10:46 PM Thursday18 - December 2025
ಬ್ರೇಕಿಂಗ್ ನ್ಯೂಸ್
ಉರುಳಿಗೆ ಸಿಲುಕಿ ಹುಲಿ ಸಾವಿನ ಪ್ರಕರಣ: ಆರೋಪಿಗಳ ಪತ್ತೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಕಲಿ‌ ದಾಖಲೆ ಸೃಷ್ಟಿಸಿ 512 ಎಕರೆ ಅರಣ್ಯ-ಕಂದಾಯ ಭೂಮಿ ಕಬಳಿಕೆ ಯತ್ನ: ಆರೋಪಿ… ಇಂಜಿನಿಯರಿಂಗ್ ಸೀಟುಗಳನ್ನು ನುಂಗುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು: ಸದನದ ಗಮನ ಸೆಳೆದ ಶಾಸಕ ಡಾ.… Kodagu | ಭಾಗಮಂಡಲ ಮೀಸಲು ಅರಣ್ಯದಲ್ಲಿ ಅಕ್ರಮ ಜಿಂಕೆ ಬೇಟೆ: ಆರೋಪಿಗಳು ಅರಣ್ಯ… 1600 ಪಿ.ಎಸ್.ಐ ಹುದ್ದೆಗಳ ನೇಮಕಾತಿಗೆ ಆರ್ಥಿಕ ಇಲಾಖೆಗೆ ಪ್ರಸ್ತಾವನೆ: ಗೃಹ ಸಚಿವ ಡಾ.ಜಿ.ಪರಮೇಶ್ವರ ಸಂಸತ್ ಅಧಿವೇಶನ | ರಾಜ್ಯಸಭೆಯಲ್ಲಿ ವೋಟ್‌ ಚೋರಿ ಚರ್ಚೆ; ಕಾಂಗ್ರೆಸ್‌ ವಿರುದ್ಧ ಗುಡುಗಿದ… Belagavi | ಶ್ಯಾಮನೂರು ಶಿವಶಂಕರಪ್ಪ ಅವರ ನಿಧನಕ್ಕೆ ಸದನದಲ್ಲಿ ಮುಖ್ಯಮಂತ್ರಿ ಸಂತಾಪ ಓಟ್ ಚೋರಿ ಸುಳ್ಳನ್ನು ಸತ್ಯ ಮಾಡಲು ಕಾಂಗ್ರೆಸ್ ಯತ್ನ: ಬಸವರಾಜ ಬೊಮ್ಮಾಯಿ ಆರೋಪ ಸರಪಾಡಿ: ಅಕ್ರಮ ಗೋಸಾಗಾಟ ಪ್ರಕರಣ; ಆರೋಪಿಯ ಮನೆ, ಕೊಟ್ಟಿಗೆ ಜಫ್ತಿ ತಪ್ಪು ಕಲ್ಪನೆಯಿಂದ ಬೆಡ್ತಿ ವರದಾ ನದಿ ಜೋಡಣೆಗೆ ವಿರೋಧ ಬೇಡ: ಮಾಜಿ ಸಿಎಂ…

ಇತ್ತೀಚಿನ ಸುದ್ದಿ

ಸ್ವಾತಂತ್ರ್ಯ ಅಮೃತ ಮಹೋತ್ಸವ: ಮಂಗಳೂರು ಬಿಷಪ್ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಶುಭಾಶಯ

14/08/2022, 20:23

ಮಂಗಳೂರು(reporterkarnataka.com): ಮಂಗಳೂರು ಕಥೊಲಿಕ್ ಧರ್ಮಪ್ರಾಂತ್ಯದ ಬಿಷಪ್ ವಂದನೀಯ ಪೀಟರ್ ಪಾವ್ಲ್ ಸಲ್ಡಾನ್ಹಾ ಭಾರತದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಶುಭಾಶಯ ಕೋರಿದ್ದಾರೆ.

ನಾವು ಭಾರತೀಯರು ಸ್ವತಂತ್ರ ದೇಶದಲ್ಲಿ ಬದುಕುತ್ತಿದ್ದೇವೆ. ಈ ಬಗ್ಗೆ ನಮಗೆ ತುಂಬಾ ಹೆಮ್ಮೆ ಇದೆ. ನಮ್ಮವರು ಹೋರಾಡಿ, ಜೀವದ ಬಲಿದಾನವನ್ನು ಅರ್ಪಿಸಿ ಪಡೆದ ಸ್ವಾತಂತ್ರ್ಯವಿದು. ಅವರ ತ್ಯಾಗ ಹಾಗೂ ಬಲಿದಾನದ ಫಲವನ್ನು ನಾವೆಲ್ಲರೂ ಅನುಭವಿಸುತ್ತಿದ್ದೇವೆ. ನನ್ನ ದೇಶದ ಸ್ವಾತಂತ್ರ್ಯ ಹೋರಾಟಗಾರರೆಲ್ಲರಿಗೆ ನನ್ನ ನಮನಗಳು ಹಾಗೂ ಅವರೆಲ್ಲರಿಗೂ ನಾನು ಚಿರಋಣಿಯಾಗಿದ್ದೇನೆ.

ನಮ್ಮ ದೇಶ ಸ್ವತಂತ್ರ ದೇಶವಾಗಿ 75 ವರ್ಷಗಳು ಕಳೆದರೂ ಇನ್ನೂ ಕೆಲವೊಂದು ಹಿನ್ನಡೆಗಳನ್ನು ಮೆಟ್ಟಿ ನಿಂತು ನಾವು ಮುನ್ನಡೆಯಬೇಕಾಗಿದೆ. ಬಡತನದ ಸಮಸ್ಯೆ ಇನ್ನೂ ನಮ್ಮನ್ನು ಶಾಶ್ವತವಾಗಿ ಬಿಟ್ಟು ಹೋಗಿಲ್ಲ. ನಿರುದ್ಯೋಗದ ಸಮಸ್ಯೆಯು ಇನ್ನೂ ಜ್ವಲಂತವಾಗಿರುವುದು ತುಸು ಆಲೋಚಿಸಬೇಕಾದ ಸಂಗತಿಯಾಗಿದೆ. ಇಂತಹ ಪ್ರಮುಖ ಸಮಸ್ಯೆಗಳಿಂದ ಹೊರಬಂದು ನಮ್ಮ ದೇಶವು ಪ್ರಗತಿಯತ್ತ ದಾಪುಗಾಲು ಹಾಕಲೆಂದು ನಾನು ಬಯಸುತ್ತೇನೆ.

ಶಿಕ್ಷಣ ರಂಗದಲ್ಲಿ ಮಹತ್ವದ ಕ್ರಾಂತಿಯಾದರೂ ಇನ್ನೂ ಗಣನೀಯ ಅಭಿವೃದ್ಧಿಯಾಗಬೇಕಾಗಿದೆ. ಇದರೊಂದಿಗೆ ಮನುಷ್ಯತ್ವದ ಮನೋಧರ್ಮವು ಇನ್ನಷ್ಟು ಪ್ರಭಾವಶಾಲಿಯಾಗಬೇಕಾಗಿದೆ. ಈ ದೇಶದ ರಾಷ್ಟ್ರಧ್ವಜವು ಮುಗಿಲೆತ್ತರಕ್ಕೆ ಹಾರುವಾಗ ನಮ್ಮ ಈ ದೇಶದ ವಿವಿಧತೆಯಲ್ಲಿ ಏಕತೆ ಎಂಬಂತಹ ಸುಂದರ ನಿಲುವಿಗೆ ಇನ್ನೂ ಆನೆ ಬಲ ಬರದೇ ಇರುವುದು ತುಸು ಬೇಸರವನ್ನು ತರಿಸುತ್ತದೆ. ಧರ್ಮದ ಹೆಸರಿನಲ್ಲಿ ಆಗುವಂತಹ ಘರ್ಷಣೆ ಹಾಗೂ ತಾರತಮ್ಯ ಖಂಡಿತವಾಗಿಯೂ ನಿಲ್ಲಬೇಕಾಗಿದೆ. ಅದರ ಬದಲು ಬಂಧುತ್ವವನ್ನು ಬೆಳೆಸಲು ನಾವೆಲ್ಲರೂ ನಿರಂತರ ದುಡಿಯಬೇಕಾಗಿದೆ.

ಪ್ರತಿಯೊಬ್ಬರ ಅನನ್ಯ ಕೊಡುಗೆ ಇದ್ದಾಗ ಮಾತ್ರ ನಾವು ನಮ್ಮ ದೇಶದ ಸ್ವಾತಂತ್ರ್ಯದ ಶತಮಾನೋತ್ಸವದತ್ತ ಮುಖ ಮಾಡಬಹುದು. ಮುಂದಿನ 25 ವರ್ಷಗಳಲ್ಲಿ ನವೀನತೆಯ ಮೆಟ್ಟಿಲುಗಳನ್ನು ಏರಬಹುದು ಎನ್ನುವ ಆಶಯ ಪ್ರತಿಯೊಬ್ಬ ಭಾರತೀಯ ಪ್ರಜೆಯದಾಗಬೇಕಾಗಿದೆ.

ಮತ್ತೊಮ್ಮೆ ತಮಗೆಲ್ಲರಿಗೂ ಈ ಶುಭ ಸಂದರ್ಭವು ಸಂತೋಷ ತಂದು ಕೊಡಲಿ ಎಂದು ಹಾರೈಸುತ್ತೇನೆ. ಎಲ್ಲೆಲ್ಲೂ ಶಾಂತಿ, ನೆಮ್ಮದಿ, ದೇಶಪ್ರೇಮದ ವಾತಾವರಣ ನೆಲೆಸಲಿ. ಕೈ ಕೈ ಜೋಡಿಸಿ ನವಭಾರತವನ್ನು ಮತ್ತಷ್ಟು ಭದ್ರಗೊಳಿಸುವ ನಮ್ಮ ಕನಸಿಗೆ ಬಲ ಸಿಗಲಿ ಎಂಬುದು ನನ್ನ ಪ್ರಾರ್ಥನೆಯಾಗಿದೆ.

ಮಗದೊಮ್ಮೆ ನಿಮಗೆ ಸ್ವಾತಂತ್ರ್ಯದ ಅಮೃತ ಘಳಿಗೆಯ ಶುಭಾಶಯಗಳು. ಪ್ರತಿಯೊಬ್ಬರನ್ನೂ ಭಾರತಾಂಬೆ ಅಪ್ಪಿಕೊಳ್ಳಲಿ. ನಿಮ್ಮೆಲ್ಲರ ಮೇಲೆ ದೇವರ ಆಶೀರ್ವಾದಗಳನ್ನು ಬೇಡುತ್ತೇನೆ.

ಜೈ ಹಿಂದ್.

ಇತ್ತೀಚಿನ ಸುದ್ದಿ

ಜಾಹೀರಾತು