ಇತ್ತೀಚಿನ ಸುದ್ದಿ
ಎಲ್ಲ ಕಡೆ ಸಿದ್ದರಾಮಯ್ಯ ಬೇಕು ಎಂಬ ಬೇಡಿಕೆಯಿದೆ; ಕುಮಾರಸ್ವಾಮಿನಾ ಯಾರು ಎಂದು ಕೇಳ್ತಾರೆ: ಸಚಿವ ಜಮೀರ್ ವ್ಯಂಗ್ಯ
08/04/2026, 16:07
ಬಾಗಲಕೋಟೆ(reporterkarnataka.com): ಬಾಗಲಕೋಟೆ ಕಾಂಗ್ರೆಸ್ ಅಭ್ಯರ್ಥಿ ಪರ ಕಣಕ್ಕಿಳಿದ ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಜನಪ್ರಿಯತೆಯನ್ನು ಲೇವಡಿ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಉಮೇಶ ಮೇಟಿ ಪರ ಬಿರುಸಿನ ಪ್ರಚಾರ ಕೈಗೊಂಡ ಜಮೀರ್, ಈಗ ಎಲ್ಲ ಕಡೆಯೂ ಸಿದ್ದರಾಮಯ್ಯ ಬೇಕು ಬೇಕು ಎಂಬ ಬೇಡಿಕೆ ಹೆಚ್ಚಾಗಿದೆ. ರಾಜಕಾರಣದಲ್ಲಿ ಎಲ್ಲ ರಾಜಕಾರಣಿಗಳಿಗೆ ದಿನಗಳದಂತೆ ಜನಪ್ರಿಯತೆ ಕಡಿಮೆ ಆಗುತ್ತೆ. ಆದರೆ, ಸಿದ್ದರಾಮಯ್ಯ ಅವರಿಗೆ ದಿನದಿಂದ ದಿನಕ್ಕೆ ಜಾಸ್ತಿಯೇ ಆಗ್ತಿದೆ, ದಟ್ ಇಸ್ ಸಿದ್ದರಾಮಯ್ಯ ಎಂದರು.
ಕಾಸರಗೂಡು, ಕೊಚ್ಚಿ ಎಲ್ಲೆಡೆ ಸಿದ್ದರಾಮಯ್ಯ ಅವರನ್ನು ಜನ ಕೇಳ್ತಾರೆ. ಈ ಕುಮಾರಸ್ವಾಮಿ ಅವರನ್ನು ಯಾರು ಎಲ್ಲಿ ಕೇಳ್ತಾರೆ? ಬರೀ ಕರ್ನಾಟಕದಲ್ಲಿ ಮಾತ್ರ. ಕುಮಾರಸ್ವಾಮಿಗೆ 2006ರಿಂದ 2008 ರವರೆಗೆ ಇದ್ದ ಜನಪ್ರಿಯತೆ ಈಗ ಇದೆಯಾ? ಅದು ಸಿದ್ದರಾಮಯ್ಯಗೆ ಇದೆ ಎಂದು ಹೇಳಿದರು.
ಎಲ್ಲ ಕಡೆಯೂ ಕಾಂಗ್ರೆಸ್ ಪಕ್ಷಕ್ಕೆ ಮತ ಎನ್ನುತ್ತಿದ್ದಾರೆ. ಎಚ್.ವೈ.ಮೇಟಿ ಮಾಡಿದ ಕೆಲಸವನ್ನು ನೆನೆಸಿಕೊಂಡು, ಅವರು ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿ, ಜನ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ. ಕಳೆದ ಸಲ ಕಡಿಮೆ ಅಂತರದಲ್ಲಿ ಗೆಲ್ಲಿಸಿದ್ದೇವೆ. ಈ ಸಲ 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸುತ್ತಾರೆ ಎಂದು ತಿಳಿಸಿದರು.












