ಇತ್ತೀಚಿನ ಸುದ್ದಿ
ರಾಷ್ಟ್ರೀಯ ಹೆದ್ದಾರಿಯಿಂದ ಮೋರ್ಗನ್ ಗೇಟ್ ವರೆಗಿನ ರಸ್ತೆ ಅಗಲೀಕರಣ ತ್ವರಿತ: ಶಾಸಕ ಕಾಮತ್ ಸೂಚನೆ
16/11/2022, 21:53

ಮಂಗಳೂರು(reporterkarnataka.com): ರಾಷ್ಟ್ರೀಯ ಹೆದ್ದಾರಿಯಿಂದ ಮೋರ್ಗನ್ ಗೇಟ್ ವರೆಗಿನ ರಸ್ತೆ ಅಗಲೀಕರಣ ಹಾಗೂ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗುತ್ತಿದೆ. ವಾಣಿಜ್ಯೋದ್ಯಮ ದೃಷ್ಟಿಯಿಂದ ಈ ರಸ್ತೆ ಪ್ರಾಮುಖ್ಯತೆ ಪಡೆಯಲಿರುವುದರಿಂದ ಅತೀ ಶೀಘ್ರದಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಶಾಸಕ ವೇದವ್ಯಾಸ್ ಕಾಮತ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಕಾಮತ್, ಜೆಪ್ಪು ರಾಷ್ಟ್ರೀಯ ಹೆದ್ದಾರಿಯಿಂದ ಮೋರ್ಗನ್ಸ್ ಗೇಟ್, ಮಂಗಳದೇವಿ ಮೂಲಕ ನಗರವನ್ನು ಸಂಪರ್ಕಿಸುವ ರಸ್ತೆಯ ಉನ್ನತಾಕರಣ ಯೋಜನೆಗಾಗಿ ಸ್ಮಾರ್ಟ್ ಸಿಟಿ ಯೋಜನೆಯಿಂದ ಸರಿಸುಮಾರು 50 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ. ಪ್ರಮುಖವಾಗಿ ಬಂದರು ಪ್ರದೇಶದಿಂದ ನೇರವಾಗಿ ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕಿಸುವ ರಸ್ತೆಯಾಗಿರುವ ಕಾರಣ ರಸ್ತೆಯ ಅಭಿವೃದ್ಧಿಗೆ ಪೂರಕವಾಗಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಹಿಂದೆ ರೈಲ್ವೆ ಗೇಟ್ ಮೂಲಕ ಸಾಗುತ್ತಿದ್ದ ಈ ರಸ್ತೆಯಲ್ಲಿ ರೈಲ್ವೇ ಕ್ರಾಸಿಂಗ್, ವಾಹನ ದಟ್ಟಣೆಯಿಂದ ಸಮಸ್ಯೆಯಾಗುತಿದ್ದ ಕಾರಣ, ರಸ್ತೆಯ ಪಥ ಬದಲಾವಣೆ ಮಾಡಿ ಮಹಾಕಾಳಿ ಪಡ್ಪುವಿನಲ್ಲಿ ಆರ್.ಯು.ಬಿ ಮುಖಾಂತರ ಶೆಟ್ಟಿಬೆಟ್ಟು ಮೂಲಕ ಮಾರ್ಗನ್ ಗೇಟ್ ಸಂಪರ್ಕಿಸುವ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. 4.50 ಮೀಟರ್ ಅಗಲವಿದ್ದ ರಸ್ತೆಯನ್ನು 18 ಮೀಟರ್ ಅಗಲಗೊಳಿಸಿ 4 ಪಥದ ಕಾಂಕ್ರೀಟ್ ರಸ್ತೆ, ಮೀಡಿಯನ್, ರಸ್ತೆ ದಾರಿದೀಪಗಳು, ರಸ್ತೆಯ ಇಕ್ಕೆಲಗಳಲ್ಲಿ ಆರ್.ಸಿ.ಸಿ ಮಳೊ ನೀರು ಚರಂಡಿ, ತಗ್ಗು ಪ್ರದೇಶಗಳಲ್ಲಿ ಆರ್.ಸಿ.ಸಿ ತಡೆಗೋಡೆ ರಚನೆ ಸೇರಿದಂತೆ ಘನ ವಾಗನ ಸಂಚಾರಕ್ಕೂ ಅನುಕೂಲವಾಗುವಂತೆ ನೂತನ ರಸ್ತೆ ನಿರ್ಮಾಣವಾಗುತ್ತಿದೆ ಎಂದರು.
ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ನಗರದ ಚಿತ್ರಣ ಸಾಕಷ್ಟು ಬದಲಾಗಿದೆ. ಪ್ರಮುಖ ರಸ್ತೆಗಳ ಅಭಿವೃದ್ಧಿಯ ಜೊತೆಗೆ ಇಡೀ ನಗರವನ್ನು ಹಂತ ಹಂತವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ. ಬಹುತೇಕ ರಸ್ತೆಗಳ ಅಭಿವೃದ್ಧಿ ಹಾಗೂ ಅಗಲೀಕರಣ, ಒಳ ರಸ್ತೆಗಳ ಅಗಲೀಕರಣ ಸೇರಿದಂತೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ರಸ್ತೆಗಳ ಕಾಮಗಾರಿಗಳನ್ನು ನನ್ನ ಅವಧಿಯಲ್ಲಿ ಪೂರ್ಣಗೊಳಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಇದೆಲ್ಲದರ ಪಲಿತಾಂಶ ಮುಂದಿನ ಕೆಲ ವರ್ಷಗಳಲ್ಲಿ ಕಾಣುತ್ತದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಈ ಸಂದರ್ಭದಲ್ಲಿ ಸ್ಥಳೀಯ ಕಾರ್ಪೋರೇಟರ್ ಭಾನುಮತಿ, ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳಾದ ಲಿಂಗೇಗೌಡ, ಅರುಣ್ ಪ್ರಭ, ಮುಖಂಡರಾದ ದೀಪಕ್ ಪೈ, ಶಿವಪ್ರಸಾದ್, ಉಮಾನಾಥ್ ಶೆಟ್ಟಿಗಾರ್, ಪ್ರಶಾಂತ್, ದೇವದಾಸ್ ಶೆಟ್ಟಿ, ಮುರಳಿ ಕೃಷ್ಣ,ಭವಾನಿ ಶಂಕರ್, ಜೀತೇಂದ್ರ, ಸುಬ್ರಹ್ಮಣ್ಯ ರಾವ್ ಮುಂತಾದವರು ಉಪಸ್ಥಿತರಿದ್ದರು.