ಇತ್ತೀಚಿನ ಸುದ್ದಿ
ಟೈಗರ್ ಡ್ಯಾನ್ಸ್ ಗೆ ಸ್ಪರ್ಧಾ ಸ್ಪರ್ಶ | ಕುಡ್ಲದ ಪಿಲಿ ಪರ್ಬ 2025 ವಿಧ್ಯುಕ್ತ ಉದ್ಘಾಟನೆ
30/09/2025, 22:21

ಮಂಗಳೂರು(reporterkarnataka.com): ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದಡಿಯಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ರವರ ಮಾರ್ಗದರ್ಶನ ಹಾಗೂ ಶಾಸಕ ಡಿ.ವೇದವ್ಯಾಸ ಕಾಮತ್ ನೇತೃತ್ವದಲ್ಲಿ ನಗರದ ಕೇಂದ್ರ ಮೈದಾನದಲ್ಲಿ ನಡೆಯುತ್ತಿರುವ ಕುಡ್ಲದ ಪಿಲಿಪರ್ಬ-2025 ಸೀಸನ್ 4ರ ಉದ್ಘಾಟನಾ ಸಮಾರಂಭವು ಹಲವು ಗಣ್ಯರ ಉಪಸ್ಥಿತಿಯಲ್ಲಿ ನಡೆಯಿತು.
ಪಿಲಿಪರ್ಬವು ತುಳುನಾಡಿನ ಗತವೈಭವದ ಘನಪರಂಪರೆಯನ್ನು ಮೆಲುಕು ಹಾಕುವ ಹಾಗೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನ ಪ್ರಯತ್ನವಾಗಿದ್ದು ಸಾಂಪ್ರದಾಯಿಕ ಕಲೆಯಾಗಿರುವ ಈ ಹುಲಿವೇಷಕ್ಕೆ ಇಂದು ಸ್ಪರ್ಧಾಕೂಟದ ಸ್ಪರ್ಶ ಲಭಿಸಿದೆ. ಜಿಲ್ಲೆಯ ಅನುಭವಿ ಹಾಗೂ ನುರಿತ ತೀರ್ಪುಗಾರರ ಸಮ್ಮುಖದಲ್ಲಿ ನಡೆಯಲಿರುವ ಈ ಸ್ಪರ್ಧೆಯಲ್ಲಿ ಭಾಗವಹಿಸಲಿರುವ ಎಲ್ಲಾ 10 ಹುಲಿವೇಷ ತಂಡಗಳಿಗೂ ಗಣ್ಯರು ಶುಭ ಹಾರೈಸಿ ಹುಲಿವೇಷ ತಂಡಗಳನ್ನು ಪ್ರೋತ್ಸಾಹಿಸಲು ಆಗಮಿಸಿದ ಎಲ್ಲರಿಗೂ ಹಾರ್ದಿಕ ಸ್ವಾಗತವನ್ನು ಕೋರಿದರು.
ಸ್ಪರ್ಧಾಕೂಟವು ಇಂದು ರಾತ್ರಿಯವರೆಗೂ ಅದ್ದೂರಿಯಾಗಿ ಸಾಗಲಿದ್ದು ಅಂತಿಮವಾಗಿ ವಿಜೇತ ತಂಡದ ಘೋಷಣೆಯಾಗಲಿದೆ. ಈ ನಡುವೆ ವೀಕ್ಷಕರಿಗಾಗಿ ಕಾರ್ಯಕ್ರಮದ ನೇರ ಪ್ರಸಾರದ ವ್ಯವಸ್ಥೆಯನ್ನೂ ಮಾಡಲಾಗಿರುವುದು ವಿಶೇಷ.
ಉದ್ಘಾಟನಾ ಸಮಾರಂಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಸಂಸದ ಬ್ರಿಜೇಶ್ ಚೌಟ, ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್, ವಿ.ಕೆ ಫರ್ನಿಚರ್ಸ್ ನ ವಿಠ್ಠಲ್ ಕುಲಾಲ್, ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗಿರಿಧರ್ ಶೆಟ್ಟಿ, ಅಧ್ಯಕ್ಷ ದಿವಾಕರ್ ಪಾಂಡೇಶ್ವರ, ಪ್ರಮುಖರಾದ ನರೇಶ್ ಶೆಣೈ, ಅಶ್ವಿತ್ ಕೊಟ್ಟಾರಿ, ಲಲಿತ್ ಮೆಂಡನ್, ಕಿರಣ್ ಶೆಣೈ, ಚೇತನ್ ಕಾಮತ್, ಸಹಾನ್, ಜಗದೀಶ್ ಕದ್ರಿ, ವಿಖ್ಯಾತ್ ಶೆಟ್ಟಿ, ಅನಿಲ್ ಬೋಳೂರು, ಸಂಜಯ್ ಪೈ, ನರೇಶ್ ಪ್ರಭು ಹಾಗೂ ಬಿಜೆಪಿ ನಿಕಟ ಪೂರ್ವ ಪಾಲಿಕೆ ಸದಸ್ಯರುಗಳ ಸಹಿತ ಅನೇಕ ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.