ಇತ್ತೀಚಿನ ಸುದ್ದಿ
ಎಕ್ಕುಟ್ಟಿ ಹೋದ ಶಿರಾಡಿ ಘಾಟ್ ರಸ್ತೆ ಮತ್ತೆ ಬಂದ್ ಆಗುತ್ತಾ? ದುರಸ್ತಿಗೆ ಕಾಮಗಾರಿಗೆ ಬೇಕಾ 4 ತಿಂಗಳು?
28/06/2022, 18:42
ಭಾನುಪ್ರಿಯ ಹೊಳೆನರಸೀಪುರ ಹಾಸನ
info.reporterkarnataka@gmail.com
ಪ್ರತಿ ಮಳೆಗಾಲದಲ್ಲಿ ಬಂದ್ ಆಗುವ ಮೂಲಕ ಸುದ್ದಿ ಮಾಡುವ ಶಿರಾಡಿ ಘಾಟಿ ಮತ್ತೆ ಈ ಬಾರಿಯೂ ಬಂದ್ ಆಗುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಸಲು ಶಿರಾಡಿ ಘಾಟಿ ರಸ್ತೆಯನ್ನು ಸುಮಾರು 4 ತಿಂಗಳುಗಳ ಕಾಲ ಬಂದ್ ಮಾಡುವ ಕುರಿತು ಸರಕಾರಿ ಮಟ್ಟದಲ್ಲಿ ಚಿಂತನೆ ನಡೆದಿದೆ.
ದಕ್ಷಿಣ ಕನ್ನಡ ಮತ್ತು ಹಾಸನ ಜಿಲ್ಲೆಯ ವ್ಯಾಪ್ತಿಗೆ ಸೇರಿದ ಶಿರಾಡಿ ಘಾಟ್ ಪ್ರತಿ ಮುಂಗಾರಿನಲ್ಲೂ ಪ್ರಯಾಣಿಕರಿಗೆ ಸಮಸ್ಯೆ ತಂದೊಡ್ಡುತ್ತದೆ. ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ಸುರಂಗ ಮಾರ್ಗ ಮಾಡುವ ಪ್ರಸ್ತಾಪವನ್ನು ಕೂಡ ಸರಕಾರ ಮುಂದಿಟ್ಟಿದೆ. ಇದೀಗ ವರ್ಷಾವಧಿ ಜಾತ್ರೆ ತರಹ ಇಲ್ಲಿ ಮಳೆಗಾಲದಲ್ಲಿ ದುರಸ್ತಿ ಕಾಮಗಾರಿ ನಡೆಸುವುದು ವಾಡಿಕೆಯಾಗಿದೆ. ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ದೋಣಿಗಾಲ್ ನಿಂದ ಮಾರನಹಳ್ಳಿವರೆಗೆ ಸುಮಾರು 14 ಕಿಲೋ ಮೀಟರ್ ಉದ್ದದ ಶಿರಾಡಿ ಘಾಟಿ ರಸ್ತೆ
ಬಂದ್ ಮಾಡಿ, ಕಾಮಗಾರಿ ನಡೆಸಲು ಗುತ್ತಿಗೆದಾರರು ಮನವಿ ಮಾಡಿದ್ದಾರೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ರಿಪೋರ್ಟರ್ ಕರ್ನಾಟಕಕ್ಕೆ ಲಭ್ಯವಾಗಿದೆ.
ಬೆಂಗಳೂರಿನಿಂದ ಪ್ರಯಾಣಿಕರು ಮಂಗಳೂರು, ಕುಕ್ಕೆ ಸುಬ್ರಹ್ಮಣ್ಯ ಹಾಗೂ ಧರ್ಮಸ್ಥಳ, ಉಡುಪಿ ಸೇರಿದಂತೆ ಇನ್ನಿತರ ಸ್ಥಳಗಳಿಗೆ ಹೋಗಲು ಶಿರಾಡಿಘಾಟ್ ರಸ್ತೆಯೇ ಆಶ್ರಯಿಸಬೇಕಾಗಿದೆ. ಚನ್ನೈ ನಿಂದ ಮಂಗಳೂರಿಗೆ ಕೂಡ ಇದೇ ಶಿರಾಡಿಘಾಟ್ ಮೂಲಕವೇ ಹಾದು ಹೋಗಬೇಕು. ಆದರೆ ಶಿರಾಡಿಘಾಟ್ ಬಳಿ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ದುರಸ್ತಿಗೆ ಸುಮಾರು 4 ತಿಂಗಳು ಬೇಕಾಗುತ್ತದೆ. ವಾಹನಗಳು ಸಂಚರಿಸುತ್ತಲೇ ದುರಸ್ತಿ ಮಾಡುವುದು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ
ಶಿರಾಡಿ ಘಾಟ್ ರಸ್ತೆಯನ್ನು ಬಂದ್ ಮಾಡಬೇಕಾದ ಅನಿವಾರ್ಯತೆ ಉದ್ಭವಿಸಿದೆ. ಒಂದು ವೇಳೆ ಶಿರಾಡಿ ಘಾಟ್ ಬಂದ್ ಆದರೆ ಬದಲಿ ಮಾರ್ಗದ ಮೊರೆ ಹೋಗಬೇಕಾಗುತ್ತದೆ. ಈ ಬಗ್ಗೆ ಹಾಸನ ಜಿಲ್ಲಾಧಿಕಾರಿ, ಮಂಗಳೂರು ಜಿಲ್ಲಾಧಿಕಾರಿ, ಸ್ಥಳೀಯ ಜನಪ್ರತಿನಿಧಿಗಳು ಈ ಹಿಂದೆಯೂ ಚರ್ಚೆ ನಡೆಸಿದ್ದರು. ಆ ವೇಳೆ ಸ್ಥಳೀಯರು ಶಿರಾಡಿಘಾಟ್ ರಸ್ತೆ ಬಂದ್ಗೆ ವ್ಯಾಪಕ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಕೂಡ ನಡೆಸಿದ್ದರು. ಹೀಗಾಗಿ ಶಿರಾಡಿಘಾಟ್ ರಸ್ತೆ ಬಂದ್ ತಾತ್ಕಾಲಿಕವಾಗಿ ಸ್ಥಗಿತಗೊಂಡಿತ್ತು.
ಹಾಸನದಿಂದ ಸಕಲೇಶಪುರದವರೆಗಿನ ಹೆದ್ದಾರಿ ಕಾಮಗಾರಿ ಕಳೆದ 6 ವರ್ಷದಿಂದ ಕುಂಟುತ್ತ ಸಾಗುತ್ತಿದ್ದು, ಇನ್ನೂ ಕೂಡ ಪೂರ್ತಿಯಾಗಿಲ್ಲ. ಅದೇ ರೀತಿ ಶಿರಾಡಿಘಾಟ್ ರಸ್ತೆ ಕಾಮಗಾರಿ ಕೂಡ ವಿಳಂಭವಾದರೆ, ಪ್ರತಿನಿತ್ಯ ಸಂಚರಿಸುವ ಸ್ಥಳೀಯರಿಗೆ ತೊಂದರೆಯಾಗುತ್ತೆ ಎಂದು ಶಿರಾಡಿ ರಸ್ತೆ ಬಂದ್ಗೆ ವಿರೋಧ ವ್ಯಕ್ತವಾಗಿತ್ತು.