ಇತ್ತೀಚಿನ ಸುದ್ದಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯಿಂದ ‘ದೀಪಾವಳಿ ಪರ್ವದ ಐಸಿರ’ ಕಾರ್ಯಕ್ರಮ
21/10/2025, 19:36

ಮಂಗಳೂರು:(reporterkarnataka.com):ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಸಹಯೋಗದಲ್ಲಿ ದೀಪಾವಳಿ ಪರ್ಬದ ಐಸಿರ, ಪಾತೆರಕತೆ, ಕಬಿಗೋಷ್ಠಿ, ನೃತ್ಯ ಸಂಭ್ರಮ, ಪದರಂಗಿತ ಕಾರ್ಯಕ್ರಮ ಬಲ್ಮಠ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಮಂಗಳವಾರ ಜರಗಿತು.
ಕಾರ್ಯಕ್ರಮವನ್ನು ಪೆರ್ಲ ಹೊಂಬೆಳಕು ಶಿಕ್ಷಣ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ. ಕಿಶೋರ್ ಕುಮಾರ್ ರೈ ಶ್ರೇಣಿ ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಬೆಳಕಿನ ಹಬ್ಬ ಪ್ರಕೃತಿ ಆರಾಧನೆಯನ್ನು ಒಳಗೊಂಡಿದೆ. ಇಂದಿನ ಮಕ್ಕಳಿಗೆ ನಮ್ಮ ಆಚರಣೆಗಳ ಬಗ್ಗೆ ಅರಿವು ಮೂಡಿಸುವ ಶಿಕ್ಷಣ ನೀಡಬೇಕು. ಹಂಡೆ ತುಂಬಿಸಿ, ಅಲಂಕರಿಸಿ, ಎಣ್ಣೆ ಹಚ್ಚಿ ಸ್ನಾನ ಮಾಡುವ ಮೂಲಕ ಆರಂಭಗೊಳ್ಳುವ ಹಬ್ಬದ ಗೋಪೂಜೆ ಸೇರಿದಂತೆ ಬಲಿಯೇಂದ್ರನನ್ನು ಕರೆಯುವ ವಿಶೇಷ ಆಚರಣೆಗಳ ಮೂಲಕ ತನ್ನದೇ ಪ್ರಾಮುಖ್ಯೆ ಪಡೆದುಕೊಂಡಿದೆ ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಎಲ್ಲಾ ಧರ್ಮಗಳು ಹಿಂದಿನಂತೆ ಒಟ್ಟಾಗಿ ಇರಬೇಕು
ಹಬ್ಬಗಳು ಪ್ರಕೃತಿ ಯ ನೆಲೆಯಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಬೆಸೆದಿರುತ್ತದೆ. ಹಬ್ಬಗಳು ಎಂದರೆ ಎಲ್ಲರನ್ನೂ ಒಟ್ಟುಗೂಡಿಸುವುದಾಗಿದೆ ಎಂದರು.
ಬಲ್ಮಠ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ. ಜಗದೀಶ ಬಾಳ ಗೌರವ ಉಪಸ್ಥಿತಿ ವಹಿಸಿದ್ದರು. ಕಾರ್ಯಕ್ರಮದ ಸದಸ್ಯ ಸಂಚಾಲಕ ಬೂಬ ಪೂಜಾರಿ, ಉದ್ಯಾವರ ನಾಗೇಶ್ ಕುಮಾರ್, ಜಯಶ್ರೀ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭ ನಡೆದ ಕವಿಗೋಷ್ಠಿಯಲ್ಲಿ ಅನಿತಾ ಪಿಂಟೋ ಕೊಂಕಣಿ, ಸೌಮ್ಯ ಪ್ರವೀಣ್ ಕನ್ನಡ, ಸುಲೋಚನಾ ನವೀನ್ ತುಳು ಹಾಗೂ ಶಮೀಮ್ ಕುಟ್ಟಿಕಳ ಬ್ಯಾರಿ ಭಾಷೆಗಳಲ್ಲಿ ಕವನ ವಾಚಿಸಿದರು.
ವಿದ್ಯಾರ್ಥಿನಿ ಕೃಪಾಶ್ರೀ ನಿರೂಪಿಸಿ, ಶ್ರೇಯಾ ಸ್ವಾಗತಿಸಿ, ಪೂಜಾ ವಂದಿಸಿದರು.
ಬಳಿಕ ವಿದ್ಯಾರ್ಥಿಗಳಿಂದ ನೃತ್ಯ, ಸಮೂಹ ಗಾಯನ ಕಾರ್ಯಕ್ರಮ ನಡೆಯಿತು.