ಇತ್ತೀಚಿನ ಸುದ್ದಿ
ವಿಧಾನ ಪರಿಷತ್ ಸಭಾಪತಿ ಚುನಾವಣೆ ಮುಂದೂಡಿಕೆಗೆ ನಳಿನ್ ಸೂಚನೆ?: ಹೊರಟ್ಟಿಗೆ ಬಿಜೆಪಿ ಕೈಕೊಡುವುದೇ?
19/09/2022, 22:51

ಬೆಂಗಳೂರು(reporterkarnataka.com): ಜೆಡಿಎಸ್ ತ್ಯಜಿಸಿ ಬಂದರೆ ಮತ್ತೆ ವಿಧಾನ ಪರಿಷತ್ ಸಭಾಪತಿ ಪಟ್ಟ ನೀಡುವುದಾಗಿ ಬಸವರಾಜ ಹೊರಟ್ಟಿ ಅವರಿಗೆ ನೀಡಿದ್ದ ಭರವಸೆಯಿಂದ ಬಿಜೆಪಿ ಹಿಂದೆ ಸರಿಯುವ ಲಕ್ಷಣಗಳು ಕಂಡು ಬರುತ್ತಿದೆ. ಇದೇ ತಿಂಗಳ 21ರಂದು ನಡೆಯಬೇಕಿದ್ದ ಸಭಾಪತಿ ಚುನಾವಣೆಯನ್ನು ಮುಂದೂಡುವಂತೆ ಪಕ್ಷದ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಚುನಾವಣೆ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ನಾಮಪತ್ರ ಸಲ್ಲಿಸಲು ಹೊರಟ್ಟಿ ಅವರಿಗೆ ಸೂಚಿಸಲಾಗಿತ್ತು. ಈ ಮಧ್ಯೆಯೇ ಚುನಾವಣೆ ಮುಂದೂಡಿಕೆಯಾಗಿದೆ.
ಚುನಾವಣೆಗೆ ಅಧಿಸೂಚನೆ ಹೊರಡಿಸಲು ರಾಜ್ಯಪಾಲರಿಗೆ ಕಡತ ರವಾನಿಸಬೇಕು ಎನ್ನುವಷ್ಟ ರಲ್ಲಿ ಸಭಾನಾಯಕ ಕೋಟ ಶ್ರೀನಿವಾಸ ಪೂಜಾರಿಗೆ ಕರೆ ಮಾಡಿದ್ದ ಕಟೀಲ್, ಸಭಾಪತಿ ಆಯ್ಕೆ ಪ್ರಕ್ರಿಯೆ ಮುಂದೂಡಲು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿಗೆ ಸೂಚಿಸಲು ತಿಳಿಸಿದ್ದರು. ಅದರಂತೆ ಕರೆ ಮಾಡಿದಾಗ, ‘ಸಂಪುಟದ ತೀರ್ಮಾನ ಮುಂದೂಡಿಕೆ ಸರಿಯಲ್ಲ’ ಎಂದು ಮಾಧುಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು ಎಂದು ತಿಳಿದು ಬಂದಿದೆ.
ಬಳಿಕ ನಳಿನ್ ಮುಖ್ಯಮಂತ್ರಿಯವರಿಗೆ ಕರೆ ಮಾಡಿದ್ದಾರೆ. ಅದರಂತೆ, ಮಾಧು ಸ್ವಾಮಿಗೆ ಕರೆ ಮಾಡಿದ್ದ ಬೊಮ್ಮಾಯಿ, ಪಕ್ಷದ ಸೂಚನೆಯಂತೆ ಮುಂದೂಡಲು ಸೂಚಿಸಿದರು ಎನ್ನಲಾಗಿದೆ. ಬಿಜೆಪಿಯವರನ್ನೇ ಸಭಾಪತಿ ಮಾಡಲು ಯತ್ನ ನಡೆದಿದೆ. ಅದಕ್ಕೆ ಚುನಾವಣೆ ಮುಂದೂಡಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಮಧ್ಯೆ, ಸಭಾಪತಿ ಸ್ಥಾನವನ್ನು ಮೂಲ ಬಿಜೆಪಿಯವರಿಗೆ ನೀಡುವಂತೆ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಹಾಗೂ
ಇತರರು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಮತ್ತು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನೂ ಭೇಟಿ ಮಾಡಿ ಒತ್ತಾಯಿಸಿದ್ದಾರೆ ಎಂದೂ ಗೊತ್ತಾಗಿದೆ. ಸಭಾಪತಿ ಸ್ಥಾನಕ್ಕೆ ಪರಿಷತ್ತಿನ ಬಿಜೆಪಿ ಸದಸ್ಯರಲ್ಲಿ ಬಹುತೇಕರು ಹೊರಟ್ಟಿ ಪರ ಒಲವು ವ್ಯಕ್ತಪಡಿಸಿದ್ದಾರೆ. ಮುಂದೆ ಪಕ್ಷ ಅಧಿಕಾರಕ್ಕೆ ಬಾರದಿದ್ದರೆ ಹೊರಟ್ಟಿ ಪಕ್ಷದ ಪರ ಇರುತ್ತಾರೆ ಎನ್ನುವುದಕ್ಕೆ ಏನು ಖಚಿತವಿದೆ ಎಂದು ಭಾರತಿ ಶೆಟ್ಟಿ ಪ್ರಶ್ನಿಸಿದರೆ, ಆಯನೂರು ಮಂಜುನಾಥ್, ವೈ.ಎ. ನಾರಾಯಣಸ್ವಾಮಿ ಮತ್ತು ಶಶಿಲ್ ನಮೋಶಿ ತಾವೂ ಆ ಸ್ಥಾನದ ಆಕಾಂಕ್ಷಿಗಳು ಎಂದಿದ್ದಾರೆ’ ಎಂದು ಮೂಲಗಳು ಹೇಳಿವೆ.
ಉಪಸಭಾಪತಿ ಸ್ಥಾನಕ್ಕೆಎಂ. ಕೆ.ಪ್ರಾಣೇಶ್ ಅವರನ್ನು ಆಯ್ಕೆಗೆ ಸಚಿವ ಆರ್.ಅಶೋಕ ಒತ್ತಡ ಹೇರಿದರೆ, ಕೆ.ಎಸ್.ಈಶ್ವರಪ್ಪ ಮತ್ತು ಕೆಲ ಕುರುಬ ನಾಯಕರು ರಘುನಾಥ ರಾವ್ ಮಲ್ಕಾಪುರೆ ಅವರಿಗೆ ನೀಡುವಂತೆ ಆಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.