ಇತ್ತೀಚಿನ ಸುದ್ದಿ
ಪ್ರವೀಣ್ ಅಂತಿಮ ವಿಧಿ: ಹೊಸ ಮನೆ ಕಟ್ಟಲು ಸಮತಟ್ಟು ಮಾಡಿದ ಜಾಗದಲ್ಲೇ ಮನೆ ಮಗನಿಗೆ ಅಂತ್ಯಸಂಸ್ಕಾರ!!
27/07/2022, 19:53

ಬೆಳ್ಳಾರೆ(reporterkarnataka.com): ದುಷ್ಕರ್ಮಿಗಳಿಂದ ಹತ್ಯೆಗೀಡಾದ ಬಿಜೆಪಿ ಯುವ ಮೋರ್ಚಾ ಜಿಲ್ಲಾ ಮುಖಂಡ ಪ್ರವೀಣ್ ನೆಟ್ಟಾರು ಅವರ ಅಂತ್ಯಸಂಸ್ಕಾರ ಬೆಳ್ಳಾರೆಯ ಅವರ ಹುಟ್ಟೂರಿನಲ್ಲಿ ಬುಧವಾರ ನಡೆಯಿತು. ಹೊಸ ಮನೆ ಕಟ್ಟಲೆಂದು ಸಮತಟ್ಟು ಮಾಡಲಾದ ಜಾಗದಲ್ಲಿ ಮನೆಯ ಏಕೈಕ ಪುತ್ರನ ಅಂತಿಮ ವಿಧಿ ನೆರವೇರಿಸಲಾಯಿತು.
ದುಃಖತಪ್ತ ಸಾವಿರಾರು ಮಂದಿಯ ಸಮ್ಮುಖದಲ್ಲಿ ಪ್ರವೀಣ್ ಅವರ ಪಾರ್ಥಿವ ಶರೀರದ ಚಿತೆಗೆ ಕುಟುಂಬದ ಸದಸ್ಯರು ಅಗ್ನಿಸ್ಪರ್ಶ ಮಾಡಿದರು. ಬಂಧು ಮಿತ್ರರ ಆಕ್ರಂದನ ಮುಗಿಲು ಮುಟ್ಟಿತ್ತು.
ಪ್ರವೀಣ್ ಅವರು ನಿನ್ನೆ ರಾತ್ರಿ ಸುಮಾರು 8.30ರ ವೇಳೆಗೆ ತನ್ನ ಚಿಕನ್ ಸೆಂಟರ್ ಗೆ ಬೀಗ ಹಾಕಿ ಮನೆಗೆ ಹೋಗಲು ಸಿದ್ಧತೆ ನಡೆಸುತ್ತಿದ್ದಾಗ ಬೈಕ್ ನಲ್ಲಿ ಬಂದ ಮುಸುಕುಧಾರಿ ಹಂತಕರು ಹರಿತವಾದ ಆಯುಧದಿಂದ ದಾಳಿ ನಡೆಸಿದ್ದರು. ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರೂ ಅವರು ಕೊನೆಯುಸಿರೆಳೆದರು.
ಬಿಜೆಪಿ ಯುವ ಮುಖಂಡನ ಹತ್ಯೆಯ ಸುದ್ದಿ ಹಬ್ಬುತ್ತಿದ್ದಂತೆ ಆಕ್ರೋಶಿತರಾದ ಹಿಂದೂ ಸಂಘಟನೆಯ ಕಾರ್ಯಕರ್ತರು ಹಾಗೂ ಕುಟುಂಬಸ್ಥರು ಜಿಲ್ಲಾಧಿಕಾರಿ ಬರಬೇಕೆಂದು ಪಟ್ಟು ಹಿಡಿದು ಮೃತದೇಹ ತೆಗೆಯಲು ಬಿಡದೇ ಪ್ರತಿಭಟನೆ ನಡೆಸಿದರು. ನಂತರ ರಾತ್ರಿ 1.30ಕ್ಕೆ ಜಿಲ್ಲಾಧಿಕಾರಿ ಪುತ್ತೂರಿಗೆ ಭೇಟಿ ನೀಡಿ, ದುಷ್ಕರ್ಮಿಗಳ ಪತ್ತೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಕೈಬಿಡಲಾಯಿತು.
ಆಸ್ಪತ್ರೆಯಲ್ಲಿ ಪ್ರವೀಣ್ ನೆಟ್ಟಾರ್ ಮೃತಪಟ್ಟಿರುವುದು ಘೋಷಣೆಯಾಗುತ್ತಲೇ ಪುತ್ತೂರು ಸುಳ್ಯ ಬೆಳ್ಳಾರೆಯಲ್ಲಿ ಪರಿಸ್ಥಿತಿ ಬಿಗುವಿನಿಂದ ಕೂಡಿತ್ತು.
ಇಂದು ಬೆಳಗ್ಗೆ ಪ್ರವೀಣ್ ಅವರ ಪಾರ್ಥಿವ ಶರೀರವನ್ನು ಪುತ್ತೂರು ನಗರದಿಂದ ಮೆರವಣಿಗೆಯಲ್ಲಿ ಹೊರಟು ದರ್ಬೆ, ಸವಣೂರು ಕಾಣಿಯೂರು, ನಿಂತಿಕಲ್ಲು ಮೂಲಕ ಬೆಳ್ಳಾರೆಗೆ ಕೊಂಡೊಯ್ಯಲಾಯಿತು. ಪುತ್ತೂರು, ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ, ವಾಹನ ಸಂಚಾರ ನಿಲ್ಲಿಸಿ ಬಂದ್ ನಡೆಸಲಾಯಿತು.
ಜಿಲ್ಲಾ ಪೊಲೀಸ್ ಅಧೀಕ್ಷಕ ಋಷಿಕೇಶ್ ಭಗವಾನ್ ಸೋನಾವಣೆ, ಡಿವೈಎಸ್ಪಿ ಡಾ.ಗಾನಾ ಪಿ.ಕುಮಾರ್, ಗ್ರಾಮಾಂತರ ವೃತ್ತ ನಿರೀಕ್ಷಕ ಉಮೇಶ್ ಉಪ್ಪಳಿಕೆ ಹಾಗೂ ಸುಳ್ಯ, ಬೆಳ್ಳಾರೆ ಪೊಲೀಸರು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ.