ಇತ್ತೀಚಿನ ಸುದ್ದಿ
Karnataka BJP | ‘ಭೀಮ ಹೆಜ್ಜೆ’ ಸಂಭ್ರಮ ಆಚರಿಸದೆ ರಾಜ್ಯ ಸರಕಾರದಿಂದ ಅಂಬೇಡ್ಕರ್ಗೆ ಅವಮಾನ: ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಆರೋಪ
11/04/2025, 20:10

ಬೆಂಗಳೂರು(reporterkarnataka.com): ರಾಜ್ಯ ಕಾಂಗ್ರೆಸ್ ಸರ್ಕಾರ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಡೇಡ್ಕರ್ ಅವರ ʼಭೀಮ ಹೆಜ್ಜೆʼ ಶತಮಾನ ಸಂಭ್ರಮ ಕಾರ್ಯಕ್ರಮ ಆಚರಿಸದೆ ಅವಮಾನಿಸಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಇಂದು “ಭೀಮ ಹೆಜ್ಜೆʼ ಶತಮಾನ ಸಂಭ್ರಮ ನಿಮಿತ್ತ ನಿಪ್ಪಾಣಿವರೆಗೆ ಏರ್ಪಡಿಸಿದ್ದ ಬೈಕ್ ಜಾಥಾಕ್ಕೆ ಚಾಲನೆ ನೀಡಿದ ವೇಳೆ ಮಾದ್ಯಮದವರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರ ಅಂಬೇಡ್ಕರ್ ಅವರಿಗೆ ಮತ್ತೂ ಅವಮಾನವನ್ನೇ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಾಸಕಿ ಶಶಿಕಲಾ ಜೊಲ್ಲೆ ಅವರು ಸರ್ಕಾರದ ಗಮನ ಸೆಳೆದರೂ ರಾಜ್ಯ ಸರ್ಕಾರ “ಭೀಮ ಹೆಜ್ಜೆʼ ಶತಮಾನ ಸಂಭ್ರಮ ಆಚರಣೆಗೆ ಅನಾದಾರ ತೋರಿದೆ. ಅಂಬೇಡ್ಕರ್ ಮತ್ತು ದಲಿತರ ಮೇಲೆ ಕಾಂಗ್ರೆಸ್ಸಿಗರಿಗೆ ನಿಜವಾದ ಗೌರವವೇ ಇಲ್ಲ. ಮೊನ್ನೆ ಕಾಂಗ್ರೆಸ್ ಸಮಾವೇಶದಲ್ಲಿ ದಲಿತ ನಾಯಕ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೇಗೆ ನಡೆಸಿಕೊಂಡಿದೆ ಎಂಬುದನ್ನು ದೇಶದ ಜನ ಗಮನಿಸಿದ್ದಾರೆ ಎಂದು ಚಾಟಿ ಬೀಸಿದರು.
ಮಹಾತ್ಮ ಗಾಂಧಿ ಅವರು ಬೆಳಗಾವಿಗೆ ಬಂದು ಹೋದ ಕಾರಣಕ್ಕೆ “ನೂರು ವರ್ಷದ ಸಂಭ್ರಮʼ ಎಂಬ ನೆಪದಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಪಕ್ಷ ತನ್ನ ಅಧಿವೇಶನ ನಡೆಸಿಕೊಂಡಿತು. ಆದರೆ, ಅದೇ ಬೆಳಗಾವಿ ಜಿಲ್ಲೆಯ ನಿಪ್ಪಾಣಿಗೆ ಸಂವಿಧಾನ ಶಿಲ್ಪಿ, ದಲಿತ ನಾಯಕ ಡಾ.ಅಂಬೇಡ್ಕರ್ ಅವರು ಬಂದು ಹೋದ ಸವಿ ನೆನಪಿಗೆ “ಭೀಮ ಹೆಜ್ಜೆʼ ಶತಮಾನದ ಸಂಭ್ರಮ ನಡೆಸಲು ಮುಂದಾಗಲಿಲ್ಲ ಏಕೆ? ಎಂದು ಸಚಿವ ಪ್ರಲ್ಹಾದ ಜೋಶಿ ಪ್ರಶ್ನಿಸಿದರು.
ಮಹಾತ್ಮ ಗಾಂಧಿ ಶತಮಾನ ಸಂಭ್ರಮ ಸಮಾರಂಭವನ್ನೂ ಸರ್ಕಾರ ಅಚ್ಚುಕಟ್ಟಾಗಿ ಆಚರಿಸಲಿಲ್ಲ. ಬದಲಾಗಿ ಕಾಂಗ್ರೆಸ್ ಪಕ್ಷದ್ದೊಂದು ಅಧೀವೇಶನದ ರೀತಿ ನಡೆಸಿತು. ಈಗ ನೋಡಿದರೆ ಅದೇ ನಿಪ್ಪಾಣಿಗೆ ಅಂಬೇಡ್ಕರ್ ಬಂದು ಹೋದ ಸವಿನೆನಪಿಗೆ “ಭೀಮ ಹೆಜ್ಜೆʼ ಶತಮಾನ ಸಂಭ್ರಮ ಸಮಾರಂಭ ಆಯೋಜಿಸದೆ ಇಡೀ ದಲಿತ ಸಮುದಾಯವನ್ನೇ ಅವಮಾನಿಸಿದೆ ಎಂದು ಆರೋಪಿಸಿದರು.