ಇತ್ತೀಚಿನ ಸುದ್ದಿ
ಸಂಸದರು ಕೊಟ್ಟಿರುವ ಬ್ಯಾಗುಗಳು ಧೂಳು ತಿನ್ನುತ್ತಿವೆ!: ಬೆನ್ನು ಬಾಗಿದ ಮೇಲೆ ಕೊಡ್ತಾರಾ ಶಾಲಾ ಮಕ್ಕಳ ಬೆನ್ನಿಗೆ ಹಾಕುವ ಚೀಲ?
05/07/2025, 15:25

ಶಾಲಾ ಮಕ್ಕಳಿಗಾಗಿ ಬಂದಿರುವ ಬ್ಯಾಗ್ ಕೋಣೆ ಒಳಗೆ ಸೇರಿದ್ದೇಕೆ..!?
ಕ್ಷೇತ್ರ ಸಂಪನ್ಮೂಲ ಕೊಠಡಿಯಲ್ಲಿ (ಬಿ ಆರ್ ಸಿ) ಸಾವಿರಾರು ಶಾಲಾ ಬ್ಯಾಗ್ ಧೂಳು ಹಿಡಿದು ಕುಳಿತಿವೆ
ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ಶಿಕ್ಷಣ ಇಲಾಖೆಯಲ್ಲಿ ಹಲವು ಸಾಮಗ್ರಿಗಳು ವಿದ್ಯಾರ್ಥಿಗಳಿಗೆ ಬರುತ್ತದೆ. ಅಷ್ಟೇ ಅಲ್ಲದೆ ಕೆಲವು ದಾನಿಗಳು ನೀಡುವ ಎಷ್ಟೋ ಸಾಮಗ್ರಿಗಳು ಅಧಿಕಾರಿಗಳ ಕಪಿ ಮುಷ್ಟಿಯಿಂದ ವಿದ್ಯಾರ್ಥಿಗಳಿಗೆ ಸಿಗುವ ವೇಳೆ ವಿದ್ಯಾರ್ಥಿಗಳು ಶಿಕ್ಷಣವನ್ನೇ ಮುಗಿಸಿರುತ್ತಾರೆ ಎಂದು ಪೋಷಕರೊಬ್ಬರು ಆರೋಪಿಸಿದ್ದಾರೆ.
ಹೌದು, ಮಕ್ಕಳಿಗೆ ದಾನಿಗಳು ನೀಡಿರುವ ಎಷ್ಟೋ ಸಾಮಗ್ರಿಗಳು ಮಕ್ಕಳ ಕೈ ಸೇರುವುದಿಲ್ಲ. ಅದಕ್ಕೆ ಪುಷ್ಟಿ ನೀಡುವಂತೆ ತೀರ್ಥಹಳ್ಳಿಯಲ್ಲಿ ವಿದ್ಯಾರ್ಥಿಗಳಿಗೆ ನೀಡಿದ ಸಾವಿರಾರು ಸ್ಕೂಲ್ ಬ್ಯಾಗ್ ಗಳು ಬಿ. ಆರ್. ಸಿ ಕೋಣೆ ಒಳಗೆ ಸೇರಿದ್ದು ಇಲ್ಲಿಯವರೆಗೆ ಹೊರ ಬಂದಿಲ್ಲ. ಬಹುಷಃ ಮಕ್ಕಳಿಗೆ ಬೆನ್ನು ಬಾಗಿದ ಮೇಲೆ ಕೊಡಬಹುದೇನೋ ಎಂದು ಪೋಷಕರು ಮಾಧ್ಯಮಕ್ಕೆ ಹೇಳಿದ್ದಾರೆ.
ತೀರ್ಥಹಳ್ಳಿಯ ಕ್ಷೇತ್ರ ಸಂಪನ್ಮೂಲ ಕೊಠಡಿಯ ಕಟ್ಟಡವೊಂದರ ಕೋಣೆಯಲ್ಲಿ ಶಿವಮೊಗ್ಗ ಜಿಲ್ಲಾ ಸಂಸದ ಆಗಿರುವ ಬಿ ವೈ ರಾಘವೇಂದ್ರ ಅವರು ಮಕ್ಕಳಿಗಾಗಿ ನೀಡಿದ ಚೀಲಗಳು ಕೂಡಿಸಲಾಗಿದ್ದು ಈ ಸ್ಕೂಲ್ ಬ್ಯಾಗ್ ಗೆ ಬರೋಬ್ಬರಿ ಒಂದು ವರ್ಷದ ಹತ್ತಿರ ಆಗಿದೆ ಎಂದು ತಿಳಿದುಬಂದಿದೆ. ಹಾಗಾದ್ರೆ ಯಾಕೆ ಮಕ್ಕಳಿಗೆ ಇಲ್ಲಿಯವರೆಗೆ ಬ್ಯಾಗ್ ವಿತರಣೆ ಮಾಡಿಲ್ಲ. ಮಕ್ಕಳಿಗೆ ನೀಡಿದ ಬ್ಯಾಗ್ ಹಸ್ತಾಂತರ ಮಾಡಲು ಅಧಿಕಾರಿಗಳು ಮೀನಮೇಷ ನೋಡುತ್ತಿರುವುದು ಏಕೆ? ಬೆನ್ನಿಗೆ ಹಾಕುವ ಚೀಲ ಬೆನ್ನು ಬಾಗಿದ ಮೇಲೆ ಕೊಡ್ತಾರಾ!!?ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಸಂಸದ ಬಿ ವೈ ರಾಘವೇಂದ್ರ ಅವರು ಕೊಟ್ಟ ಮಕ್ಕಳ ಶಾಲಾ ಬ್ಯಾಗ್ ಧೂಳು ಹಿಡಿದು, ಮಳೆಗಾಲದಲ್ಲಿ ಚಂಡಿ ಹಿಡಿಯುವ ದುರವಸ್ಥೆ ಆ ಕಟ್ಟಡದಲ್ಲಿ ಇದ್ದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಕ್ಕಳಿಗೆ ನೀಡುವ ಸೌಲಭ್ಯವನ್ನು ಏನು ಮಾಡುತ್ತಿದ್ದಾರೆ? ಎಂಬುದೇ ಪ್ರಶ್ನೆಯಾಗಿದೆ.