ಇತ್ತೀಚಿನ ಸುದ್ದಿ
ಸುರತ್ಕಲ್: ಕಾಂಗ್ರೆಸ್ ಸರಕಾರದ ಜನ ವಿರೋಧಿ ನೀತಿಗೆ ಖಂಡಿಸಿ ಶಾಸಕ ಡಾ. ಭರತ್ ಶೆಟ್ಟಿ ನೇತೃತ್ವದಲ್ಲಿ ಬಿಜೆಪಿ ಪ್ರತಿಭಟನೆ
23/06/2025, 14:23

ಸುರತ್ಕಲ್(reporterkarnataka.com): ಬೆಲೆಯೇರಿಕೆ, ಭ್ರಷ್ಟಾಚಾರದಿಂದ ಜನರು ಬದುಕಲು ಸಾಧ್ಯವಾಗದಂತಹ ಸ್ಥಿತಿ ರಾಜ್ಯದಲ್ಲಿದೆ. ಸ್ವತಃ ಕಾಂಗ್ರೆಸ್ ಶಾಸಕರೇ ಅನುದಾನ ಸಿಗದೇ ಪರದಾಡುತ್ತಿದ್ದು ಬಿಜೆಪಿ ಶಾಸಕರಿಗೆ ಪ್ರತಿಭಟನೆ ಮಾಡುವ ಮೂಲಕ ಸರಕಾರಕ್ಕೆ ಬಿಸಿ ಮುಟ್ಟುವಂತೆ ಮಾಡಿ ಎಂದು ಹೇಳುವಷ್ಟರ ಮಟ್ಟಿಗೆ ಅನುದಾನ ನೀಡಿದ ಈ ಸರಕಾರದಿಂದಾಗಿ ರಾಜ್ಯದ ಅಭಿವೃದ್ಧಿ ಹೀನಾಯ ಸ್ಥಿತಿಗೆ ಬಂದು ಮುಟ್ಟಿದೆ ಎಂದು
ಮಂಗಳೂರು ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಸರಕಾರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸರಕಾರದ ಜನ ವಿರೋಧಿ ನೀತಿಯನ್ನು ಖಂಡಿಸಿ ಭಾರತೀಯ ಜನತಾ ಪಕ್ಷ ಸುರತ್ಕಲ್ ಮಹಾನಗರ ಪಾಲಿಕೆಯ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.
ರಾಜ್ಯದಲ್ಲಿ ಗ್ರಾಮದಿಂದ ಹಿಡಿದು ಪುರಸಭೆ ಮಹಾನಗರ ಪಾಲಿಕೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಎಲ್ಲಾ ಕಡೆ ಸ್ಥಳೀಯ ಆಡಳಿತದ ಅಧಿಕಾರವನ್ನು ಮೊಟಕು ಗೊಳಿಸಿ ಎಲ್ಲಾ ಅಜೆಂಡಗಳು ಬೆಂಗಳೂರಿನಲ್ಲಿ ಆಗುವಂತೆ ಮಾಡಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ನೀತಿಗೆಟ್ಟ ಈ ಸರಕಾರ ಬಹಿರಂಗವಾಗಿಯೇ ಮಾಡುತ್ತಿದೆ. ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡದ ರಾಜ್ಯವನ್ನ ಹಿಂದಕ್ಕೆ ತಳ್ಳಿದೆ. ಇನ್ನೊಂದೆಡೆ ಜನರಿಂದ ಹೆಚ್ಚಿನ ತೆರಿಗೆ, ಬೆಲೆ ಹೆಚ್ಚಳ ಮಾಡುವ ಮೂಲಕ ಶೋಷಣೆ ಮಾಡುತ್ತಿದೆ ಎಂದು ಶಾಸಕ ಡಾ. ಭರತ್ ಶೆಟ್ಟಿ ಅಕ್ರೋಶ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತ ಇಲಾಖೆಯಿಂದ ಸರಕಾರ ಇತ್ತೀಚೆಗೆ ಪ್ರತಿ ಕ್ಷೇತ್ರಕ್ಕೆ ಏಳೆಂಟು ಕೋಟಿ ರೂಪಾಯಿಗಳಷ್ಟು ಅನುದಾನ ಬಿಡುಗಡೆ ಮಾಡಿದೆ. ಹಿಂದುಗಳ ಪೂಜಿಸುವ ಶ್ರದ್ಧಾ ಕೇಂದ್ರಗಳಿಗೆ 25 ಲಕ್ಷ ರೂಪಾಯಿ ಬಿಡುಗಡೆ ಮಾಡುವ ಭರವಸೆ ನೀಡಿದ್ದ ಸರಕಾರ 25000 ನೀಡಿ ಕೈ ತೊಳೆದುಕೊಂಡಿದೆ. ಬಹು ಸಂಖ್ಯಾತ ಹಿಂದೂಗಳು ಈ ಸರಕಾರದ ಎದುರು ಭಿಕ್ಷಾ ಪಾತ್ರೆ ಹಿಡಿಯುವಂತೆ ಮಾಡಿ ಹಿಂದುಗಳನ್ನು ಹೀನಾಯವಾಗಿ ನಡೆಸಿಕೊಳ್ಳುತ್ತಿದೆ ಎಂದು ಕಿಡಿಕಾರಿದರು.
ಮಾತೆತ್ತಿದರೆ ಕೋಮುವಾದದ ನೆಪ ಹೇಳಿ ಪೊಲೀಸರ ಮೂಲಕ ಕೇಸು ದಾಖಲಿಸಿ ನಮ್ಮನ್ನು ಹತ್ತಿಕ್ಕುವ ಕೆಲಸವನ್ನ ಮಾಡುವ ಷಡ್ಯಂತ್ರವನ್ನು ಸರಕಾರ ಮಾಡುತ್ತಿದ್ದು ಇದಕ್ಕೆ ಎದೆಗೊಂಡುವ ಪ್ರಶ್ನೆಯೇ ಇಲ್ಲ. ಇನ್ನು ಎರಡು ಕೇಸ್ ಹಾಕಿದರು ಬಿಜೆಪಿ ಜನಪರ ಹೋರಾಟದಿಂದ ಹಿಂದೆ ಸರಿಯುವುದಿಲ್ಲ ಎಂದು ಘೋಷಿಸಿದರು.
ಬಿಜೆಪಿ ಸರಕಾರ ಇದ್ದಾಗ ಕೋವಿಡ್ ಸಂದರ್ಭವನ್ನು ಹೊರತುಪಡಿಸಿ ಕೇವಲ ಎರಡು ವರ್ಷದ ಅಧಿಕಾರ ಅವಧಿಗೆ 2,000 ಕೋಟಿ ರೂಪಾಯಿಗಳಿಂದ ಹೆಚ್ಚು ಅನುದಾನವನ್ನ ಸರಕಾರ ನೀಡಿದೆ ಅಭಿವೃದ್ಧಿಯನ್ನು ಮಾಡಲಾಗಿದೆ.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದು ಎಷ್ಟು ವರ್ಷವಾದರೂ ಅನುದಾನ ನೀಡದೆ ಸತಾಯಿಸುತ್ತಿದೆ. ಸ್ವತಹ ಕಾಂಗ್ರೆಸ್ ಶಾಸಕರುಗಳೇ ವಿಪಕ್ಷದವರು ಪ್ರತಿಭಟನೆ ಮಾಡಿ ಅನುದಾನ ದೊರಕಿಸಿಕೊಡಿ ಎನ್ನುವಂತ ಸ್ಥಿತಿಗೆ ತಲುಪಿದ್ದೇವೆ ಎಂದು ಹೇಳಿದರು.
ಭಾರತೀಯ ಜನತಾ ಪಕ್ಷ ಸರಕಾರವಿದ್ದಾಗ 100 ಮನೆಗಳನ್ನ ಬಡವರ್ಗಕ್ಕೆ ವಿತರಣೆ ಮಾಡಿದ್ದೇವೆ. ಈ ಸರಕಾರಕ್ಕೆ ಒಂದೇ ಒಂದು ಮನೆಯನ್ನ ಹಸ್ತಾಂತರಿಸಲು ಸಾಧ್ಯವಾಗಿಲ್ಲ.
ಬಸ್ಸಿನ ದರ ಏರಿಕೆ, ಭೂ ನೊಂದಣಿಯಲ್ಲಿ ದರ ಏರಿಕೆ, ಹೀಗೆ ಪ್ರತಿಯೊಂದರಲ್ಲಿ ಯುದ್ಧ ಏರಿಕೆ ಮಾಡಿ ಜನರು ಬಸವಳಿಯುವಂತೆ ಮಾಡಿದೆ.
94 ಸಿಹಿ ಹಕ್ಕುಪತ್ರಗಳಿಗೆ ತಡೆ,ಮನೆ ನಂಬರ್ ನೀಡಲು ತಕರಾರು, ಬಡವರ್ಗಕ್ಕೆ ಮನೆ ಕಟ್ಟಲು ಮರಳು ಕೆಂಪುಕಲ್ಲು ಮತ್ತಿತರ ಸೌಲಭ್ಯಗಳಿಗೆ ಅಡೆತಡೆಗಳನ್ನು ಮಾಡುವ ಮೂಲಕ ನೆಮ್ಮದಿಯ ಜೀವನಕ್ಕೆ ಕುತ್ತು ತಂದಿದೆ. ಇಂತಹ ಸರ್ಕಾರದ ವಿರುದ್ಧ ಜನರೇ ಇದೀಗ ಬಂಡೇಳುತ್ತಿದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಮಂತ್ರಿ ಮಾಗದವರಿಗೆ ಸರಿಯಾದ ಪಾಠವನ್ನೇ ಕಲಿಸಲಿದ್ದಾರೆ ಎಂದು ಹೇಳಿದರು.