ಇತ್ತೀಚಿನ ಸುದ್ದಿ
ನೂತನ ತಂತ್ರಜ್ಞಾನ, ನೂತನ ಯಂತ್ರೋಪಕರಣವಿದ್ದರೂ ಏನು ಪ್ರಯೋಜನ?: ತುಂಬೆ ಬಳಿ ಹೈವೇಯಲ್ಲೇ ಇದೆ ಎಮ್ಮೆ ಈಜುವ ಕೊಳ!
12/06/2024, 16:35

ಯಾದವ ಕುಲಾಲ್ ಅಗ್ರಬೈಲು ಬಿ.ಸಿ.ರೋಡ್
info.reporterkarnataka@gmail.com
ನೂತನ ತಂತ್ರಜ್ಞಾನ, ನೂತನ ಯಂತ್ರೋಪಕರಣಗಳು ಇರುವುದರಿಂದ ಬೆಟ್ಟ ಗುಡ್ಡಗಳನ್ನು ತೆಗೆದು ರಸ್ತೆ ಮಾಡುತ್ತಾರೆ. ಅಂಡರ್ಪಾಸ್ ರಸ್ತೆ ಮಾಡುತ್ತಾರೆ. ಫ್ಲೈವೋವರ್ ರಸ್ತೆ ಮಾಡುತ್ತಾರೆ. ಈಗ ಆಗದ ಕೆಲಸ ಇಲ್ಲ. ಆದರೆ ಇಲ್ಲೊಂದು ರಸ್ತೆ ಬದಿಯ ಬಂಡೆ ಕಲ್ಲನ್ನು ತೆಗೆಯದೇ ನೀರು ಹಾದು ಹೋಗುವ ತೋಡು ನಿರ್ಮಿಸಿದ್ದು, ಈಗ ಒಂದು ಮಳೆ ಬಂದ ಕೂಡಲೇ, ರಾಷ್ಟ್ರೀಯ ಹೆದ್ದಾರಿ ರಸ್ತೆಯೇ ಕೆರೆಯಂತೆ ನಿರ್ಮಾಣವಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಮಂಗಳೂರು – ಬೆಂಗಳೂರು ರಸ್ತೆ ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ ಪಂಚಾಯತ್ನ ಬಳಿ ಹಾದು ಹೋಗಿದ್ದು, ತುಂಬೆಯ ಖಾಸಗಿ ಕಾಲೇಜಿನ ಪಕ್ಕದಲೇ ದೊಡ್ಡ ತಿರುವಿನಲ್ಲಿ ಹೆದ್ದಾರಿ ರಸ್ತೆಯಲ್ಲೇ ಕೆರೆ ನಿರ್ಮಾಣವಾಗಿದೆ.
*ಅಪಾಯಕಾರಿ ತಿರುವು:* ಒಂದು ಕಡೆ ನೀರು ಮತ್ತೊಂದು ಕಡೆ ತಿರುವು ಹಾಗಾಗಿ ಈ ತಿರುವು ತುಂಬಾ ಅಪಾಯಕಾರಿಯಾಗಿದೆ. ಕೆಲವೇ ದಿನಗಳ ಹಿಂದೆ ಈ ತಿರುವಿನಲ್ಲಿ ಗ್ಯಾಸ್ ಟ್ಯಾಂಕರ್ ಒಂದು ಡಿವೈಡರ್ಗೆ ಡಿಕ್ಕಿ ಹೊಡೆದ ದುರ್ಘಟನೆ ನಡೆದಿದೆ. ಸದ್ಯಕ್ಕೆ ಯಾವುದೇ ಅಪಾಯವಾಗಲಿಲ್ಲ. ಆದರೆ ಮಳೆಗಾಲದಲ್ಲಿ ಗುಡ್ಡದ ಮೇಲಿಂದ ನೇರವಾಗಿ ಬರುವ ನೀರು ಹಾಗೂ ಸುತ್ತಲಿನ ಮಳೆಗಾಲದ ಮಳೆ ನೀರು ಈ ಬಂಡೆಕಲ್ಲಿನ ಮೇಲೆ ಮುಚ್ಚಿದ ತೋಡಿನ ಬಳಿ ಸೇರುತ್ತದೆ. ನೀರೇ ಹಾದು ಹೋಗಲು ಸ್ಥಳವಿಲ್ಲದ ಈ ತೋಡಿನೊಳಗೆ ಬಂದ ನೀರು ಇದೇ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲೇ ಶೇಖರಣೆಯಾಗುತ್ತದೆ.
*ನಡೆದಾಡಲು ಸಾಧ್ಯವಿಲ್ಲ:* ಒಂದು ಕಡೆ ದೊಡ್ಡ ತಿರುವು ಹಾಗೂ ಸ್ವಲ್ಪ ಇಳಿಜಾರು ರಸ್ತೆಯಾಗಿದ್ದು ವಾಹನಗಳು ಅತಿ ವೇಗವಾಗಿ ಬರುತ್ತಿದೆ. ನಡೆದಾಡಲೂ ಜಾಗವಿಲ್ಲದ ಈ ತಿರುವಿನಲ್ಲಿ ಸಾರ್ವಜನಿಕರು ಈ ಕೆರೆಯನ್ನು ದಾಟುವುದೇ ದೊಡ್ಡ ಸಮಸ್ಯೆ. ಹತ್ತಿರದಲ್ಲೇ ತುಂಬೆ ಖಾಸಗಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿದ್ದು ನೂರಾರು ವಿದ್ಯಾರ್ಥಿಗಳು ಈ ರಸ್ತೆಯಲ್ಲೇ ಸಂಚರಿಸಬೇಕಾಗಿದ್ದು , ಸ್ಥಳೀಯ ಪುಟ್ಟ ಪುಟ್ಟ ಮಕ್ಕಳು ಈ ಸ್ಥಳದಲ್ಲಿ ಭಯದಿಂದಲೇ ನಡೆದಾಡುವ ಗತಿ ಬಂದಿದೆ.
ಹೆದ್ದಾರಿ ಪ್ರಾಧಿಕಾರವು ಸುಗಮ ವಾಹನ ಸಂಚಾರಕ್ಕಾಗಿ ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತದೆ. ಆದರೆ ಅದನ್ನು ಕಾರ್ಯರೂಪಕ್ಕೆ ತರುವಾಗ ಅರ್ದಂಬರ್ಧ ಕಾಮಗಾರಿ ಮಾಡಿ ವಾಹನ ಸವಾರರಿಗೂ ಸರಿಯಾಗಿ ಪ್ರಯಾಣಿಸಲೂ ಆಗದೇ ಸಾರ್ವಜನಿಕರಿಗೂ ನಡೆದಾಡಲಾಗದೇ ಯಾರಿಗೂ ಅದರ ಪ್ರಯೋಜನ ಸಿಗುವುದಿಲ್ಲ.
ತುಂಬೆ ತಿರುವು ಬಾರೀ ಅಪಾಯಕಾರಿ. ಅದಲ್ಲದೇ ಈ ಪ್ರದೇಶದಲ್ಲಿ ಮೀಟರ್ ಗಟ್ಟಲೆ ನೀರು ಶೇಖರಣೆಯಾಗಿ ಈ ರಸ್ತೆಯಲ್ಲಿ ಯಾರಿಗೂ ಸಂಚಾರ ಮಾಡಲಿಕ್ಕಾಗುವುದಿಲ್ಲ. ಬೇಸಿಗೆ ಕಾಲದಲ್ಲಿ ಈ ಸಮಸ್ಯೆ ಗೊತ್ತಾಗದಿಲ್ಲರೂ ಪ್ರತೀ ಮಳೆಗಾಲಗಳಲ್ಲಿ ಸಮಸ್ಯೆ ಇದ್ದದ್ದೇ ಎಂದು ಸ್ಥಳೀಯರಾದ ದಿನೇಶ್ ತುಂಬೆ ಹೇಳುತ್ತಾರೆ.
ನೀರು ಹಾದು ಹೋಗುವ ತೋಡು ನಿರ್ಮಾಣ ಮಾಡುವ ಸಂದರ್ಭದಲ್ಲಿ ಕಲ್ಲಿನ ಮೇಲೆಯೇ ಕಾಂಕ್ರೀಟ್ ಹಾಕಿ ನಿರ್ಮಾಣ ಮಾಡಿದರೆ ನೀರು ಹೋಗಲು ಸ್ಥಳವೇ ಇಲ್ಲ. ಅರ್ದಂಬರ್ಧ ಕಾಮಗಾರಿಯ ಬಗ್ಗೆ ಆರಂಭದಲ್ಲೇ ಹೋರಾಟ ಮಾಡಿದರೂ ಯಾವ ಜನಪ್ರತಿನಿಧಿಯೂ ಇದಕ್ಕೆ ಸಹಕಾರ ನೀಡಲಿಲ್ಲ. ಈಗ ಎಲ್ಲರೂ ಅದನ್ನು ಅನುಭವಿಸಬೇಕಾಗುತ್ತದೆ ಎಂದು ತುಂಬೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರವೀಣ್ ಬಿ. ತುಂಬೆ ನುಡಿಯುತ್ತಾರೆ.