ಇತ್ತೀಚಿನ ಸುದ್ದಿ
ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ ಚಾಲನೆ
04/08/2025, 19:25

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ವಿಶ್ವ ವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ.
ನಾಡಹಬ್ಬ ದಸರಾದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳುವ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ವಿದ್ಯುಕ್ತ ಚಾಲನೆ ನೀಡಲಾಯಿತು. ಈ ಮೂಲಕ ನಾಡಹಬ್ಬ ದಸರಾಗೆ ಮುನ್ನುಡಿ ಬರೆಯಲಾಯಿತು.
*ಅಭಿಮನ್ಯು ನೇತೃತ್ವದಲ್ಲಿ 9 ಆನೆಗಳ ಮೊದಲ ತಂಡ:* ಈ ಬಾರಿ ನಾಡಹಬ್ಬ ದಸರಾ ಮಹೋತ್ಸವವನ್ನು ಸರ್ಕಾರ ಅದ್ಧೂರಿಯಾಗಿ ಆಚರಿಸಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಎರಡು ತಿಂಗಳ ಮೊದಲೇ ಜಂಬೂ ಸವಾರಿಯಲ್ಲಿ ಭಾಗವಹಿಸುವ 14 ಆನೆಗಳ ಪೈಕಿ ಅಭಿಮನ್ಯು ನೇತೃತ್ವದ 9 ಆನೆಗಳ ಮೊದಲ ತಂಡ ಮೈಸೂರಿಗೆ ತೆರಳಿವೆ.
*ಗಜ ಪಯಣಕ್ಕೆ ಚಾಲನೆ;ಸಚಿವ ಮಹದೇವಪ್ಪ ಗೈರು:* ಗಜಪಯಣ ಕಾರ್ಯಕ್ರಮದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ, ಸಚಿವ ವೆಂಕಟೇಶ್ ಹಾಗೂ ಅರಣ್ಯಾಧಿಕಾರಿಗಳು ಸೇರಿದಂತೆ ಆನೆಗಳ ಮಾವುತರು ಹಾಗೂ ಕಾವಾಡಿಗಳು ಇದ್ದರು. ಗಜಪಡೆಗೆ ಸಾಂಪ್ರದಾಯಿಕ ಪೂಜೆ ಸಲ್ಲಿಸಲಾಯಿತು. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಗಜಪಯಣ ಕಾರ್ಯಕ್ರಮಕ್ಕೆ ಗೈರಾಗಿದ್ದರು.
*ಸಾಂಪ್ರದಾಯಿಕ ಪೂಜೆ:* ಗಜಪಯಣಕ್ಕೂ ಮುನ್ನ ಅರ್ಚಕ ಪ್ರಹ್ಲಾದ್ ರಾವ್ ನೇತೃತ್ವದಲ್ಲಿ 9 ಆನೆಗಳಿಗೆ ಸಾಂಪ್ರದಾಯಿಕವಾಗಿ ಪಾದ ತೊಳೆದು ಅರಿಶಿನ ಕುಂಕುಮ ಹಚ್ಚಿ, ಶೃಂಗಾರ ಮಾಡಿ ವಿವಿಧ ಬಗೆಯ ಸಿಹಿತಿಂಡಿಗಳನ್ನು ಇಟ್ಟು ಗಜಪಡೆಗೆ ಮಹಾ ಮಂಗಳಾರತಿ ಮಾಡಿದ ನಂತರ ಕಾಡಿನ ದೇವತೆಗೆ ಪೂಜೆ, ಗಣಪತಿ ಪೂಜೆ, ಚಾಮುಂಡೇಶ್ವರಿ ಪೂಜೆ ಮಾಡಿದ ಬಳಿಕ 12:34 ರಿಂದ 12:59ರ ಶುಭ ತುಲಾ ಲಗ್ನದಲ್ಲಿ ಗಣ್ಯರಿಂದ ಪುಷ್ಪಾರ್ಚನೆ ಮಾಡುವ ಮೂಲಕ ಗಜಪಯಣಕ್ಕೆ ಚಾಲನೆ ಸಿಕ್ಕಿತು.
ಪೂಜೆಯ ನಂತರ ಗಜಪಡೆಗೆ ಕಬ್ಬು, ಬೆಲ್ಲ, ಬಾಳೆಹಣ್ಣು, ಕಾಯಿ ಹಾಗೂ ಇತರ ಹಣ್ಣುಹಂಪಲುಗಳನ್ನು ನೀಡಲಾಯಿತು. ಗಜಪಡೆಗೆ ಅರ್ಚಕರು ದೃಷ್ಟಿ ತೆಗೆದರು. ಈ ಗಜ ಪಯಣ ಕಾರ್ಯಕ್ರಮದಲ್ಲಿ ವಿವಿಧ ಜಾನಪದ ತಂಡಗಳು, ವೀರಗಾಸೆ, ಬುಡಕಟ್ಟು ಜಾನಪದ ಕಲೆ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನೆರವೇರಿದವು.
*ಗಜಪಡೆಯ ವಿವರ:* ಗಜಪಡೆ ನಾಯಕ ಅಭಿಮನ್ಯು(59), ಮತ್ತಿಗೋಡು ಶಿಬಿರದ ಭೀಮ(25), ದುಬಾರೆ ಶಿಬಿರದ ಕಂಜನ್ (24), ಧನಂಜಯ (44) ಮತ್ತು ಪ್ರಶಾಂತ್ (53), ಬಳ್ಳೆ ಶಿಬಿರದ ಮಹೇಂದ್ರ (42), ದೊಡ್ಡಹರವೆ ಶಿಬಿರದ ಏಕಲವ್ಯ (40) ಸೇರಿದಂತೆ 7 ಗಂಡಾನೆ ಹಾಗೂ ದುಬಾರೆ ಶಿಬಿರದ ಕಾವೇರಿ (45) ಹಾಗೂ ಬಳ್ಳೆಯ (ದೊಡ್ಡಹರವೆ) ಲಕ್ಷ್ಮೀ (53) ಹೆಣ್ಣಾನೆಗಳು ಮೊದಲ ತಂಡ ಮೈಸೂರಿಗೆ ತೆರಳಿವೆ.