ಇತ್ತೀಚಿನ ಸುದ್ದಿ
ಹಾಸನಾಂಬ ದರ್ಶನಕ್ಕೆ ಜನರಿಗೆ ತಮ್ಮ ಗುರುತಿನ ಚೀಟಿ ನೀಡಿದ ಇಬ್ಬರು ಅಧಿಕಾರಿಗಳು ಸಸ್ಪೆಂಡ್
12/10/2025, 12:38

ಹಾಸನ(reporterkarnataka.com): ಈ ಬಾರಿ ಹಾಸನಾಂಬ ದೇವಿ ದರ್ಶನಕ್ಕೆ ವಿಐಪಿ ಸಂಸ್ಕೃತಿಗೆ ಬ್ರೇಕ್ ಹಾಕಲಾಗಿತ್ತು. ವಿಐಪಿಗಳು ಬರುವ ಮೊದಲು ಕೆಲ ಅಧಿಕಾರಿಗಳಿಗೆ ಮುಂಚಿತವಾಗಿಯೇ ತಿಳಿಸಿ, ದರ್ಶನ ಪಡೆಯಲು ವ್ಯವಸ್ಥೆ ಮಾಡಲಾಗಿತ್ತು. ಈ ಮಧ್ಯೆ ಜನರಿಗೆ ಹಾಸನಾಂಬ ದರ್ಶನ ಪಡೆಯಲು ತಮ್ಮ ಗುರುತಿನ ಚೀಟಿಯನ್ನೇ ನೀಡಿದಂತ ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಈ ಕುರಿತಂತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವಂತ ಅವರು, “ಜೀರೋ ಟಾಲರೆನ್ಸ್.” ಹಾಸನಾಂಬ ದೇವಾಲಯದ ಆವರಣಕ್ಕೆ ಅನಧಿಕೃತ ಜನರಿಗೆ ಪ್ರವೇಶ ನೀಡಲು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಮೊದಲ ದಿನವೇ ಇಬ್ಬರು ಸರ್ಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಇದು ನಮ್ಮ ನಿರ್ದೇಶನಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದಿದ್ದಾರೆ.
ಸರ್ಕಾರಿ ಗುರುತಿನ ಚೀಟಿಯನ್ನು ದುರುಪಯೋಗಪಡಿಸಿಕೊಳ್ಳುವುದು ಗಂಭೀರ ಅಪರಾಧ. ಈ ಇಬ್ಬರು ಅಧಿಕಾರಿಗಳು ತಮ್ಮ ಅಧಿಕೃತ ಗುರುತಿನ ಚೀಟಿಯನ್ನು ಅನಧಿಕೃತ ಜನರಿಗೆ ನೀಡಿ ದೇವಾಲಯ ಪ್ರವೇಶಕ್ಕೆ ಅವಕಾಶ ನೀಡಿದ್ದರು.ಇಂತಹ ಕೃತ್ಯಗಳು ಸರ್ಕಾರಿ ನೌಕರರಿಗೆ ತಕ್ಕುದಾದದ್ದಲ್ಲ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ. ಇದು ಕೇವಲ ಒಂದು ಪ್ರತ್ಯೇಕ ಘಟನೆ. ಈ ಘಟನೆ ಹೊರತುಪಡಿಸಿ ಎಲ್ಲಾ ಸರ್ಕಾರಿ ನೌಕರರು ಸಾರ್ವಜನಿಕರಿಗೆ ಅತ್ಯುತ್ತಮ ದರ್ಶನ ವ್ಯವಸ್ಥೆಯನ್ನು ಖಾತ್ರಿಪಡಿಸುವಲ್ಲಿ ಅನುಕರಣೀಯ ಕೆಲಸ ಮಾಡಿದ್ದಾರೆ. ಇದು ಉತ್ತಮ ತಂಡದ ಕೆಲಸ. ಉತ್ತಮ ಕೆಲಸ ಮಾಡುತ್ತಿರುವ ಸರ್ಕಾರಿ ಅಧಿಕಾರಿಗಳಿಗೆ ಶ್ರೇಯಸ್ಸು ಸಲ್ಲಬೇಕು ಎಂಬುದಾಗಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.