ಇತ್ತೀಚಿನ ಸುದ್ದಿ
ಕುದ್ರೋಳಿ: ಆತ್ಮಶಕ್ತಿ ಲಾಲ್ಭಾಗ್ ಶಾಖೆಯಿಂದ ಉಚಿತ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರ
25/02/2026, 15:06
ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘ (ನಿ.) ಲಾಲ್ಭಾಗ್ ಶಾಖೆಯ 11ನೇ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ಸಾಮಾನ್ಯ ವೈದ್ಯಕೀಯ ಮತ್ತು ನೇತ್ರ ತಪಾಸಣಾ ಶಿಬಿರವು ಕುದ್ರೋಳಿ ಯುವಕ ಸಂಘ (ರಿ), ಕುದ್ರೋಳಿ, ಮಂಗಳೂರು ಹಾಗೂ ಎನ್.ಜಿ. ವಲ್ಡ್ ಚಾರಿಟೇಬಲ್ ಟ್ರಸ್ಟ್ö (ರಿ) ಮಂಗಳೂರು ಇವರ ಜಂಟಿ ಸಹಯೋಗದೊಂದಿಗೆ ಕುದ್ರೋಳಿ ಯುವಕ ಸಂಘ (ರಿ), ಕುದ್ರೋಳಿ, ಮಂಗಳೂರು ಇಲ್ಲಿ ಜರುಗಿತು.
ಶಿಬಿರವನ್ನು ಉದ್ಯಮಿಯಾದ ಶ್ರೀ ಸುಕುಮಾರ್ ಶೆಟ್ಟಿ ಅವರು ಉದ್ಘಾಟಿಸಿ, ಮಾತನಾಡಿ “ಆಧುನಿಕ ಕಾಲದಲ್ಲಿ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡುವುದು ಅಗತ್ಯ. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲಾ ವರ್ಗದ ಬಡ ಜನರಿಗೆ ಆರೋಗ್ಯದ ದೃಷ್ಟಿಯಿಂದ ಜನರ ಕಾಳಜಿ ಮಾಡುತ್ತಿರುವುದು ಶ್ಲಾಘನೀಯ. ಹಾಗೆಯೇ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜನೆ ಮಾಡಿ, ಹೆಚ್ಚು ಜನರು ಇದರ ಪ್ರಯೋಜನ ಪಡೆಯುವಂತಾಗಲಿ” ಎಂದು ತಿಳಿಸಿದರು.
ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಚಿತ್ತರಂಜನ್ ಬೋಳಾರ್ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು 14 ವರ್ಷಗಳಿಂದ ಸಂಘದ ಪ್ರತೀ ಶಾಖೆಯ ವಾರ್ಷಿಕೋತ್ಸವದ ಪ್ರಯುಕ್ತ ಉಚಿತ ವೈದ್ಯಕೀಯ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿದ್ದು, ಈ ವೈದ್ಯಕೀಯ ಶಿಬಿರವು 103ನೇ ಶಿಬಿರವಾಗಿದ್ದು, ತುಂಬಾ ಜನರು ಇದರ ಸದುಪಯೋಗ ಪಡೆಯುತ್ತಿದ್ದಾರೆ. ಆರೋಗ್ಯದ ಬಗ್ಗೆ ಎಲ್ಲರೂ ಹೆಚ್ಚಿನ ಕಾಳಜಿಯನ್ನು ವಹಿಸುವುದು ಅಗತ್ಯ. ರೋಗ ಬರುವ ಮೊದಲೇ ನಿಯಮಿತ ಆರೋಗ್ಯ ತಪಾಸಣೆ ಮಾಡುವುದು ಉತ್ತಮ. ಹೆಚ್ಚಿನ ಬಡ ಜನರು ವರ್ಷಕ್ಕೆ ಒಮ್ಮೆಯಾದರೂ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ, ತಪಾಸಣೆ ಮಾಡುವುದೇ ವೈದ್ಯಕೀಯ ಶಿಬಿರದ ಮುಖ್ಯ ಗುರಿಯಾಗಿದೆ ಎಂದು ಹೇಳಿದರು. ಸಹಕಾರಿ ಸಂಘದ ಸದಸ್ಯರಿಗೆ ಯಶಸ್ವಿನಿ ಆರೋಗ್ಯ ವಿಮೆಯ ನೋಂದಣಿಯ ಪ್ರಯೋಜನ ಸಂಘದ ಎಲ್ಲಾ ಶಾಖೆಗಳಲ್ಲಿ ಲಭ್ಯವಿದ್ದು, ಇದರ ಪ್ರಯೋಜನ ಪಡೆಯಬೇಕೆಂದು ವಿನಂತಿಸಿದರು.
ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಪೌಂಡೇಶನ್, ಮಂಗಳೂರು ಇದರ ವಿದ್ಯಾರ್ಥಿನಿ ಕುಮಾರಿ ಮಂಜುಳ ರವರು ಮಾತನಾಡಿ ಆರೋಗ್ಯವೇ ಭಾಗ್ಯ, ಎಲ್ಲಾ ರೀತಿಯ ಸಾಧನೆಗೆ ಆರೋಗ್ಯವು ಮುಖ್ಯವಾದದ್ದು. ರೋಗದ ಸೂಚನೆ ಬಂದಾಗಲೇ ಸೂಕ್ತ ಚಿಕಿತ್ಸೆ ಪಡೆಯುವುದು ಮುಖ್ಯವೆಂದು ತಿಳಿಸಿ, ಶಿಬಿರದಲ್ಲಿ ಲಭ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಕುದ್ರೋಳಿ ಯುವಕ ಸಂಘ (ರಿ.) ಕುದ್ರೋಳಿಯ ಅಧ್ಯಕ್ಷರಾದ ಶ್ರೀ ರಾಜೇಶ್ ಕುದ್ರೋಳಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾದ್ಯಕ್ಷರಾದ ಶ್ರೀ ನೇಮಿರಾಜ್ ಪಿ, ನಿರ್ದೇಶಕರಾದ ಶ್ರೀ ಗೋಪಾಲ್ ಎಂ., ಶ್ರೀಮತಿ ಉಮಾವತಿ, ಮುಖ್ಯಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಸೌಮ್ಯ ವಿಜಯ್ , ಮಂಗಳ ಕಾಲೇಜು, ಮಂಗಳ ಆಸ್ಪತ್ರೆ ಮತ್ತು ಮಂಗಳ ಕಿಡ್ನಿ ಪೌಂಡೇಶನ್, ಮಂಗಳೂರು ಇದರ ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀ ವಿಜೇಶ್, ಕುದ್ರೋಳಿ ಯುವಕ ಸಂಘದ ಸಂಚಾಲಕಿಯಾದ ಶ್ರೀಮತಿ ರಾಧಾ ಭಾಸ್ಕರ್, ಕಾರ್ಯದರ್ಶಿಯಾದ ಶ್ರೀ ಕೃಷ್ಣಕುಮಾರ್ , ಜೊತೆ ಕಾರ್ಯದರ್ಶಿಯಾದ ಶ್ರೀ ರವಿ ಅಮೀನ್, ಕೋಶಾಧಿಕಾರಿಯಾದ ಶ್ರೀ ದಿನೇಶ್ ಅಂಚನ್ ಮತ್ತಿತರರು ಉಪಸ್ಧಿತರಿದ್ದರು.
ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಮಿಕ್ಕಿ ಶಿಬಿರಾರ್ಥಿಗಳಿಗೆ ಆರೋಗ್ಯ ತಪಾಸಣೆ , ಕಣ್ಣಿನ ತಪಾಸಣೆ ಹಾಗೂ ಉಚಿತ ಕನ್ನಡಕ ವಿತರಣೆಯನ್ನು ಮಾಡಲಾಯಿತು..
ಕುದ್ರೋಳಿ ಯುವಕ ಸಂಘದ ಸದಸ್ಯರಾದ ಶ್ರೀ ಅಶೋಕ್ ಕುಮಾರ್ ರವರು ಸ್ವಾಗತಿಸಿ, ಶ್ರೀಮತಿ ರಂಜಿತ ಪ್ರಕಾಶ್ ವಂದಿಸಿದರು.













