ಇತ್ತೀಚಿನ ಸುದ್ದಿ
Mangaluru | ‘ಹೀರೋಸ್ ಆ್ಯಂಡ್ ಹೀರೋಯಿನ್ಸ್ ಆಫ್ ಟ್ವೆಂಟಿಯತ್ ಸೆಂಚುರಿ ಲೆಪ್ರಸಿ ವರ್ಕ್ ಇನ್ ಇಂಡಿಯಾ’ ಕೃತಿ ಲೋಕಾರ್ಪಣೆ
26/03/2025, 16:47

ಮಂಗಳೂರು(reporterkarnataka.com): ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜಿನ ಚರ್ಮ ರೋಗ ಶಾಸ್ತ್ರ, ಲೈಂಗಿಕ ರೋಗ ಶಾಸ್ತ್ರ ಮತ್ತು ಕುಷ್ಠ ರೋಗ ಶಾಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಕರಾವಳಿ ಚರ್ಮರೋಗ ಚಿಕಿತ್ಸಾ ತಜ್ಞರ ಸಂಘದ ಸಹಕಾರದೊಂದಿಗೆ ‘ಹೀರೋಸ್ ಆ್ಯಂಡ್ ಹೀರೋಯಿನ್ಸ್ ಆಫ್ ಟ್ವೆಂಟಿಯತ್ ಸೆಂಚುರಿ ಲೆಪ್ರಸಿ ವರ್ಕ್ ಇನ್ ಇಂಡಿಯಾ’ ಎಂಬ ಪುಸ್ತಕ ಬಿಡುಗಡೆ ಸಮಾರಂಭ ಮಾರ್ಚ್ 22ರಂದು ಕಾಲೇಜಿನ ದಶಮಾನೋತ್ಸವ ಸ್ಮಾರಕ ಸಭಾಂಗಣದ ನಾಲಡ್ಜ್ ಸೆಂಟರ್ ನಲ್ಲಿ ನಡೆಯಿತು.
ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ, ನಿಯೋಜಿತ ನಿರ್ದೇಶಕ ಫಾ. ಫೌಸ್ತಿನ್ ಲೂಕಸ್ ಲೋಬೊ, ಹೊಸದಿಲ್ಲಿಯ ಸಾಸಕಾವಾ ಇಂಡಿಯಾ ಲೆಪ್ರಸಿ ಫೌಂಡೇಶನಿನ ಸಿಇಒ ಗೌರಬ್ ಸೇನ್ ಅವರು ಉಪಸ್ಥಿತರಿದ್ದು. ಕೃತಿಯನ್ನು ಬಿಡುಗಡೆ ಮಾಡಿದರು.
ಫಾದರ್ ಮುಲ್ಲರ್ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಕುಷ್ಠ ಮತ್ತು ಇತರ ರೋಗಗಳ ನಿರ್ಮೂಲನಾ ವಿಭಾಗದ ಮಾಜಿ ಸಲಹೆಗಾರ ಹಾಗೂ ಸಾಸಕಾವಾ ಇಂಡಿಯಾ ಲೆಪ್ರಸಿ ಫೌಂಡೇಶನಿನ ಟ್ರಸ್ಟಿ ಡಾ. ಡೆರಿಕ್ ಎ. ಲೋಬೊ ಅವರು ಮತ್ತು ವಿಶ್ವ ಆರೋಗ್ಯ ಸಂಸ್ಥೆಯ ಕುಷ್ಠ ರೋಗ ನಿರ್ಮೂಲನೆಯ ತಾಂತ್ರಿಕ ಸಲಹಾ ತಂಡದ ಮಾಜಿ ಅಧ್ಯಕ್ಷ ಡಾ. ಮೋಹನ್ ಡಿ. ಗುಪ್ತೆ ಅವರು ರಚಿಸಿರುವ ಈ ಕೃತಿಯಲ್ಲಿ 20ನೇ ಶತಮಾನದಲ್ಲಿ ಭಾರತದಲ್ಲಿ ಕುಷ್ಠ ರೋಗ ನಿವಾರಣೆಗಾಗಿ ಶ್ರಮಿಸಿದ ಫಾದರ್ ಮುಲ್ಲರ್ ಸಂಸ್ಥೆಗಳ ಸ್ಥಾಪಕ ಫಾ. ಅಗಸ್ಟಸ್ ಮುಲ್ಲರ್ ಸೇರಿದಂತೆ 45 ಜನ ಹೀರೋಗಳು ಮತ್ತಿ ಹೀರೋಯಿನ್ಗಳು ಹಾಗೂ 16 ಸಂಸ್ಥೆಗಳ ಮಾಹಿತಿ ಇದೆ.
ಫಾದರ್ ಮುಲ್ಲರ್ ಅವರು 1890 ರಲ್ಲಿ ಸೈಂಟ್ ಜೋಸೆಫ್ ಕುಷ್ಠ ರೋಗ ಚಿಕಿತ್ಸಾಲಯವನ್ನು ಸ್ಥಾಪಿಸಿ ಕುಷ್ಠ ರೋಗಿಗಳ ಸೇವೆಗಾಗಿಯೇ ತಮ್ಮ ಬದುಕನ್ನು ಮುಡಿಪಾಗಿಟ್ಟಿದ್ದ ವಿಷಯ ಈ ಕೃತಿಯಲ್ಲಿದೆ. ಡಾ. ಡೆರಿಕ್ ಎ ಲೋಬೊ ಅವರನ್ನು ಕುಷ್ಠ ರೋಗ ನಿವಾರಣೆ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಫಾದರ್ ಮುಲ್ಲರ್ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.
ಚರ್ಮ ರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಜಸಿಂತಾ ಮಾರ್ಟಿಸ್ ಸ್ವಾಗತಿಸಿದರು. ವಿಭಾಗದ ಮಾಜಿ ಮುಖ್ಯಸ್ಥ ಡಾ. ನಂದ ಕಿಶೋರ್ ಅವರು ಕೃತಿ ಪರಿಚಯ ಮಾಡಿದರು. ಡಾ. ಡೆರಿಕ್ ಎ. ಲೋಬೊ ಅವರು ಪುಸ್ತಕವನ್ನು ಹೊರ ತರಲು ಮಾಹಿತಿ ಕಲೆ ಹಾಕುವಲ್ಲಿ ಪಟ್ಟ ಶ್ರಮವನ್ನು ವಿವರಿಸಿದರು. ಜಗತ್ತಿನಲ್ಲಿರುವ ಕುಷ್ಠ ರೋಗದಲ್ಲಿ ಶೇ. 60 ರಷ್ಟು ಪ್ರಮಾಣ ಭಾರತದಲ್ಲಿ ಇರುವುದಕ್ಕೆ ಕಾರಣವೇನೆಂದು ಕಂಡುಕೊಳ್ಳುವ ಅಗತ್ಯವಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಫಾದರ್ ಮುಲ್ಲರ್ ಚಾರಿಟೆಬಲ್ ಸಂಸ್ಥೆಗಳ ನಿರ್ದೇಶಕ ಫಾ. ರಿಚಾರ್ಡ್ ಅಲೋಶಿಯಸ್ ಕುವೆಲ್ಲೊ ಮಾತನಾಡಿ ಕುಷ್ಠ ರೋಗಿಗಳಿಗಾಗಿ ಆಸ್ಪತ್ರೆ ತೆರೆದು ಸೇವೆ ಸಲ್ಲಿಸಿದ ಫಾದರ್ ಮುಲ್ಲರ್ ಅವರ ಸೇವೆಯನ್ನು ಸ್ಮರಿಸಿದರು.
ಕಾಲೇಜಿನ ಡೀನ್ ಡಾ. ಆ್ಯಂಟನಿ ಸಿಲ್ವನ್ ಡಿ’ಸೋಜಾ, ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿ ಫಾ. ಅಜಿತ್ ಮಿನೇಜಸ್, ಮೆಡಿಕಲ್ ಕಾಲೇಜು ಆಸ್ಪತ್ರೆಯ ಆಡಳಿತಾಧಿಕಾರಿ ಫಾ. ಜಾರ್ಜ್ ಜೀವನ್ ಸಿಕ್ವೇರಾ ಮತ್ತು ಇತರರು ಉಪಸ್ಥಿತರಿದ್ದರು. ಕರಾವಳಿ ಚರ್ಮ ರೋಗ ಚಿಕಿತ್ಸಾ ತಜ್ಞರ ಸಂಘದ ಅಧ್ಯಕ್ಷರಾದ ಡಾ. ರೋಚೆಲ್ ಮೊಂತೇರೊ ವಂದಿಸಿದರು. ಡಾ. ಸೋನಲ್ ಫೆರ್ನಾಂಡಿಸ್ ಮತ್ತು ಡಾ. ಪ್ರಜ್ಞಾ ಶೆಟ್ಟಿ ಅವರು ಕಾರ್ಯಕ್ಮ ನಿರ್ವಹಿಸಿದರು.