ಇತ್ತೀಚಿನ ಸುದ್ದಿ
ಮತದಾರರ ದತ್ತಾಂಶಕ್ಕೆ ಕನ್ನ: ಕಾಂಗ್ರೆಸ್ ಆರೋಪ; ಮುಖ್ಯಮಂತ್ರಿ ಬಂಧನಕ್ಕೆ ಸುರ್ಜೇವಾಲಾ ಆಗ್ರಹ
17/11/2022, 20:24

ಬೆಂಗಳೂರು(reporterkarnataka.com): ಮತದಾರರ ದತ್ತಾಂಶ ಕಳವು ಆರೋಪಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿರುದ್ಧ ಎಫ್ ಐಆರ್ ದಾಖಲಿಸಿ ಅವರನ್ನು ತಕ್ಷಣ ಬಂಧಿಸಬೇಕು ಹಾಗೂ ಪ್ರಕರಣದ ಕುರಿತು ಹೈ ಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ನಡೆಸಬೇಕೆಂದು ಕಾಂಗ್ರೆಸ್ ಆಗ್ರಹಿಸಿದೆ.
ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್
ಸುರ್ಜೇವಾಲಾ, ಮತದಾರರ ಅಂಕಿ-ಅಂಶಗಳನ್ನು (ಡಾಟಾ) ಖಾಸಗಿ ಸಂಸ್ಥೆಯೊಂದು ಅಕ್ರಮವಾಗಿ ಸಂಗ್ರಹಿಸುತ್ತಿದ್ದು, ಮತದಾರರ ವೈಯಕ್ತಿಕ ಮಾಹಿತಿಯ ದತ್ತಾಂಶವನ್ನು ಕದಿಯುವ ಕೆಲಸಕ್ಕೆ ಮುಖ್ಯಮಂತ್ರಿ
ಬಸವರಾಜ ಬೊಮ್ಮಾಯಿ ಅವರೇ ಕಾರಣ, ಅವರ
ಮೇಲೆ ಎಫ್ಐಆರ್ ದಾಖಲಿಸಿ ಬಂಧಿಸಬೇಕು ಎಂದು ಆಗ್ರಹಿಸಿದರು.
ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ
ಡಿ.ಕೆ ಶಿವಕುಮಾರ್ ಉಪಸ್ಥಿತರಿದ್ದರು.
ಚಿಲುಮೆ ಎಂಬ ಸರ್ಕಾರೇತರ ಸಂಸ್ಥೆ ತನ್ನ ಏಜೆಂಟರಿಗೆ ನಕಲಿ ಐಡಿ ಕಾರ್ಡ್ ನೀಡಿ ಸರ್ಕಾರಿ ಅಧಿಕಾರಿಗಳಂತೆ ಬಿಂಬಿಸಿ ಮತದಾರರ
ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದೆ. ಈ ಅಕ್ರಮದ ಹೊಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೊರಬೇಕು ಹಾಗೂ
ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಖಾಸಗಿ ಸಂಸ್ಥೆಯಾದ ಚಿಲುಮೆಗೆ ಮತದಾರರ ಡಾಟಾ ಸಂಗ್ರಹಿಸಲು ಅವಕಾಶ ಸಿಕ್ಕಿದ್ದು ಹೇಗೆ,ಅಕ್ರಮವಾಗಿ ಡಾಟಾ ಸಂಗ್ರಹಿಸುತ್ತಿರುವುದು ಯಾಕೆ?
ಬೂತ್ ಮಟ್ಟದ ಅಧಿಕಾರಿಗಳು ಏನು ಮಾಡುತ್ತಿದ್ದಾರೆ.ಎಂದು ಪ್ರಶ್ನಿಸಿದ ಅವರು ಮತದಾರರ ಮಹಿತಿಯನ್ನು ಸರ್ಕಾರ ಸಂಗ್ರಹಿಸಬೇಕು, ಇಲ್ಲಿ ಖಾಸಗಿ ಸಂಸ್ಥೆ ಆ ಕೆಲಸ ಮಾಡುತ್ತಿದೆ. ನಕಲಿ ಗುರುತಿನ ಚೀಟಿ ಇಟ್ಟು-
ಕೊಂಡು ಈ ಸಂಸ್ಥೆ ಏಜೆಂಟರುಗಳು ಮತದಾರರ ಮೊಬೈಲ್ ಸಂಖ್ಯೆ, ವಿಳಾಸ, ಇತರೆ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸಿದ್ದಾರೆ. ಇದರ ಹಿಂದೆ
ಕೃಷ್ಣಪ್ಪ ಹಾಗೂ ರವಿಕುಮಾರ್ ಎಂಬುವರು ಇದ್ದಾರೆ. ಈ ಇಬ್ಬರು
ಮಾಜಿ ಉಪಮುಖ್ಯಮಂತ್ರಿ ಹಾಗೂ ಹಾಲಿ ಸಚಿವರ ಆಪ್ತರು ಎಂದರು.
ಮತದಾರರ ದತ್ತಾಂಶವನ್ನು ಖಾಸಗಿ ಕಂಪನಿ ಮೂಲಕ ಸರ್ಕಾರ ಕದಿಯುವ ಅಕ್ರಮ ನಡೆಸಿರುವ ಬಗ್ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ಸಿಂಗ್ ಸುರ್ಜೇವಾಲಾ ದಾಖಲೆಗಳನ್ನು ಬಿಡುಗಡೆ ಮಾಡಿದರು.