ಇತ್ತೀಚಿನ ಸುದ್ದಿ
ಬೆಂಗ್ರೆ-ತಣ್ಣೀರುಬಾವಿ ಪರಿಸರದ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕೆ ಕಾನೂನು ತೊಡಕು: ಶಾಸಕ ವೇದವ್ಯಾಸ ಕಾಮತ್ ಆಕ್ರೋಶ
21/11/2025, 19:14
ಮಂಗಳೂರು(reporterkarnataka.com): ಬೆಂಗ್ರೆ-ತಣ್ಣೀರುಬಾವಿ ಪರಿಸರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದ ಇಲ್ಲಸಲ್ಲದ ನೂತನ ನಿಯಮದಿಂದಾಗಿ ಅನೇಕ ಕುಟುಂಬಗಳು ವಿದ್ಯುತ್ ಸಂಪರ್ಕವಿಲ್ಲದೇ ಕತ್ತಲೆಯಲ್ಲಿ ಬದುಕು ನಡೆಸುವಂತಾಗಿದೆ ಎಂದು ಶಾಸಕ ವೇದವ್ಯಾಸ ಕಾಮತ್ ರವರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಕೇವಲ ಹಕ್ಕುಪತ್ರಗಳನ್ನು ಹೊಂದಿರುವ ಈ ಪ್ರದೇಶದಲ್ಲಿ ಕಳೆದ ಅನೇಕ ವರ್ಷಗಳಿಂದ ಯಾವುದೇ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಲು ಗ್ರಾಮ ಲೆಕ್ಕಾಧಿಕಾರಿಗಳು ನೀಡುವ ವಾಸ್ತವ್ಯ ದೃಢೀಕರಣ ಪತ್ರವೇ ಸಾಕಿತ್ತು. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಅದೇ ನಿಯಮವಿದ್ದು ಸ್ಥಳೀಯರಿಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರದ ನೂತನ ನಿಯಮಗಳ ಪ್ರಕಾರ ವಾಸ್ತವ್ಯ ದೃಢೀಕರಣ ಪತ್ರ ಮಾತ್ರವಲ್ಲದೇ, ಈ ಪ್ರದೇಶಕ್ಕೆ ಲಭ್ಯವಿರದ ಇತರೆ ದಾಖಲೆ ಪತ್ರಗಳನ್ನೂ ಸಹ ಹಾಜರುಪಡಿಸುವುದು ಕಡ್ಡಾಯವಾಗಿದೆ. ಇಲ್ಲದಿದ್ದರೆ ವಿದ್ಯುತ್ ಸಂಪರ್ಕ ಇಲ್ಲ ಎನ್ನುತ್ತಿರುವುದು ಸ್ಥಳೀಯರಿಗೆ ಇನ್ನಿಲ್ಲದ ತಲೆ ನೋವಾಗಿದೆ ಎಂದರು.
ವಿದ್ಯುತ್ ಸಂಪರ್ಕವು ಮೂಲಭೂತ ಸೌಕರ್ಯವಾಗಿದ್ದು ರಾಜ್ಯ ಸರ್ಕಾರದ ಎಡವಟ್ಟಿನಿಂದಾಗಿ ಮೆಸ್ಕಾಂನವರಿಗೆ ಸಂಪರ್ಕ ನೀಡಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ಕಳೆದ ಕೆಲವಾರು ತಿಂಗಳಿನಿಂದ ಇಲ್ಲಿನ ನೂರಾರು ಮನೆಗಳು ಕತ್ತಲೆಯಲ್ಲಿ ಬದುಕುವಂತಾಗಿದೆ. ಈ ಬಗ್ಗೆ ಸ್ಥಳೀಯರು ನೋವು ತೋಡಿಕೊಂಡಿದ್ದು ಕೂಡಲೇ ಹಿಂದಿನಂತೆಯೇ ಕ್ರಮ ವಹಿಸುವಂತೆ ಸ್ಥಳೀಯರ ಪರವಾಗಿ ಸರ್ಕಾರಕ್ಕೆ ಪತ್ರ ಬರೆದು ಆಗ್ರಹಿಸುತ್ತೇನೆ ಎಂದರು.













