ಇತ್ತೀಚಿನ ಸುದ್ದಿ
ಮಂದಾರ್ತಿ ಉದ್ಯಮಿಗೆ ಆನ್ಲೈನ್ ವಂಚನೆ: 3 ಮಂದಿ ಆರೋಪಿಗಳ ಬಂಧನ
18/09/2022, 10:32
ಉಡುಪಿ(reporterkarnataka.com): ಆನ್ ಲೈನ್ ವಂಚನೆ ಪ್ರಕರಣ ದಿನ ಕಳೆದಂತೆ ಹೆಚ್ಚಾಗುತ್ತಿದ್ದಂತೆ ಉಡುಪಿ ಜಿಲ್ಲೆಯ ಮಂದಾರ್ತಿ ಮೂಲದ ಉದ್ಯಮಿಯೋರ್ವರು 3 ಲಕ್ಷ ರೂ. ಕಳೆದುಕೊಂಡ ಘಟನೆ ನಡೆದಿದೆ. ಸಹಾಯ ಪಡೆಯುವ ನೆಪದಲ್ಲಿ ಉದ್ಯಮಿಗೆ ವಂಚನೆ ಮಾಡಲಾಗಿದೆ.
ಸೆ.4 ರಂದು ಅನಾಮಧೇಯ ವ್ಯಕ್ತಿಯೊಬ್ಬ ಯುರೋ ಬಾಂಡ್ ಕಂಪನಿಯ ಮಾಲೀಕನೆಂದು, ಯುರೋ ಬಾಂಡ್ ಡೀಲರ್ ಆಗಿರುವ ಮಂದಾರ್ತಿಯ ಉದ್ಯಮಿಯೊಬ್ಬರಿಗೆ ಕರೆ ಮಾಡಿ, ತನ್ನ ಮಗ ಅಪಘಾತಕ್ಕೀಡಾಗಿ ಗಾಯಗೊಂಡಿದ್ದಾನೆ. ಮಗನನ್ನು ಮಂಗಳೂರಿನ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲು ತುರ್ತಾಗಿ 3 ಲಕ್ಷ ರೂ. ಹಣವನ್ನು ಖಾತೆಗೆ ಕಳುಹಿಸಿ ಕೊಡುವಂತೆ ಕೇಳಿಕೊಂಡಿದ್ದರು.
ಆ ಕರೆಗೆ ಸ್ಪಂದಿಸಿದ ಉದ್ಯಮಿ ತನ್ನ ಹಾಗೂ ಸ್ನೇಹಿತರ ಖಾತೆಯಿಂದ ಒಟ್ಟು 3 ಲಕ್ಷ ರೂ. ಹಣವನ್ನು ಆನ್ ಲೈನ್ ಮೂಲಕ ಹಾಕಿದ್ದರು. ನಂತರ ಅನುಮಾನಗೊಂಡು ಯುರೋ ಬಾಂಡ್ ಕಂಪನಿಗೆ ಸಂಪರ್ಕಿಸಿ ಮಾಹಿತಿ ಪಡೆದಾಗ ಉದ್ಯಮಿ ಮೋಸ ಹೋಗಿರುವುದು ತಿಳಿದು ಬಂದಿದೆ.
ಮೋಸ ಹೋಗಿರುವುದು ತಿಳಿದ ಕೂಡಲೇ ಉದ್ಯಮಿಯು ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ವಂಚಕನ ನಂಬರ್ ಟ್ರೇಸ್ ಮಾಡಿದಾಗ, ಗುಜರಾತ್ ರಾಜ್ಯದ ಸೂರತ್ ಪ್ರದೇಶದಲ್ಲಿ ತೋರಿಸುತ್ತಿತ್ತು. ಅವನು ಮಹಾರಾಷ್ಟ್ರ ಥಾಣೆ ಮೂಲದ ವ್ಯಕ್ತಿಯೊಬ್ಬನ ಖಾತೆಗೆ ಹಣ ವರ್ಗಾವಣೆ ಮಾಡಿಸಿಕೊಂಡಿರುವುದು ತಿಳಿದುಬಂದಿದೆ. ಕೂಡಲೇ ಉಡುಪಿ ಪೊಲೀಸರ ತಂಡ, ಮಹಾರಾಷ್ಟ್ರಕ್ಕೆ ತೆರಳಿ ಆನ್ ಲೈನ್ ವಂಚನೆ ಮಾಡಿದ ವಂಚಕ ಹಾಗೂ ಆತನ ಜೊತೆಗೆ ಇದ್ದ ಇಬ್ಬರನ್ನು ವಶಕ್ಕೆ ಪಡೆದು ಉಡುಪಿಗೆ ಕರೆ ತಂದಿದ್ದಾರೆ.














