12:11 AM Friday21 - November 2025
ಬ್ರೇಕಿಂಗ್ ನ್ಯೂಸ್
ಮಂಡ್ಯ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಸಚಿನ್ ಚಲುವರಾಯಸ್ವಾಮಿ ಆಯ್ಕೆ ಅರಣ್ಯ ಪ್ರದೇಶದಿಂದ ಅಕ್ರಮವಾಗಿ ಮಣ್ಣು ಸಾಗಾಟ: ಸ್ಥಳೀಯರ ತೀವ್ರ ಆಕ್ಷೇಪ; ಮೌನ ವಹಿಸಿದ… ದ್ವಿಚಕ್ರ ವಾಹನದಲ್ಲಿ ಮಕ್ಕಳಿಗೂ ಹೆಲ್ಮೆಟ್‌ ಕಡ್ಡಾಯ: ರಾಜ್ಯ ಸರಕಾರಕ್ಕೆ ಹೈಕೋರ್ಟ್ ಆದೇಶ ಡಿ. 6ರಂದು ಹಾಸನಕ್ಕೆ ಸಿಎಂ ಭೇಟಿ: ನೂತನ ಕಂದಾಯ ಗ್ರಾಮಗಳ ನಿವಾಸಿಗಳಿಗೆ ಹಕ್ಕುಪತ್ರ… Bangalore | ನಾಯಿ ದಾಳಿಯಿಂದ ಸಾವನ್ನಪ್ಪಿದವರಿಗೆ ರಾಜ್ಯ ಸರ್ಕಾರ 5 ಲಕ್ಷ ರೂ.… ಕಲಾ ಗ್ರಾಮದಲ್ಲಿ ಸಾಲುಮರದ ತಿಮ್ಮಕ್ಕ ಜತೆಗೆ ಸಾಹಿತಿ ಯು.ಆರ್. ಅನಂತಮೂರ್ತಿ, ಕವಿ ಡಾ.… ಬಿಜೆಪಿಯಿಂದ ಭೀಮ ಸ್ಮರಣೆ ಕಾರ್ಯಕ್ರಮ; ಕಾಂಗ್ರೆಸ್‌ ಮಾಡಿದ ಅನ್ಯಾಯದ ಕುರಿತು ಜಾಗೃತಿ: ಪ್ರತಿಪಕ್ಷ… ಭಾರತದ ಅತ್ಯಂತ ವಿಶ್ವಾಸಾರ್ಹ ಹೂಡಿಕೆಯ ತಾಣ ಕರ್ನಾಟಕ: ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರು: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜನ್ಮದಿನಾಚರಣೆ ಚಾಲಕನ ಅಜಾಗರೂಕತೆ: ವಿದ್ಯಾರ್ಥಿಗಳಿಂದ ತುಂಬಿದ್ದ ಕೇರಳ ಮೂಲದ ಪ್ರವಾಸಿ ಬಸ್ ಪಲ್ಟಿ

ಇತ್ತೀಚಿನ ಸುದ್ದಿ

ನಂಜನಗೂಡು: ಶ್ರದ್ಧಾಭಕ್ತಿಯಿಂದ ನಡೆದ ಸುತ್ತೂರು ರಥೋತ್ಸವ; ಭಕ್ತಸಾಗರ ಹರ್ಷೋದ್ಗಾರ

08/02/2024, 22:28

ಮೋಹನ್ ನಂಜನಗೂಡು ಮೈಸೂರು

info.reporterkarnataka@gmail.com

ಆರು ದಿನಗಳ ಕಾಲ ನಡೆಯಲಿರುವ ಸುತ್ತೂರು ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನವಾದ ಇಂದು ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ರಥೋತ್ಸವವು ವಿಜೃಂಭಣೆ ಹಾಗೂ ಶ್ರದ್ಧಾ ಭಕ್ತಿಯಿಂದ ನೆರವೇರಿತು.
ಶುಭ ಮೇಷ ಲಗ್ನದಲ್ಲಿ ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿ ಕೇಂದ್ರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಹಾಗೂ ಹಲವಾರು ಮಠಾಧೀಶರ ಸಮ್ಮುಖದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಗೋವಾ ರಾಜ್ಯಪಾಲರಾದ ಪಿ. ಎಸ್. ಶ್ರೀಧರನ್ ಪಿಳ್ಳೈ ಹಾಗೂ ಮತ್ತಿತರ ಗಣ್ಯರು ರಥಕ್ಕೆ ಪೂಜೆ ಸಲ್ಲಿಸಿ, ಹಣ್ಣು ದವನ ಎಸೆಯುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು
ಇದಕ್ಕೂ ಮುನ್ನ ಆದಿ ಜಗದ್ಗುರು ಶ್ರೀ ಶಿವರಾತ್ರಿಶ್ವರ ಶಿವಯೋಗಿಗಳವರ ಅಲಂಕೃತ ಉತ್ಸವ ಮೂರ್ತಿಗಳನ್ನು ಶ್ರೀ ಗದ್ದುಗೆಯಿಂದ ಹಲವಾರು ಜಾನಪದ ಕಲಾತಂಡಗಳೊಂದಿಗೆ ಹೊರತಂದು ಬಣ್ಣ ಬಣ್ಣದ ಹೂವು ಹಾಗೂ ಬಂಟಿಂಗ್ಸ್ ಗಳಿಂದ ವಿಶೇಷವಾಗಿ ಅಲಂಕರಿಸಲಾಗಿದ್ದ ದೊಡ್ಡ ರಥದ ಸುತ್ತ ಮೆರವಣಿಗೆ ಬಂದು ರಥದಲ್ಲಿ ಕೂರಿಸಲಾಯಿತು.
ನಂತರ ಸಾವಿರಾರು ಭಕ್ತರ ಹರ್ಷೋದ್ಗಾರದೊಂದಿಗೆ ರಥವು ರಾಜ ಬೀದಿಯಲ್ಲಿ ವಿರಾಜಮಾನವಾಗಿ ಸಾಗಿತು.
ಭಕ್ತರು ರಥೋತ್ಸವವನ್ನು ಕಣ್ತುಂಬಿಕೊಂಡು ಹಣ್ಣುಜವನ ಎಸೆದು ತಮ್ಮ ಭಕ್ತಿ ಭಾವ ಮೆರೆದರು.
ಮಂಗಳವಾದ್ಯ ಚಂಡೆ ವಾದ್ಯ, ತಮಟೆ, ಡೊಳ್ಳು ಕುಣಿತ, ವೀರಗಾಸೆ ನಂದಿ ದ್ವಜ, ಕಂಸಾಳೆ, ಪೂಜಾ ಕುಣಿತ, ದೊಣ್ಣೆವರಸೆ ಗಾರುಡಿ ಗೊಂಬೆ ಮರಗಾಲು ಸಮೇತ ಆದಿಶಕ್ತಿ ವೇಷ ಧಾರಣಿ ಸೇರಿದಂತೆ ಹಲವು ಜಾನಪದ ಕಲಾತಂಡಗಳು ರಥೋತ್ಸವಕ್ಕೆ ಮೆರಗು ನೀಡಿದವು.
ಬಳಿಕ ನಡೆದ ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಶ್ರೀಗಳು ಸೇರಿದಂತೆ ಗೋವಾ ರಾಜ್ಯಪಾಲರಾದ ಶ್ರೀಧರನ್ ಪಿಳ್ಳೈ ಹಾಗೂ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಮತ್ತಿತರ ಗಣ್ಯರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ ಯಾವುದೇ ಜಾತಿ ಭೇದವಿಲ್ಲದೆ ಆರು ದಿನಗಳ ಕಾಲ ನಡೆಯುವ ಜಾತ್ರಾ ಮಹೋತ್ಸವವು ಒಂದು ಧಾರ್ಮಿಕ ಉತ್ಸವವಾಗದೆ ಜನ ಸಾಮಾನ್ಯರಿಗೆ ಉಪಯೋಗವಾಗುವಂತಹ ಗ್ರಾಮೀಣ ಸೊಗಡಿನ ಜಾತ್ರೆಯಾಗಿದೆ ಎಂದು ಸುತ್ತೂರು ಜಾತ್ರೆ ಹಾಗೂ ಶ್ರೀ ಕ್ಷೇತ್ರ ಮತ್ತು ಪರಮಪೂಜ್ಯರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.
ಇದೇ ಸಂದರ್ಭ ನಾವು ಅಧಿಕಾರದಲ್ಲಿದ್ದಾಗ ರೈತರಿಗೆ ಕೇಂದ್ರ ಸರ್ಕಾರ ನೀಡುತ್ತಿದ್ದ 6, 000 ದ ಜೊತೆಗೆ ರಾಜ್ಯ ಸರ್ಕಾರದಿಂದ 4000 ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಆದರೆ ಈಗ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಅದನ್ನು ನಿಲ್ಲಿಸಿದ್ದಾರೆ ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಕೂಡಲೇ ಅದನ್ನು ಜಾರಿಗೆ ತಂದು ರಾಜ್ಯದ ರೈತರಿಗೆ ನೆರವಾಗಬೇಕು ಎಂದರು.
ಇನ್ನು ರಾಜ್ಯದಲ್ಲಿ ತೀವ್ರ ಬರಗಾಲ ಹಾಗೂ ಕುಡಿಯುವ ನೀರಿಗೆ ಬಹಳ ತೊಂದರೆಯಾಗುತ್ತಿದೆ. ಅದಕ್ಕೆ ಎಲ್ಲರೂ ಒಟ್ಟಿಗೆ ಸೇರಿ ಪರಿಹಾರ ಒದಗಿಸಬೇಕು ಎಂದು ಸಲಹೆ ನೀಡಿದರು.
ಉತ್ತಮ ಗುಣಮಟ್ಟದ ಅಕ್ಕಿ ಕೇಜಿಗೆ 60 ರಿಂದ 70 ರೂಪಾಯಿ ಇದ್ದು ಈಗ ಮಾನ್ಯ ಪ್ರಧಾನ ಮಂತ್ರಿಗಳು ಅದನ್ನು 29 ರೂಪಾಯಿಗಳಿಗೆ ಇಳಿಸಿದ್ದಾರೆ. ಇದೊಂದು ಜನಪ್ರಿಯ ಯೋಜನೆಯಾಗಿದ್ದು ರಾಜ್ಯದ ಜನತೆಯ ಪರವಾಗಿ ಅವರಿಗೆ ಅಭಿನಂದಿಸುತ್ತೇನೆ ಎಂದರು.
ಶ್ರೀ ಜೈನಮಠ ಶ್ರವಣಬೆಳಗೊಳದ ಸ್ವಸ್ತಿ ಶ್ರೀ ಜಗದ್ಗುರು ಅಭಿನವ ಚಾರು ಕೀರ್ತಿ ಪಂಡಿತಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.


ಇದೇ ಸಂದರ್ಭ ವೇದಿಕೆ ಮೇಲಿನ ಗಣ್ಯರನ್ನು ಶ್ರೀಮಠದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರುಗಳಾದ ಮುರುಗೇಶ್ ಆರ್ ನಿರಾಣಿ, ಜೆಸಿ ಮಾಧುಸ್ವಾಮಿ, ಎ ಮಂಜು, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಡಾ ಸಿ. ಸೋಮಶೇಖರ್, ವಿಜಯ ಕರ್ನಾಟಕ ವಿಜಯ ಕರ್ನಾಟಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಪಕ್ ಸಲೂಜ ಸೇರಿದಂತೆ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರು ಮಾಜಿ ಸದಸ್ಯರುಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು