ಇತ್ತೀಚಿನ ಸುದ್ದಿ
New Delhi | ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೆ ಪ್ರಧಾನಿ ಮೋದಿ ಜನ್ಮದಿನದ ಶುಭ ಹಾರೈಕೆ
27/11/2025, 18:34
* ಜನ್ಮದಿನ ಪ್ರಯುಕ್ತ ಶುಭಾಶಯ ಪತ್ರ ಬರೆದು ಜೋಶಿ ಅವರ ದೇಶಸೇವೆಗೆ ಅಭಿನಂದಿಸಿದ ಮೋದಿ
* ಹುಟ್ಟು ಹಬ್ಬದಂದು ಜನಸೇವೆಯಲ್ಲಿ ತೊಡಗಿ ಸರಳತೆ ಮೆರೆದ ಜೋಶಿ ಅವರಿಗೆ ಅಭಿನಂದನೆಗಳ ಮಹಾಪೂರ
ನವದೆಹಲಿ(reporterkarnataka.com): ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರಿಗಿಂದು 64ನೇ ವರ್ಷದ ಜನ್ಮದಿನದ ಸಂಭ್ರಮ. ಈ ಶುಭ ದಿನದಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸಚಿವರುಗಳು ಹಾಗೂ ಬಿಜೆಪಿ ವರಿಷ್ಠರನೇಕರು ಶುಭ ಹಾರೈಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸಚಿವ ಜೋಶಿ ಅವರಿಗೆ ಶುಭ ಹಾರೈಕೆಯ ಪತ್ರ ಬರೆದಿದ್ದಾರೆ. ದೇಶದ ಅಭಿವೃದ್ಧಿಗೆ ಜೋಶಿ ಅವರ ದೃಢ ಸಂಕಲ್ಪ ಮತ್ತು ಸಮ ರ್ಪಣಾ ಭಾವವನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಇಂದು ಜನ್ಮದಿನದ ಸಂಭ್ರಮದಲ್ಲಿರುವ ಪ್ರಹ್ಲಾದ ಜೋಶಿ ಅವರಿಗೆ ಹೆಚ್ಚಿನ ಆಯುರಾರೋಗ್ಯ ಮತ್ತು ಉನ್ನತ ಸ್ಥಾನಮಾನಗಳು ಲಭಿಸಿ ಸಂತೃಪ್ತಿ ಜೀವನ ತಮ್ಮದಾಗಲೆಂದು ಪ್ರಧಾನಿ ಶುಭ ಕೋರಿದ್ದಾರೆ.
ಜೋಶಿ ಅವರು ಜನಸೇವೆ ಮತ್ತು ದೇಶದ ಕಲ್ಯಾಣಕ್ಕಾಗಿ ಅರ್ಪಿಸಿಕೊಂಡಿರುವುದಕ್ಕೆ ಅಪಾರ ಗೌರವವಿದೆ. ಕೇಂದ್ರ ಸಚಿವ ಸಂಪುಟದಲ್ಲಿ ಮತ್ತು ರಾಷ್ಟ್ರಭಿವೃದ್ಧಿ ಕಾಯಕದಲ್ಲಿ ಅವರ ಸೇವೆ ನಿಜಕ್ಕೂ ಶ್ಲಾಘನೀಯ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ದೇಶದ ಸುಸ್ಥಿರತೆಯಲ್ಲಿ ಜೋಶಿ ಅವರ ಪ್ರಾಮಾಣಿಕ ಪ್ರಯತ್ನ ಅರ್ಥಪೂರ್ಣ ಬದಲಾವಣೆ ತಂದಿದೆ. ನವೀಕರಿಸಬಹುದಾದ ಇಂಧನ ವಲಯ, ಆಹಾರ ಭದ್ರತೆಯಲ್ಲಿನ ಬದ್ಧತೆ ಲಕ್ಷಾಂತರ ಜನರ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಪ್ರಧಾನಿ ಮೋದಿ ಶುಭ ಹಾರೈಕೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಕೇಂದ್ರ ಸಚಿವರಾದ ಅಮಿತ್ ಶಾ, ಪಿಯೂಷ್ ಗೋಯಲ್, ರಾಜನಾಥ್ ಸಿಂಗ್, ಅಶ್ವಿನಿ ವೈಷ್ಣವ, ಎಚ್. ಡಿ.ಕುಮಾರಸ್ವಾಮಿ, ಶಿವರಾಜ್ ಸಿಂಗ್ ಚೌಹಾಣ್, ಜೈಶಂಕರ್, ಜೆ.ಪಿ. ನಡ್ಡಾ, ನಿರ್ಮಲಾ ಸೀತಾರಾಮನ್, ವಿ.ಸೋಮಣ್ಣ ಸೇರಿದಂತೆ ಕೇಂದ್ರದ ಹಿರಿಯ ಬಿಜೆಪಿ ನಾಯಕರು ಹಾಗೂ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಪಕ್ಷ ನಾಯಕ ಆರ್.ಅಶೋಕ್, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ, ಪ್ರಭಾಕರ್ ಕೋರೆ ಹೀಗೆ ಪಕ್ಷದ ನಾಯಕರು, ಪ್ರಮುಖರು ಮತ್ತು ಅಸಂಖ್ಯಾತ ಕಾರ್ಯಕರ್ತರು ಜೋಶಿ ಅವರಿಗೆ ಜನ್ಮದಿನದ ಶುಭ ಹಾರೈಸಿದ್ದಾರೆ.
*ಸರಳತೆ ಮೆರೆದ ಜೋಶಿ:*
ಇದೇ ವೇಳೆ ಸಚಿವ ಪ್ರಲ್ಹಾದ ಜೋಶಿ ಅವರು ತಮ್ಮ ಜನ್ಮ ದಿನವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಿಕೊಳ್ಳಲು ಇಚ್ಛಿಸಿ, ಪಕ್ಷದ ಕಾರ್ಯಕರ್ತರಿಗೆ, ಹಿತೈಷಿಗಳು ಮತ್ತು ಅಭಿಮಾನಿಗಳಿಗೂ ಅದೇ ರೀತಿ ಕರೆ ನೀಡಿದ್ದಾರೆ.
“ಸಾರ್ವಜನಿಕ ಜೀವನದಲ್ಲಿರುವ ನಾನು ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಿಗೆ ಎಂದಿನಂತೆ ಜನಸೇವೆಯ ದಿನವಾಗಿದ್ದು, ದೆಹಲಿಯಲ್ಲಿ ಇಲಾಖೆಯಲ್ಲೇ ತೊಡಗಿಕೊಳ್ಳುತ್ತೇನೆ. ಹಾಗಾಗಿ ದಯಮಾಡಿ ಯಾವುದೇ ತರಹದ ಹೂಗುಚ್ಚ, ಉಡುಗೊರೆ, ಬ್ಯಾನರ್ ಎಂದು ಅನಾವಶ್ಯಕ ಅದ್ದೂರಿತನದ ಪ್ರದರ್ಶನ ಬೇಡವೆಂದು ಮನವಿ ಮಾಡಿದ್ದಾರೆ.
ಇದು ಸಚಿವ ಪ್ರಲ್ಹಾದ ಜೋಶಿ ಅವರ ಅತ್ಯಂತ ಸರಳತೆ ಮತ್ತು ಕಾರ್ಯತತ್ಪರತೆಗೆ ನಿದರ್ಶನವಾಗಿದೆ ಎಂದು ಅವರ ಅಭಿಮಾನಿಗಳು ಶುಭ ಹಾರೈಕೆಯೊಂದಿಗೆ ಮೆಚ್ಚುಗೆ ಸಹ ವ್ಯಕ್ತಪಡಿಸಿದ್ದಾರೆ.












