ಇತ್ತೀಚಿನ ಸುದ್ದಿ
Women Empowerment | ಸೈನ್ಯದಲ್ಲಿ, ಅಂತರಿಕ್ಷದಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದು ಪ್ರಗತಿಯ ಪ್ರತೀಕ: ಮುಖ್ಯಮಂತ್ರಿ ಸಂತಸ
13/07/2025, 11:53

ಬೆಂಗಳೂರು(reporterkarnataka.com): ಶೇ.100 ರಷ್ಟು ಅಂಕಗಳನ್ನು ಪಡೆಯುವುದರಲ್ಲಿ ಹೆಣ್ಣುಮಕ್ಕಳೇ ಮುಂದಿದ್ದು, ಸೈನ್ಯದಲ್ಲಿ , ಅಂತರಿಕ್ಷದಲ್ಲೂ ಹೆಣ್ಣು ಮಕ್ಕಳು ಕೆಲಸ ಮಾಡುತ್ತಿರುವುದು ಮಹಿಳಾ ಕುಲದ ಪ್ರಗತಿಯ ಪ್ರತೀಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದರು.
ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ರಾಣಿ ಅಹಲ್ಯಾ ಬಾಯಿ ಹೋಳ್ಕರ್ ಅವರ 300ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಯಾವುದೇ ಸಂಘಟನೆ 25 ವರ್ಷ ಪೂರೈಸಿದರೆ ಅದು ದೊಡ್ಡ ಯಶಸ್ಸು. ಕರ್ನಾಟಕ ರಾಜ್ಯ ಅಹಲ್ಯಾ ಬಾಯಿ ಹೋಳ್ಕರ್ ಮಹಿಳಾ ಸಂಘ ಅತ್ಯಂತ ಯಶಸ್ವಿ ಆಗಿದೆ. ಇದಕ್ಕಾಗಿ ಶ್ರಮಿಸಿದ ಯಲ್ಲಮ್ಮ ಮತ್ತು ಜೊತೆಗಿರುವ ಪ್ರತಿಯೊಬ್ಬರೂ ಅಭಿನಂದನಾರ್ಹರು ಎಂದರು.
ಶಿಕ್ಷಣ-ಸಂಘಟನೆ-ಹೋರಾಟ ಅಂಬೇಡ್ಕರ್ ಅವರು ಶೋಷಿತ ಜಾತಿ-ಸಮುದಾಯಗಳಿಗೆ ಕೊಟ್ಟಿರುವ ಮಂತ್ರ. ಶೂದ್ರರು ಮತ್ತು ಮಹಿಳೆಯರು ಅಕ್ಷರ ಸಂಸ್ಕೃತಿಯಿಂದ ವಂಚಿತರಾಗಿದ್ದರು. ಆದರೆ ಅಂಬೇಡ್ಕರ್ ಅವರ ಕಾರಣದಿಂದ ಶೂದ್ರ ಮತ್ತು ಮಹಿಳಾ ಕುಲಕ್ಕೆ ಶಿಕ್ಷಣ ಕಲಿಯುವ ಅವಕಾಶ ಒದಗಿ ಬಂತು. ಇದಕ್ಕೆ ನಮ್ಮ ಸಂವಿಧಾನ ನೀಡಿದ ಕಡ್ಡಾಯ ಶಿಕ್ಷಣ ಕಾನೂನು ನೆರವಾಯಿತು ಎಂದು ಅವರು ನುಡಿದರು.
ಕುರುಬರಿಗೆ ಅಕ್ಷರ ಹತ್ತಲ್ಲ, ಶಿಕ್ಷಣ ಏಕೆ ಎಂದು ನಮ್ಮ ಅಜ್ಜಿ ಹೇಳುತ್ತಿದ್ದರು. ಆದರೆ, ನಾನು ಶಾಲೆಗೆ ಹೋಗಿ ಕಾನೂನು ಪದವಿ ಪಡೆದು ಮುಖ್ಯಮಂತ್ರಿಯೂ ಆದೆ. ನಾನು ಶಾಲೆಗೆ ಹೋಗಿ ಶಿಕ್ಷಣ ಕಲಿಯುವ ಅವಕಾಶ ಉಪಯೋಗಿಸಿಕೊಳ್ಳದಿದ್ದರೆ ನಾನೂ ಹಸು, ಕುರಿ ಕಾಯುತ್ತಾ ಇರಬೇಕಾಗಿತ್ತು. ಆದ್ದರಿಂದ ರಾಣಿ ಅಹಲ್ಯಾ ಬಾಯಿ ಅವರ ಶಿಕ್ಷಣ ಕ್ರಾಂತಿ ಎಲ್ಲರಿಗೂ ಈ ಮಹಿಳಾ ಸಂಘಟನೆಗೂ ಪ್ರೇರಣೆ ಆಯಿತು. ಇತಿಹಾಸ ಗೊತ್ತಿಲ್ಲದವರು ಭವಿಷ್ಯ ರೂಪಿಸಲು ಸಾಧ್ಯವಿಲ್ಲ ಎಂದರು.
ರಾಣಿ 20 ವರ್ಷ ಅಧಿಕಾರದಲ್ಲಿದ್ದರೂ ತನ್ನ ಸಾಮ್ರಾಜ್ಯ ಉಳಿಸಲು ಅಗತ್ಯವಾದ ಎಲ್ಲಾ ಅರ್ಹತೆಗಳನ್ನು ಬೆಳೆಸಿಕೊಂಡಿದ್ದರೂ ಸಾಮ್ರಾಜ್ಯ ವಿಸ್ತರಿಸುವ ಹಪಾಹಪಿ ಇರಲಿಲ್ಲ. ಖಜಾನೆ ತುಂಬಿದ್ದರೂ ಸರಳ ಜೀವನ ನಡೆಸುತ್ತಾ, ಸುಸ್ಥಿರ ಆಡಳಿತ, ಅಭಿವೃದ್ಧಿ ಕಡೆ ಹೆಚ್ಚಿನ ಗಮನ ಹರಿಸಿದ್ದ ರಾಣಿ ಅಹಲ್ಯಾ ಬಾಯಿ ಅವರು ಬಾಲ್ಯ ವಿವಾಹ ನಿಲ್ಲಿಸುವ ಮೂಲಕ ಸಾಮಾಜಿಕ ಬದಲಾವಣೆಯಲ್ಲೂ ಪ್ರಮುಖ ಪಾತ್ರ ವಹಿಸಿದರು ಎಂದರು.
ಜಾತ್ಯತೀತ ಮನೋಭಾವ ಹೊಂದಿದ್ದ ಅಹಲ್ಯಾ ಬಾಯಿ ಆಗಲೇ ಅಂತರ್ಜಾತಿ ವಿವಾಹ ಮಾಡಿಸಿದ್ದರು ಎಂದು ವಿವರಿಸಿದರು.
ಶಿಕ್ಷಣ ಪಡೆದು ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾದರೆ ಮಾತ್ರ ಅಸಮಾನತೆ ಅಳಿಸಿ ಸಾಮಾಜಿಕ ಬೆಳವಣಿಗೆ ಸಾಧ್ಯವಾಗುತ್ತದೆ ಎಂದು ಅವರು ನುಡಿದರು.
ನಮ್ಮ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಂದ ಯಾರೂ ಸೋಮಾರಿಗಳಾಗುವುದಿಲ್ಲ. ಬದಲಿಗೆ ಸಾಮಾಜಿಕವಾಗಿ ಸಬಲರಾಗುತ್ತಾರೆ ಎಂದರು.
ಮಹಿಳೆಯರ ಸಬಲೀಕರಣಕ್ಕೆ ನಮ್ಮ ಸರ್ಕಾರ ಗೃಹಲಕ್ಷ್ಮಿ, ಶಕ್ತಿ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡಿದ್ದಾಗಿದೆ. ಇದರಿಂದ ಸಮಾಜಕ್ಕೆ, ಮಹಿಳಾ ಕುಲಕ್ಕೆ ಶಕ್ತಿ ಬಂದಿದೆಯೇ ಹೊರತು ಯಾರೂ ಸೋಮಾರಿಗಳಾಗಿಲ್ಲ ಎಂದು ಅವರು ಹೇಳಿದರುಮ
ರಾಜ್ಯ ಅಹಲ್ಯಾಬಾಯಿ ಮಹಿಳಾ ಸಂಘಕ್ಕೆ ಬೆಂಗಳೂರಿನಲ್ಲಿ ಜಮೀನು ನೀಡಲಾಗುವುದು ಎಂದು ಸಿ.ಎಂ ಘೋಷಣೆ ಮಾಡಿದರು.