ಇತ್ತೀಚಿನ ಸುದ್ದಿ
Mangaluru | ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ ನೀರುಮಾರ್ಗ ಶಾಖೆಯ ಗ್ರಾಹಕರ ಸಭೆ
02/06/2025, 11:38

ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೀರುಮಾರ್ಗ ಶಾಖೆಯ ತೃತೀಯ ವಾರ್ಷಿಕೋತ್ಸವದ ಪ್ರಯುಕ್ತ ಗ್ರಾಹಕರ ಸಭೆಯು ಸಂಘದ ಅಧ್ಯಕ್ಷ, ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಅಧ್ಯಕ್ಷತೆಯಲ್ಲಿ ನೀರುಮಾರ್ಗ ಶಾಖೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಸಂಘದ ಸದಸ್ಯರುಗಳಾದ ಪುಟ್ಟಸ್ವಾಮಿ ಎಚ್., ಸತೀಶ್ ಕಂಪ, ಲಕ್ಷಣ ಪೂಜಾರಿ, ಲವೀನಾ ಪಿರೇರಾ ಹಾಗೂ ಶಶಿಪ್ರಭ ದೀಪ ಪ್ರಜ್ವಲನೆ ಮಾಡಿ ಉದ್ಘಾಟಿಸಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಠೇವಣಿ ಸಂಗ್ರಹಣೆಯೊಂದಿಗೆ ಸಾಲ ವಸೂಲಾತಿ ಕ್ರಮವು ಸರಿಯಾದ ಪ್ರಮಾಣದಲ್ಲಿ ಆದಾಗ ಮಾತ್ರ ಸಂಘದ ಬೆಳವಣಿಗೆ ಸಾಧ್ಯ , ಸಿಬ್ಬಂದಿ ವರ್ಗ, ಗ್ರಾಹಕರ ಸಹಕಾರದೊಂದಿಗೆ ಪ್ರತಿ ವರ್ಷದಂತೆ ಈ ವರ್ಷವೂ ಸಂಘವು ಹೆಚ್ಚಿನ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಾಗಿದೆ. ಅಗತ್ಯ ಸಂದರ್ಭಗಳಲ್ಲಿ ಹಿರಿಯ ನಾಗರಿಕ ಸದಸ್ಯರ ಮನೆಗೆ ಭೇಟಿ ನೀಡಿ ಸೇವೆ ನೀಡುತ್ತಿದ್ದೇವೆ. ಈಗಾಗಲೇ ಸಂಘದ ಸದಸ್ಯರಿಗೆ ಹಬ್ಬದ ಕೊಡುಗೆಯಾಗಿ 1000 ದಿನಗಳ ಠೇವಣಿಗಳಿಗೆ ವಿಶೇಷ ಬಡ್ಡಿ ದರ ಶೇ. 10.50 ವನ್ನು ನೀಡಲಾಗುತ್ತಿದ್ದು, ಚಿನ್ನಾಭರಣ ಸಾಲಗಳಿಗೆ ಪ್ರತಿ ಗ್ರಾಂ ಗೆ ಗರಿಷ್ಟ ಮೌಲ್ಯ ರೂ. ೭೭೮೮/- ರವರೆಗೆ ಯಾವುದೇ ಸೇವಾ ಶುಲ್ಕವಿಲ್ಲದೆ ಸಾಲ ನೀಡಲಾಗುತ್ತಿದೆ. ಸಂಘದಲ್ಲಿ ಲಭ್ಯವಿರುವ ಇ-ಸ್ಟಾಂಪಿಂಗ್ ಸೇವೆ, ವಿಮಾ ಸೇವೆ, ಭವಿಷ್ಯ ಸುರಕ್ಷಾ ಯೋಜನೆಯ ಜೊತೆಗೆ ಎಲ್ಲಾ ಸೇವೆಗಳನ್ನು ಸದುಪಯೋಗ ಮಾಡಿಕೊಳ್ಳುವಂತೆ ಗ್ರಾಹಕರಲ್ಲಿ ವಿನಂತಿಸಿದರು.
ಈ ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ, ನಿರ್ದೇಶಕರಾದ ಸೀತಾರಾಮ್ ಎನ್., ರಮಾನಾಥ ಸನಿಲ್, ಗೋಪಾಲ್ ಎಂ. ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂಘದ ನೀರುಮಾರ್ಗ ಶಾಖೆಯ ಸಿಬ್ಬಂದಿಯಾದ ಅಕ್ಷತಾ ಪಿ. ಸ್ವಾಗತಿಸಿ , ಲಾವಣ್ಯ ವಂದಿಸಿದರು. ಪ್ರಭಾರ ಶಾಖಾಧಿಕಾರಿ ಹರ್ಷಿತಾ ಕಾರ್ಯಕ್ರಮ ನಿರೂಪಿಸಿದರು.