ಇತ್ತೀಚಿನ ಸುದ್ದಿ
Mangaluru | ಲೇಖಕಿ ಲಲಿತಾ ರೈ, ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ಶ್ರದ್ದಾಂಜಲಿ, ನುಡಿ ನಮನ
25/10/2025, 21:55
ಮಂಗಳೂರು(reporterkarnataka.com): ಲೇಖಕಿ ಲಲಿತಾ ರೈ ಅವರ ಎಲ್ಲಾ ಕೃತಿಗಳಲ್ಲಿ ತುಳುವಿನ ನೈಜ ಸತ್ವ ಹಾಗೂ ವೈಚಾರಿಕ ನಿಲುವು ಇತ್ತು. ತುಳು ಭಾಷಿಗರು ಕನ್ನಡ ಕೃತಿಗಳನ್ನು ಬರೆದಾಗ ಕೃತಿಯಂತೂ ಕನ್ನಡದ್ದು ಆಗಿದ್ದರೂ ಕೃತಿಯೊಳಗಡೆ ತುಳುವಿನ ಸತ್ವಗಳೇ ತುಂಬಿರುತ್ತದೆ ಎಂದು ವಿಶ್ರಾಂತ ಕುಲಪತಿ ಪ್ರೊ.ಬಿ.ಎ.ವಿವೇಕ ರೈ ಹೇಳಿದರು.
ಅವರು ಶನಿವಾರ ತುಳು ಅಕಾಡೆಮಿ ವತಿಯಿಂದ ಹಿರಿಯ ಲೇಖಕಿ ಲಲಿತಾ ರೈ ಮತ್ತು ಭಾಗವತ ದಿನೇಶ್ ಅಮ್ಮಣ್ಣಾಯರಿಗೆ ಶ್ರದ್ದಾಂಜಲಿ ಹಾಗೂ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಲಲಿತಾ ರೈ ಅವರ ಕಾದಂಬರಿ, ಸಣ್ಣ ಕತೆಯಲ್ಲಿ ವೈಚಾರಿಕತೆಯ ಅಂಶಗಳು ಅಡಗಿತ್ತು. ಅವರು ಬರವಣಿಗೆಯನ್ನು ಬಹಳಷ್ಟು ತಡವಾಗಿ ಬರೆದರೂ ಕೂಡ ಅವರ ಕೃತಿಗಳು ಸಾಕಷ್ಟು ಮೌಲ್ಯವನ್ನು ಹೊಂದಿತ್ತು. ತುಳುವಿನಲ್ಲಿ ವೈಚಾರಿಕತೆಯನ್ನು ಇಟ್ಟುಕೊಂಡು ಕಾದಂಬರಿ, ಸಣ್ಣಕತೆಗಳನ್ನು ಬರೆಯುವುದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಲಲಿತಾ ರೈ ಅವರು ಈ ವಿಚಾರದಲ್ಲಿ ಸಮರ್ಥರಾಗಿದ್ದರು ಎಂದರು.
ಇಬ್ಬರು ಸಾಧಕರ ಕೃತಿಗಳು ತುಳು ಅಕಾಡೆಮಿಯಿಂದ ಹೊರಬರಬೇಕು. ಲಲಿತಾ ರೈ ಅವರು ಕನ್ನಡದಲ್ಲಿ ಬರೆದ ಕೃತಿಗಳು ತುಳುವಿಗೆ ತರ್ಜುಮೆಯಾಗಬೇಕು ಎಂದು ವಿವೇಕ ರೈ ಅವರು ಅಭಿಪ್ರಾಯಪಟ್ಟರು. ತುಳುವಿನ ಮೇಲಿನ ಪ್ರೀತಿ, ಅಭಿಮಾನ ಹಾಗೂ ತುಳು ಭಾಷೆಯ ಅಭಿವೃದ್ಧಿಯಲ್ಲಿ ಯಕ್ಷಗಾನದ ಮೂಲಕ ದಿನೇಶ್ ಅಮ್ಮಣ್ಣಾಯರ ಕೊಡುಗೆ ಅಪಾರವಿದ್ದು, ಅವರ ತುಳು ಹಾಡುಗಳ ವೈಶಿಷ್ಟ್ಯಗಳು ಕೃತಿಯ ರೂಪದಲ್ಲಿ ಹೊರತರುವ ಕೆಲಸವಾಗಬೇಕು ಎಂದು ಬಿ. ಎ ವಿವೇಕ ರೈ ಅವರು ಹೇಳಿದರು.
ಲಲಿತಾ ರೈ ತಮ್ಮ ಕಾದಂಬರಿ, ಸಣ್ಣಕತೆಗಳಲ್ಲಿ ತನ್ನನ್ನು ಪ್ರಭಾವಿಸಿದ ಅಲೋಚನೆಗಳನ್ನು ಬರಹ ರೂಪಕ್ಕೆ ಇಳಿಸಿದ್ದು ಮಾತ್ರವಲ್ಲದೆ ಅದರಂತೆ ನಡೆದುಕೊಂಡವರು, ಇದೇ ರೀತಿಯಲ್ಲಿ ಭಾಗವತ ದಿನೇಶ್ ಅಮ್ಮಣ್ಣಾಯ ಅವರು ರಾಗಭಾವವನ್ನು ಸಾಹಿತ್ಯಭಾವದೊಂದಿಗೆ ಸಮನ್ವಯಗೊಳಿಸುವ ಪ್ರಧಾನ ಗುಣವನ್ನು ಬೆಳೆಸಿಕೊಂಡು ಯಕ್ಷಗಾನ ಲೋಕದಲ್ಲಿ ತನ್ನದೇ ಸ್ಥಾನವನ್ನು ಉಳಿಸಿಕೊಂಡು ಹೋದರು ಎಂದು ಯಕ್ಷಗಾನ ವಿದ್ವಾಂಸ ಪ್ರೊ.ಪ್ರಭಾಕರ ಜೋಶಿ ಹೇಳಿದರು.
ಹಿರಿಯ ಲೇಖಕಿ ಬಿ.ಎಂ.ರೋಹಿಣಿ ಮಾತನಾಡಿ, ಲಲಿತಾ ರೈ ಬರೀ ಸಾಹಿತ್ಯ ಕ್ಷೇತ್ರದಲ್ಲಿ ಮಾತ್ರ ಕೊಡುಗೆ ನೀಡಿಲ್ಲ. ಅವರು ಸಾಮಾಜಿಕ ಸೇವೆಗಳು ಕೂಡ ಬಹಳ ದೊಡ್ಡದಿದೆ. ಬಡ ಮಕ್ಕಳ ವಿದ್ಯಾಭ್ಯಾಸ, ಅನಾರೋಗ್ಯ ಪೀಡಿತರಿಗೆ ನೆರವು ಸೇರಿದಂತೆ ಹತ್ತಾರು ವಿಚಾರದಲ್ಲಿ ಅವರು ಉದಾರ ದಾನವನ್ನು ನೀಡಿ ನೆರವಾಗುತ್ತಿದ್ದರು ಎಂದರು.
ಈ ಸಂದರ್ಭ ಲೇಖಕಿ ಡಾ.ಜ್ಯೋತಿ ಚೇಳ್ಯಾರು, ಲಲಿತಾ ರೈ ಅವರ ಪುತ್ರ ಡಾ.ಜಿತೇಂದ್ರ ರೈ , ಭಾಸ್ಕರ ರೈ ಕುಕ್ಕುವಳ್ಳಿ , ಸುಬ್ರಹ್ಮಣ್ಯ ಬೈಪಾಡಿತ್ತಾಯ ಮಾತನಾಡಿದರು.
ಲಲಿತಾ ರೈ ಅವರ ಪುತ್ರಿ ಕೃಪಾ ರೈ, ಅಳಿಯ ಆನಂದ ಶೆಟ್ಟಿ, ಕರಾವಳಿ ಲೇಖಕಿಯರ ಮತ್ತು ವಾಚಕೀಯರ ಸಂಘದ ಅಧ್ಯಕ್ಷರಾದ ಶಕುಂತಲಾ ಶೆಟ್ಟಿ , ತುಳು ಪರಿಷತ್ ಅಧ್ಯಕ್ಷ ಶುಭೋದಯ ಆಳ್ವ, ಡಾ.ಮೀನಾಕ್ಷಿ ರಾಮಚಂದ್ರ ಸೇರಿದಂತೆ ಲೇಖಕರು, ಕಲಾವಿದರು ಉಪಸ್ಥಿತರಿದ್ದು, ನುಡಿನಮನ ಸಲ್ಲಿಸಿದರು. ನುಡಿ ನಮನ ಕಾರ್ಯಕ್ರಮವನ್ನು
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ನಡೆಸಿಕೊಟ್ಟರು.












