ಇತ್ತೀಚಿನ ಸುದ್ದಿ
ಮಧ್ಯಪ್ರಾಚ್ಯ ಯುದ್ಧ: ಕೊಡಗಿನಲ್ಲಿ ಸಿಲುಕಿದ ಇರಾನಿ ದಂಪತಿ; ಪಾಸ್ಪೋರ್ಟ್ ಆತಂಕ
06/04/2026, 19:55
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪ್ರತಿ ವರ್ಷದಂತೆ ಕೊಡಗು ಜಿಲ್ಲೆಗೆ ಆಗಮಿಸುವ ಇರಾನಿ ದಂಪತಿಗಳು ಎಂದಿನಂತೆ ಈ ಬಾರಿಯೂ ದೀರ್ಘ ರಜೆಯ ಮೇಲೆ ಬಂದಿರುವ ದಂಪತಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊಡಗು ಮೂಲದ ನವೀನ ಅವರು ಸುಮಾರು 40 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಇರಾನ್ ಮೂಲದ ನಾದರ್ ಎಂಬುವವರ ಪರಿಚಯವಾಗಿ ಬಳಿಕ ಪ್ರೀತಿಗೆ ತಿರುಗಿ ವಿವಾಹವಾದ ನಂತರ ದಂಪತಿ ಇರಾನ್ನ ಬೋಜ್ನೂರ್ ಎಂಬ ಪ್ರದೇಶದಲ್ಲಿ ನೆಲೆಸಿದ್ದರು. ಇವರಿಗೆ ಇಬ್ಬರು ಮಕ್ಕಳಿದ್ದು, ಒಬ್ಬರು ಸಿವಿಲ್ ಇಂಜಿನಿಯರ್ ಹಾಗೂ ಮತ್ತೊಬ್ಬರು ಆರ್ಕಿಟೆಕ್ಟ್ ಆಗಿ ಕೆಲಸ ಮಾಡುತ್ತಿದ್ದಾರೆ.

ಈ ಕುಟುಂಬವು ಇರಾನ್ನಲ್ಲಿ ದಾಳಿಂಬೆ, ಸೇಬು ಸೇರಿದಂತೆ ವಿವಿಧ ಹಣ್ಣುಗಳ ಫಾರ್ಮ್ಗಳನ್ನು ಹೊಂದಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದೆ.
ಪ್ರತಿ ವರ್ಷ ಡಿಸೆಂಬರ್ನಲ್ಲಿ ಕೊಡಗಿಗೆ ಬರುವ ಈ ದಂಪತಿ,ಮಾರ್ಚ್ನಲ್ಲಿ ಇರಾನ್ಗೆ ಮರಳುತ್ತಿದ್ದರು. ಅದರಂತೆ ಈ ಬಾರಿಯೂ ಕೊಡಗಿಗೆ ಬಂದಿದ್ದ ದಂಪತಿ ಮಾರ್ಚ್ 16ಕ್ಕೆ ಬೆಂಗಳೂರಿನಿಂದ ಶಾರ್ಜಾ ಮೂಲಕ ಇರಾನ್ಗೆ ಮರಳಲು ಟಿಕೆಟ್ ಬುಕ್ ಮಾಡಿದ್ದರು. ಆದರೆ ಅಮೆರಿಕ-ಇರಾನ್ ನಡುವಿನ ಉದ್ವಿಗ್ನ ಪರಿಸ್ಥಿತಿಯಿಂದಾಗಿ ವಿಮಾನಯಾನ ರದ್ದಾಯಿತು. ನಂತರ ಏಪ್ರಿಲ್ 15ಕ್ಕೆ ಮಾಡಿದ್ದ ಮತ್ತೊಂದು ಪ್ರಯಾಣದ ಬುಕಿಂಗ್ ಕೂಡ ರದ್ದಾಗಿದೆ.
*ಪಾಸ್ಪೋರ್ಟ್ ಆತಂಕ*
ದಂಪತಿಗಳ ಪಾಸ್ಪೋರ್ಟ್ ಅವಧಿಯು ಮುಂದಿನ ಮೇ ತಿಂಗಳಿನಲ್ಲಿ ಮುಕ್ತಾಯಗೊಳ್ಳಲಿದೆ. ಒಂದು ವೇಳೆ ಪಾಸ್ಪೋರ್ಟ್ ಅವಧಿ ಮುಗಿದರೆ ಅವರು ಮತ್ತಷ್ಟು ದಿನಗಳ ಕಾಲ ಇಲ್ಲಿಯೇ ಉಳಿಯಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಇತ್ತ ಇರಾನ್ನಲ್ಲಿ ಇಂಟರ್ನೆಟ್ ಸೇವೆಗಳು ಸ್ಥಗಿತಗೊಂಡಿರುವುದರಿಂದ ಮಕ್ಕಳನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಮಕ್ಕಳ ಸುರಕ್ಷತೆಯ ಬಗ್ಗೆ ಚಿಂತಿತರಾಗಿರುವ ದಂಪತಿ, ಯುದ್ಧದ ಪರಿಸ್ಥಿತಿ ಬೇಗ ಮುಗಿದು ನಾವು ಮಕ್ಕಳ ಬಳಿ ಸೇರುವಂತಾಗಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಾರೆ.













