ಇತ್ತೀಚಿನ ಸುದ್ದಿ
ಗಣೇಶೋತ್ಸವಕ್ಕೆ ವಿನಾಯಕ ರೆಡಿ: 5 ಸಾವಿರಕ್ಕೂ ಹೆಚ್ಚು ಗಣಪತಿ ವಿಗ್ರಹ ರೂಪಿಸಿದ ಎಸ್.ಎನ್.ಹೊಳ್ಳ!
25/08/2025, 17:34

ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka@gmail.com
ಕಳೆದ 40 ವರ್ಷಗಳಿಂದ ಐದು ಸಾವಿರಕ್ಕೂ ಹೆಚ್ಚಿನ ಗಣೇಶ ಮೂರ್ತಿಯನ್ನು ನಿರ್ಮಾಣ ಮಾಡಿ ಸಾರ್ವಜನಿಕ ಗಣೇಶೋತ್ಸವಕ್ಕೆ ಒದಗಿಸಿದವರು ಬಂಟ್ವಾಳದ ಶಂಕರ ನಾರಾಯಣ ಹೊಳ್ಳರು ಈ ಬಾರಿಯೂ 100ಕ್ಕೂ ಹೆಚ್ಚಿನ ಗಣೇಶನ ವಿಗ್ರಹವನ್ನು ನಿರ್ಮಾಣ ಮಾಡಿದ್ದು, ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿಷ್ಠಾಪನೆಯಾಗಿ ಪೂಜೆಗೊಳ್ಳಲಿದೆ.
ಹೊಳ್ಳರು ತನ್ನ ತಂದೆ ಎಸ್.ವಿ.ಎಸ್ .ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದ ಬಿ.ಕೃಷ್ಣ ಹೊಳ್ಳರಿಂದ ವಿಗ್ರಹದ ನಿರ್ಮಾಣದ ಕೈಚಳಕವನ್ನು ಕರಗತ ಮಾಡಿಕೊಂಡಿದ್ದಾರೆ. ಆವೆ ಮಣ್ಣಿನಿಂದ ಮಾಡಿದ ವಿಗ್ರಹವು ಯಾವುದೇ ಪೈಂಟ್ ಬಳಸದೆ ವಾಟರ್ ಕಲರ್ನಿಂದ ನಿರ್ಮಾಣ ಮಾಡಿರುತ್ತಾರೆ. ಕಳೆದ 3 ತಿಂಗಳಿನಿಂದ ಮೂರ್ತಿ ನಿರ್ಮಾಣದ ಕೆಲಸವನ್ನು ಗಣೇಶೋತ್ಸವ ಸಮಿತಿಗಳ ಅಪೇಕ್ಷೆಯಂತೆ ವಿವಿಧ ಅಕಾರದ ಪೀಠಗಳಲ್ಲಿ ನಿರ್ಮಿಸಿದ್ದಾರೆ. 1ಅಡಿಯಿಂದ 5 ಅಡಿಯವರೆಗಿನ ಮೂರ್ತಿಗಳು ಪಾಣೆಮಂಗಳೂರು ವೀರವಿಠಲ ದೇವಸ್ಥಾನದ ವಠಾರದಲ್ಲಿ ಸಿದ್ಧವಾಗಿದೆ. ಮೂರ್ತಿಯ ಮೇಲೆ ಬೆಳ್ಳಿ ಕಿರೀಟವನ್ನು ಇರಿಸಿ ಗಣೇಶೋತ್ಸವ ಸಂದರ್ಭದಲ್ಲಿ ವಿವಿಧ ಹೂವಿನ ಅಲಂಕಾರಗಳನ್ನು ಮಾಡಲಾಗುತ್ತದೆ. ಮನೆಗಳಲ್ಲಿಯೂ ಪೀತಾಂಬರ ಬಣ್ಣದ ವಿಗ್ರಹವನಿಟ್ಟು ಆರಾಧನೆ ಮಾಡುತ್ತಿದ್ದಾರೆ.
ಬಂಟ್ವಾಳ ತಾಲೂಕಿನಲ್ಲಿ ಸಜಿಪ ಯುವಕ ಮಂಡಲದ 52ನೇ ವರ್ಷದ ಗಣೇಶೋತ್ಸವ , ಕಲ್ಲಡ್ಕದಲ್ಲಿ 50ನೇ ಗಣೇಶೋತ್ಸವ , ಬಿ.ಸಿ.ರೋಡಿನಲ್ಲಿ 46ನೇ ಗಣೇಶೋತ್ಸವ, ಫರಂಗಿಪೇಟೆಯಲ್ಲಿ 43ನೇ ಗಣೇಶೋತ್ಸವ, ಪಾಣೆಮಂಗಳೂರು ನರಿಕೊಂಬು ನವಜೀವನ ವ್ಯಾಯಾಮ ಶಾಲೆಯಲ್ಲಿ 43ನೇ ಗಣೇಶೋತ್ಸವ ಸೇರಿದಂತೆ ವಿವಿಧೆಡೆ ಸಾರ್ವಜನಿಕ ಗಣೇಶೋತ್ಸವಕ್ಕೆ ಸಿದ್ದತೆಯಾಗಿದೆ.