ಇತ್ತೀಚಿನ ಸುದ್ದಿ
ಗ್ರಾಪಂ ನಿರ್ಮಿಸಿದ ತೋಡನ್ನೇ ಮುಚ್ಚಿದ ಖದೀಮ!: ಪ್ರಶ್ನಿಸಿದ ನೆರೆಮನೆಯವರಿಗೆ ಕಲ್ಲೇಟು; ಇಬ್ಬರು ಮಹಿಳೆಯರು ಸಹಿತ 3 ಮಂದಿಗೆ ಗಾಯ
29/03/2026, 22:02
ಸಾಂದರ್ಭಿಕ ಚಿತ್ರ
ಉಳ್ಳಾಲ(reporterkarnataka.com): ಕೊಣಾಜೆ ಠಾಣೆ ವ್ಯಾಪ್ತಿಯ ಅಂಬ್ಲಮೊಗರು ಗ್ರಾಮದ ಪಟ್ನಮೊಗರು ಎಂಬಲ್ಲಿ ಪಂಚಾಯತ್ ನಿರ್ಮಿಸಿದ ಮಳೆ ನೀರಿನ ತೋಡನ್ನೇ ಖದೀಮನೊಬ್ಬ
ಮುಚ್ಚಿದ್ದು, ಇದನ್ನು ಪ್ರಶ್ನಿಸಿದ ನೆರೆಮನೆಯ ಇಬ್ಬರು ಮಹಿಳೆಯರು ಹಾಗೂ ಯುವಕನಿಗೆ ಕಲ್ಲಿನಿಂದ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಪಟ್ನಮೊಗರು ನಿವಾಸಿ ನಾಗೇಶ್ ಶೇಣವ ಹಲ್ಲೆ ನಡೆಸಿರುವ
ಆರೋಪಿಯಾಗಿದ್ದು, ಕೊಣಾಜೆ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.



ಆರೋಪಿ ನಾಗೇಶ್ ಶೇಣವ ನೆರೆಮನೆಯ ಬೇಬಿ(56), ಅವರ ಪುತ್ರ ರವಿರಾಜ್ ಮತ್ತು ಸೊಸೆ ವರ್ಷಾ ಎಂಬವರ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಇಂದು ಬೆಳಿಗ್ಗೆ 8.30 ರ ಸುಮಾರಿಗೆ ನಾಗೇಶ್ ಶೇಣವ ತನ್ನ ಅಂಗಳದಲ್ಲಿ ಹಲವು ವರ್ಷಗಳಿಂದ ಹಾದುಹೋಗುವ , ಪಂಚಾಯತ್ ನಿರ್ಮಿಸಿದ್ದಂತಹ ಮಳೆ ನೀರಿನ ತೋಡಿನ ಛೇಂಬರನ್ನು ಅಗೆದು, ಇಟ್ಟಿಗೆಯಿಂದ ಸಂಪೂರ್ಣವಾಗಿ ಮುಚ್ಚಿದ್ದಾನೆ. ಇದನ್ನು ನೆರೆಮನೆಯ ರವಿರಾಜ್ ಅವರು ಪ್ರಶ್ನಿಸಿದ್ದಾರೆ. ಈ ವೇಳೆ ನಾಗೇಶ್ ಶೇಣವ ಅವರ ಕೆನ್ನೆಗೆ ಹೊಡೆದು ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಮುಂದಾದ ಬೇಬಿ ಅವರಿಗೆ ಸ್ಥಳದಲ್ಲಿದ್ದ ಕಲ್ಲನ್ನು ಕಾಲಿಗೆ ಎಸೆದು ಗಂಭೀರ ರೀತಿಯಲ್ಲಿ ಹಲ್ಲೆ ನಡೆಸಿದ್ದಾನೆ. ಅದನ್ನು ಪ್ರಶ್ನಿಸಿದ ಸೊಸೆ ವರ್ಷಾ ಅವರ ಮೇಲೂ ಕಲ್ಲಿನಿಂದ ಹಲ್ಲೆ ನಡೆಸಿದ್ದಾನೆ.
ಈ ಕುರಿತು ಕೊಣಾಜೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ದೂರಿನಂತೆ ಬಿಎನ್ ಎಸ್ ಆಕ್ಟ್ ನಡಿ ಪ್ರಕರಣ ದಾಖಲಾಗಿದೆ.












