ಇತ್ತೀಚಿನ ಸುದ್ದಿ
ಪ್ರಯತ್ನ, ಹೋರಾಟಗಳಿಂದ ಯಶಸ್ಸು ಸಾಧ್ಯ: ವಿಧಾನ ಪರಿಷತ್ ಸದಸ್ಯ ಐವನ್ ಅಭಿಮತ
17/10/2025, 20:08

ಮಂಗಳೂರು(reporterkarnataka.com): ಕೆಲಸಗಳು ಸುಲಭದಲ್ಲಿ ಆಗೋದಿಲ್ಲ. ಇದಕ್ಕೆ ನಿರಂತರವಾದ ಹೋರಾಟ, ಪ್ರಯತ್ನಗಳ ಜತೆಗೆ ಎಲ್ಲರ ಒಗ್ಗಟ್ಟುತನ ಇದ್ದಾಗ ಮಾತ್ರ ಯಶಸ್ಸು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಹೇಳಿದರು.
ಅವರು ಶುಕ್ರವಾರ ನಗರದ ಎಸ್ಸಿಡಿಸಿಸಿ ಬ್ಯಾಂಕ್ನ ಸಭಾಂಗಣದಲ್ಲಿ ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳೂರು ಜು.1,2022ರಿಂದ ಜು.31,2024ರ ಅವಧಿಯಲ್ಲಿ ನಿವೃತ್ತರಾದ ಸರಕಾರಿ ನೌಕರರ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
*ಸಿಎಂ ಮನೆ ಮುಂದೆ ಧರಣಿಗೆ ಚಿಂತನೆ:* ಕರ್ನಾಟಕ ನಿವೃತ್ತ ನೌಕರರ ವೇದಿಕೆ ಕೇಂದ್ರ ಸಮಿತಿ ಬೆಂಗಳೂರು ಇದರ ರಾಜ್ಯ ಮಹಾಪ್ರಧಾನ ಸಂಚಾಲಕ ಡಾ.ಎಂ.ಪಿ.ಎಂ. ಷಣ್ಮುಖಯ್ಯ ಮಾತನಾಡಿ, ಇದು ಸರಕಾರ ಮಾಡಿದ ಅನ್ಯಾಯವಲ್ಲ. ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಬೆಂಗಳೂರು ಅಧ್ಯಕ್ಷ ಸಿ.ಎಚ್.ಷಡಕ್ಷರಿ ಮತ್ತು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ಸಂಘದ ಅಧ್ಯಕ್ಷ ಡಾ.ಎಲ್. ಭೈರಪ್ಪ ಅವರು 7ನೇ ವೇತನ ಆಯೋಗದ ವರದಿ ಒಪ್ಪಿ ಮಂಜೂರು ಮಾಡಿದ ಮಹಾತ್ಮರು. ಅವರಿಂದ ನಾವು ಹಿರಿಯ ನಾಗರಿಕರು ಬೀದಿಗೆ ಇಳಿದು ಪ್ರತಿಭಟನೆ ಮಾಡಬೇಕಾಗಿ ಬಂತು. ನವೆಂಬರ್ನಲ್ಲಿ ಮೈಸೂರಿನ ಸಿಎಂ ಮನೆ ಮುಂದೆ ನಿವೃತ್ತ ಸರಕಾರಿ ನೌಕರರಿಂದ ಧರಣಿ ಮಾಡುವ ಜತೆಗೆ ಬೆಳಗಾವಿಯಲ್ಲಿ ಡಿಸೆಂಬರ್ನಲ್ಲಿ ನಡೆಯುವ ಚಳಿಗಾಲ ಅಧಿವೇಶನಕ್ಕೆ ಪಾದಯಾತ್ರೆಯನ್ನು ಕೈಗೊಳ್ಳುವ ಕಾರ್ಯ ಮಾಡಲಾಗುತ್ತದೆ ಎಂದರು.
*ಪರಿಷ್ಕೃತ ಆದೇಶ ನೀಡಿ:* ದಕ್ಷಿಣ ಕನ್ನಡ ಜಿಲ್ಲಾ ನಿವೃತ್ತ ನೌಕರರ ವೇದಿಕೆ ಮಂಗಳೂರು ಇದರ ಜಿಲ್ಲಾ ಸಂಚಾಲಕ ಸಿರಿಲ್ ರಾಬರ್ಟ್ ಡಿಸೋಜ ಮಾತನಾಡಿ, ಸರಿಸುಮಾರು 25-40 ವರ್ಷಗಳ ಕಾಲ ಸರಕಾರಿಯ ನಾನಾ ಇಲಾಖೆಯಲ್ಲಿ ಸೇವೆ ಸಲ್ಲಿಸಿ ವಯೋನಿವೃತ್ತರಾದಂತಹ ನೌಕರರಿಗೆ ಸಂಧ್ಯಾಕಾಲದಲ್ಲಿ ಆರ್ಥಿಕವಾಗಿ ವಂಚಿತರನ್ನಾಗಿ ಮಾಡುವುದು ಸರಿಯಲ್ಲö. ಪ್ರಸ್ತುತ ಕರ್ತವ್ಯ ನಿರ್ವಹಿಸುತ್ತಿರುವ ನೌಕರರು ಪೂರ್ಣ ಪ್ರಮಾಣದ ವೇತನ ಪಡೆಯುತ್ತಿದ್ದಾರೆ. ನಿವೃತ್ತ ನೌಕರರ ಮೇಲೆ ಯಾಕೆ ಈ ತಾರತಮ್ಯ ಮಾಡಲಾಗುತ್ತಿದೆ ಎಂದರು.
ಈ ಸಂದರ್ಭ ರಾಜ್ಯ ಸಂಚಾಲಕರಾದ ಅಶೋಕ ಎಂ. ಸಜ್ಜನ, ಶಂಕರಪ್ಪ ಲಮಾಣಿ, ಎಸ್.ಬಿ. ಬಿಸೇರೊಟ್ಟಿö, ಮಹಾಂತೇಶ ವಿ. ಹಿರೇಮಠ ಸೇರಿದಂತೆ ರಾಜ್ಯದ 31 ಜಿಲ್ಲೆಗಳಿಂದ ಬಂದ ಪ್ರಧಾನ ಸಂಚಾಲಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಯಾದಗಿರಿಯ ಬೀಮಣ್ಣ ಪ್ರಾರ್ಥಿಸಿದರು. ವಿಜಯನಗರದ ಹುಳು ಬಸಪ್ಪ ವಂದಿಸಿದರು. ಮಂಡ್ಯದ ನಾರಾಯಣ ಸ್ವಾಮಿ ಕರ್ಯಕ್ರಮ ನಿರೂಪಿಸಿದರು.
ನಿವೃತ್ತ ಸರಕಾರಿ ನೌಕರರ ಸಮಸ್ಯೆಗೆ ಪರಿಹಾರ ಕೊಡಿಸಲು ಆಗ್ರಹ
ಜು.1, 2022ರಿಂದ ಜು.31,2024 ನೌಕರರಿಗೆ 7 ನೇ ವೇತನ ಆಯೋಗದ ಶಿಫಾರಸ್ಸಿನಂತೆ ಕಾಲ್ಪನಿಕವಾಗಿ ವೇತನ ಪರಿಷ್ಕರಣೆ ಮಾಡಿ ಆದೇಶ ಮಾಡಲಾಗಿದೆ. ಆದರೆ ನಗದು ರೂಪದಲ್ಲಿ ಆ.1, 2024 ರಿಂದ ಅನ್ವಯವಾಗುವಂತೆ ಆದೇಶ ಮಾಡಿರುವುದರಿಂದ ಈ ಅವಧಿಯಲ್ಲಿ ನಿವೃತ್ತರಾದ ನೌಕರರಿಗೆ ನಿವೃತ್ತಿ ಪಿಂಚಣಿ ಹೊಸ ವೇತನದಂತೆ ನಿಗದಿ ಪಡಿಸಲು ಆದೇಶ ಮಾಡಿರುವುದರಿಂದ ಡಿ.ಸಿ.ಆರ್.ಜಿ.. ಕಮ್ಯುಟೇಶನ್, ಇ.ಎಲï. ನಗದೀಕರಣ ಸೌಲಭ್ಯಗಳನ್ನು 6 ನೇ ವೇತನದ ಆಯೋಗದ ಅಡಿ ಪಡೆಯುತ್ತಿದ್ದ ಮೂಲ ವೇತನದ ಮೇಲೆ ಪಾವತಿಸುವುದರಿಂದ ಸುಮಾರು 26,500 ನಿವೃತ್ತ ನೌಕರರು ಆರ್ಥಿಕವಾಗಿ ವಂಚಿತರಾಗುತ್ತಾರೆ ಎನ್ನುವುದು ನಿವೃತ್ತ ಸರಕಾರಿ ನೌಕರರ ಆಳಲು ಇದಕ್ಕೆ ರಾಜ್ಯದ ಸಿಎಂ ಪರಿಹಾರ ಕೊಡಬೇಕು ಎನ್ನುವುದು ಇವರ ಆಗ್ರಹ.