ಇತ್ತೀಚಿನ ಸುದ್ದಿ
ನಿವೃತ್ತ ಸರಕಾರಿ ನೌಕರರ ವೇತನ ನಷ್ಟ ಬೇಡಿಕೆ: ನಿಯೋಗದಿಂದ ಮುಖ್ಯಮಂತ್ರಿ ಭೇಟಿ: ಸಿಎಂ ಸಕರಾತ್ಮಕ ಸ್ಪಂದನೆ
23/04/2025, 21:43

ಮಂಗಳೂರು(reporterkarnataka.com): ಕರ್ನಾಟಕ ನಿವೃತ್ತ ಸರಕಾರಿ ನೌಕರರ ವೇದಿಕೆ ಕಳೆದ ಕೆಲವು ತಿಂಗಳುಗಳಿಂದ ತಮ್ಮ ಬೇಡಿಕೆಯ ಈಡೇರಿಸಲು ಹೋರಾಟ ನಡೆಸುತ್ತಿದ್ದು, ಇತ್ತೀಚೆಗೆ ಎಂಎಲ್ಸಿ ಐವನ್ ಡಿಸೋಜ ಅವರ ಜತೆಗೆ ವೇದಿಕೆಯ ಪದಾಧಿಕಾರಿಗಳು ಬೆಂಗಳೂರಿನ ಮುಖ್ಯಮಂತ್ರಿ ಅವರ ಗೃಹಕಚೇರಿ ಕಾವೇರಿಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.
7ನೇ ವೇತನ ಆಯೋಗದಲ್ಲಿ ಜು.1,2022ರಿಂದ ಜು.31,2024ರ ಅವಧಿಯಲ್ಲಿ ನಿವೃತ್ತರಾದ ಕರ್ನಾಟಕ ರಾಜ್ಯ ಸರಕಾರಿ ನೌಕರರಿಗೆ ಡಿ.ಸಿ.ಆರ್.ಜಿ. ಕಮ್ಯೂಟೇಶನ್ ಹಾಗೂ ಗಳಿಕೆ ರಜೆ ನಗದೀಕರಣಗಳನ್ನು ಆರನೇ ವೇತನ ಆಯೋಗದ ಅನ್ವಯ ನೀಡಿದ್ದು, ಇದರಿಂದ ನೌಕರರಿಗೆ ಆರ್ಥಿಕ ನಷ್ಟ ಉಂಟಾಗಿರುವುದನ್ನು ಗಮನಕ್ಕೆ ತರಲಾಯಿತು. ಮುಖ್ಯಮಂತ್ರಿ ಯವರು ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ನಿವೃತ್ತ ಸರಕರಿ ನೌಕರರ ವೇದಿಕೆಯ ರಾಜ್ಯ ಮಹಾಪ್ರಧಾನ ಸಂಚಾಲಕ ಎಂ.ಪಿ.ಎಂ.ಷಣ್ಮುಗಯ್ಯ, ಸಂಚಾಲಕರಾದ ಸ್ಟ್ಯಾನಿ ತಾವ್ರೋ, ಸುಜಾತ, ಜಲಜ,ರಂಗಣ್ಣ, ಸಿರಿಲ್ ರಾಬರ್ಟ್ ಡಿಸೋಜ, ಜಗದೀಶ್ ರಾವ್, ಮುಬಾರಕ್, ಮಂಜುಳಾರಾಣಿ ಹಾಗೂ ಮಹೇಶ್ ಉಪಸ್ಥಿತರಿದ್ದರು.
ಎಂಎಲ್ಸಿ ಐವನ್ ಡಿಸೋಜ ಅವರು ಕರ್ನಾಟಕ ರಾಜ್ಯ ನಿವೃತ್ತ ಸರಕಾರಿ ನೌಕರರ ವೇದಿಕೆಯ ಬೇಡಿಕೆ ಈಡೇರಿಸುವ ಕೆಲಸದಲ್ಲಿ ಸಾಕಷ್ಟು ಮುತುವರ್ಜಿ ವಹಿಸಿದ್ದು ವೇದಿಕೆಯ ಪದಾಧಿಕಾರಿಗಳು ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದೆ ನಿರಂತರವಾಗಿ ಸಿಎಂ ಅವರ ಗಮನಕ್ಕೆ ವಿಚಾರವನ್ನು ತರುವ ಮೂಲಕ ಬೇಡಿಕೆ ಈಡೇರಿಸಲು ಸತತ ಪ್ರಯತ್ನ ಪಡಲಾಗುವುದು ಎಂದು ಸಂಚಾಲಕ ಸ್ಟ್ಯಾನಿ ತಾವ್ರೋ ಮಾಹಿತಿ ನೀಡಿದ್ದಾರೆ.