ಇತ್ತೀಚಿನ ಸುದ್ದಿ
Mangaluru | ಮದುವೆ ಸಂಬಂಧದ ಬಗ್ಗೆ ಮನಸ್ತಾಪ ; ಚಿಕ್ಕಪ್ಪನನ್ನೆ ಕೊಂದ ಮುಸ್ತಾಫ
23/05/2025, 10:34

ಮಂಗಳೂರು (www.reporterkarnataka.com)
ಮದುವೆ ಸಂಬಂಧ ವಿಚಾರ ಕುರಿತು ತನ್ನ ಚಿಕ್ಕಪ್ಪನನ್ನೇ ಚೂರಿ ಇರಿದು ಕೊಂದ ಘಟನೆ ಮಂಗಳೂರಿನ ವಳಚ್ಚಿಲ್ ಬಳಿ ಗುರುವಾರ ರಾತ್ರಿ ನಡೆದಿದೆ. ವಾಮಂಜೂರಿನ ನಿವಾಸಿ ಸುಲೈಮಾನ್ (50) ಮೃತರಾಗಿದ್ದು, ಅವರ ತಮ್ಮನ ಮಗ ವಳಚ್ಚಿಲ್ ನಿವಾಸಿ ಮುಸ್ತಫಾ(30) ಚೂರಿ ಇರಿದು ಕೊಲೆ ಮಾಡಿದ್ದಾನೆ ಎಂದು ವರದಿಯಾಗಿದೆ.
ಸುಲೈಮಾನ್ ಅವರ ಮಕ್ಕಳಾದ ರಿಯಾಬ್ ಹಾಗೂ ಸಿಯಾಬ್ ಅವರಿಗೂ ಮುಸ್ತಫಾ ಚೂರಿ ಇರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ : ಮದುವೆ ಬ್ರೋಕರ್ ಆಗಿ ಕೆಲಸ ಮಾಡುತ್ತಿರುವ ಸುಲೈಮಾನ್ ಅವರು ಎಂಟು ತಿಂಗಳ ಹಿಂದೆ ಮುಸ್ತಾಫ ಅವರಿಗೆ ಅಡ್ಡೂರು ಮೂಲದ ಶಹೀನಾಝ್ ಎನ್ನುವ ಹುಡುಗಿ ಹುಡುಕಿ ಮದುವೆ ಸಂಬಂಧವನ್ನು ಕುದುರಿಸಿದ್ದರು. ಮದುವೆಯಾದ ಬಳಿಕ ನಿರಂತರವಾಗಿ ಮುಸ್ತಾಫ ಹಾಗೂ ಪತ್ನಿಯ ನಡುವೆ ಮನಸ್ತಾಪ ಉಂಟಾಗುತ್ತಿತ್ತು ಹಾಗೂ ಹುಡುಗಿ ಮುಸ್ತಾಫ ಅನುಮತಿ ಇಲ್ಲದೆ ತವರು ಮನೆಗೆ ಹೋಗುತ್ತಿದ್ದಳು, ಮಾತ್ರವಲ್ಲದೆ ಇನ್ನೂ ಹಲವು ವಿಚಾರಗಳ ಬಗ್ಗೆ ಮುಸ್ತಾಫ ಕುಪಿತಗೊಂಡಿದ್ದ.
ಘಟನೆಯಾದ ದಿನದಂದು ಮುಸ್ತಾಫ ಸುಲೈಮಾನ್ ಅವರಿಗೆ ಕಾಲ್ ಮಾಡಿ ಅವಾಚ್ಯವಾಗಿ ಬೈದಿದ್ದು, ಅದಕ್ಕೆ ಪ್ರತಿಯಾಗಿ ವಿಚಾರದ ಕುರಿತು ಚರ್ಚಿಸಲು ಸುಲೈಮಾನ್ ತಮ್ಮ ಮಕ್ಕಳ ಜತೆಗೆ ವಳಚ್ಚಿಲ್ನ ಮುಸ್ತಾಫ ನಿವಾಸಕ್ಕೆ ತೆರಳಿದ್ದರು. ವಾಗ್ವಾದ ನಡೆದು ಫಲಕಾರಿಯಾಗಲಿಲ್ಲ ಎಂದು ಸುಲೈಮಾನ್ ವಾಪಾಸ್ ಮನೆ ಗೇಟ್ಗೆ ಬರುತ್ತಿದ್ದ ಸಂದರ್ಭ ಮುಸ್ತಾಫ ಚೂರಿ ತೆಗೆದುಕೊಂಡು ಬಂದು ಸುಲೈಮಾನ್ ಕುತ್ತಿಗೆಯ ಬಲ ಭಾಗಕ್ಕೆ ಇರಿದಿದ್ದು ಅಲ್ಲಿಯೇ ಕುಸಿದು ಬಿದ್ದಿದ್ದಾರೆ. ಬಳಿಕ ಇಬ್ಬರೂ ಪುತ್ರರ ಮೇಲೂ ಚೂರಿಯಿಂದ ದಾಳಿ ಮಾಡಿದ್ದು, ಗಾಯಾಳುಗಳನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದರು. ಆದರೆ ಸುಲೈಮಾನ್ ದಾರಿ ಮಧ್ಯದಲ್ಲಿ ಸಾವಿಗೀಡಾಗಿದ್ದಾರೆ.
ಮುಸ್ತಾಫನನ್ನು ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿಸಿದ್ದಾರೆ.