ಇತ್ತೀಚಿನ ಸುದ್ದಿ
Mangaluru | ಪೋಪ್ ಫ್ರಾನ್ಸಿಸ್ ಜಗತ್ತಿಗೆ ಬೆಳಕಾಗಿದ್ದರು: ಶ್ರದ್ಧಾಂಜಲಿ ಸಭೆಯಲ್ಲಿ ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ
25/04/2025, 21:24

ಮಂಗಳೂರು(reporterkarnataka.com): ಮಂಗಳೂರು ಧರ್ಮಪ್ರಾಂತ್ಯದ ವತಿಯಿಂದ ಕೆಥೋಲಿಕರ ಪರಮೋಚ್ಛ ಜಗದ್ಗುರು ಪೋಪ್ ಫ್ರಾನ್ಸಿಸ್ ಅವರಿಗೆ ಶ್ರದ್ಧಾಂಜಲಿ ಸಭೆ ಶುಕ್ರವಾರ ನಗರದ ಮಿಲಾಗ್ರಿಸ್ ಚರ್ಚ್ ವಠಾರದಲ್ಲಿ ನಡೆಸಲಾಯಿತು.
ಮಂಗಳೂರು ಬಿಷಪ್ ಅ|ವಂ|ಡಾ| ಪೀಟರ್ ಪಾವ್ಲ್ ಸಲ್ಡಾನ್ಹಾ ಅವರು ಶ್ರದ್ದಾಂಜಲಿ ಅರ್ಪಿಸಿ ಮಾತನಾಡಿ, ಪೋಪ್ ಫ್ರಾನ್ಸಿಸ್ ಅವರು ಜಗತ್ತಿಗೆ ಬೆಳಕಾಗಿದ್ದಾರೆ. ಮಕ್ಕಳು, ಯುವಕರು, ಬಡವರು, ದೀನರು ಮತ್ತು ವಲಸಿಗರಿಗೆ ಹತ್ತಿರವಾಗಿದ್ದರು. ಪೋಪ್ ಫ್ರಾನ್ಸಿಸ್ ನಮಗೆ ಸಹೋದರತ್ವವನ್ನು ಕಲಿಸಿದ್ದಾರೆ ಎಂದರು.
ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ| ಎಂ. ಮೋಹನ್ ಆಳ್ವ ಮಾತನಾಡಿ, ಪೋಪ್ ಫ್ರಾನ್ಸಿಸ್ ಅವರು ಪ್ರೀತಿ, ಸರಳತೆಯ ಜೀವನದಿಂದಾಗಿ ಜಾಗತಿಕ ಸುಧಾರಣಾವಾದಿಯಾಗಿ ಗುರುತಿಸಿಕೊಂಡಿದ್ದಾರೆ. ಜಗತ್ತಿಗೆ ಪರಿಸರ ಪ್ರೀತಿ, ಸಹಬಾಳ್ವೆಯ ಪಾಠ ಮಾಡಿದ್ದಾರೆ. ಸಂಪ್ರದಾಯವಾದಿಯಾಗದೆ ಪವಿತ್ರಸಭೆಯಲ್ಲಿ ಬದಲಾವಣೆ, ನವೀನತೆಯೊಂದಿಗೆ ಜನರ ಪೋಪ್ ಎಂದೇ ಕರೆಯಲ್ಪಟ್ಟವರು. ಚರ್ಚ್ ಬಡವರ ಪರ ಇರಬೇಕೆಂದು ಹೇಳಿದರು. ರೋಮಿನಲ್ಲಿ ಕೈದಿಗಳ ಪಾದ ತೊಳೆದು ಜಗತ್ತಿಗೆ ಸರಳತೆಯನ್ನು ತೋರಿದವರು. ಧರ್ಮ ಸರಳೀಕರಣಗೊಳಿಸಿ ಜನರ ಪ್ರೀತಿ ಗಳಿಸಿ, ಯುವಜನತೆಯನ್ನು ಚರ್ಚ್ಗಳತ್ತ ಆಕರ್ಷಿಸಿದರು. ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದ್ದಾರೆ. ಪೋಪ್ ಅವರ ಅಗಲಿಕೆ ಜಗತ್ತಿಗೆ ಅಪಾರ ನಷ್ಟವನ್ನುಂಟು ಮಾಡಿದೆ ಎಂದು ನುಡಿದರು.
ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ವಿಶ್ವದಲ್ಲಿ ಪ್ರೀತಿಯ ಹೃದಯ ತೆರೆದವರಾಗಿದ್ದಾರೆ. ಬಡವರ ಕಣ್ಣೀರು ಒರೆಸಿ ಅವರನ್ನು ಮುನ್ನಡೆಸಿದ್ದಾರೆ. ಜಗತ್ತಿನ ಮಾನವ ಸಂಕುಲಕ್ಕೆ ಅವರ ನಿಧನ ನಷ್ಟವಾಗಿದೆ. ಭಗವಂತ ಅವರ ಆತ್ಮಕ್ಕೆ ಶಾಂತಿ ಕರುಣಿಸಲಿ ಎಂದು ಹೇಳಿದರು.
ಸಾಹಿತಿ ಜ್ಯೋತಿ ಚೇಳಾರು ಉಪನ್ಯಾಸ ನೀಡಿದರು.
ಮಂಗಳೂರು ಧರ್ಮಪ್ರಾಂತ್ಯದ ವಿಶ್ರಾಂತ ಬಿಷಪ್ ಅ|ವಂ|ಡಾ| ಅಲೋಶಿಯಸ್ ಪಾವ್ಲ್ ಡಿ’ಸೋಜಾ, ಸಂಸದ ಕ್ಯಾ| ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ್ ಕಾಮತ್, ಹರೀಶ್ ಪೂಂಜಾ, ಮಾಜಿ ಸಚಿವ ಬಿ. ರಮಾನಾಥ ರೈ, ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಪೂಜಾರಿ, ಮಾಜಿ ಶಾಸಕ ಜೆ.ಆರ್.ಲೋಬೊ, ನ್ಯಾಯವಾದಿ ಎಂ.ಪಿ. ನರೋನ್ಹಾ, ಬಿಜೆಪಿ ಯುವ ಮೋರ್ಚ ಜಿಲ್ಲಾಧ್ಯಕ್ಷ ನಂದನ್ ಮಲ್ಯ, ಮಂಗಳೂರು ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ವಂ| ಜೆ.ಬಿ. ಸಲ್ಡಾನ್ಹಾ, ರೋಯ್ ಕ್ಯಾಸ್ತಲಿನೊ, ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಟ್ಯಾನಿ ಆಳ್ವಾರಿಸ್, ಪ್ರಮುಖರಾದ ಎಲಿಯಾಸ್ ಫೆರ್ನಾಂಡಿಸ್, ವಂ| ಫಾವುಸ್ತಿನ್ ಲೋಬೊ, ಜೋಯ್ಲಾಸ್ ಪಿಂಟೊ, ವಂ| ಡಾ| ಡೇನಿಯಲ್ ವೇಗಸ್, ವಂ| ಡಾ| ಜೋಸೆಫ್ ಮಾರ್ಟಿಸ್, ಶ್ರೀಕಾಂತ್ ಕಾಸರಗೋಡು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.