ಎದುರಿಸುತ್ತಿದ್ದ ಈ ಯುವಕ, ಯಾವಾಗಲೂ ಆಸ್ಪತ್ರೆಗೆ ಹೋಗಿ ಬರಬೇಕಾಗುತ್ತಿತ್ತು. ನಿರಂತರ ಚಿಕಿತ್ಸೆ ಮತ್ತು ಹಲ್ಲುಗಳಿಗೆ ಸಂಬಂಧಿಸಿದ ಸಮಸ್ಯೆಗಳ ನಡುವೆ ಆತ ಮಾನಸಿಕವಾಗಿ ಜರ್ಜರಿತನಾಗಿದ್ದ. ಸ್ಥಳಕ್ಕೆ ಜಯಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.