ಇತ್ತೀಚಿನ ಸುದ್ದಿ
ಜವಾಹರಲಾಲ್ ನೆಹರು ಹೊಂದಾಣಿಕೆಯ ಶಿಲ್ಪಿಯಾಗಿದ್ದರು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ
08/12/2025, 23:44
ನವದೆಹಲಿ(reporterkarnataka.com): ಕಾಂಗ್ರೆಸ್ ನಲ್ಲಿ ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯ ಪಡೆಯಲು ಅಷ್ಟೇ ಅಲ್ಲ ಸ್ವಾತಂತ್ರ್ಯದ ಲಾಭ ಪಡೆದು ಪ್ರಧಾನಿಯಾಗಲು ಅವಸರ ಮಾಡಿದ್ದರು. ಜವಾಹರಲಾಲ್ ನೆಹರು ಹೊಂದಾಣಿಕೆಯ ಶಿಲ್ಪಿಯಾಗಿದ್ದರು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಂದೇ ಮಾತರಂ ಕುರಿತು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ ಅವರ ಹೇಳಿಕೆ ಕುರಿತು ಖಾಸಗಿ ಸುದ್ದಿ ಸಂಸ್ಥೆಯವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಜೈರಾಮ್ ರಮೇಶ್ ಬೇರೆ ರೀತಿಯ ಹೇಳಿಕೆ ನೀಡುವ ಮೂಲಕ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ. ಅದಕ್ಕೆ ಯಾವುದೇ ರೀತಿಯ ಪ್ರಸ್ತುತತೆ ಇಲ್ಲ. ವಾಸ್ತವ ಏನು ಅಂದರೆ ಜವಾಹರ ಲಾಲ್ ನೆಹರು ಅವರು ಕಲ್ಕತ್ತಾದಲ್ಲಿ ವಂದೇ ಮಾತರಂನ ಕೆಲವು ಚರಣಗಳನ್ನು ತೆಗೆದುಹಾಕಲು ಪ್ರಸ್ತಾಪಿಸಿದ್ದರ ಆಧಾರದಲ್ಲಿ ಅಂದಿನ ಕಾಂಗ್ರೆಸ್ ಅಧಿವೇಶನದಲ್ಲಿ ಒಂದೇ ಮಾತರಂನ ಕೆಲವು ಸಾಲುಗಳನ್ನು ತೆಗೆದು ಹಾಕಲಾಯಿತು. ಅದು ವಾಸ್ತವ ಅದರಿಂದ ಓಡಿ ಹೋಗಲು ಸಾಧ್ಯವಿಲ್ಲ. ನೆಹರೂ ಹಿಂದುಸ್ತಾನ, ಭಾರತ ಮತ್ತು ಇಂಡಿಯಾ ಎಲ್ಲದರಲ್ಲೂ ಹೊಂದಾಣಿಕೆ ಮಾಡಿಕೊಂಡರು. ಅದರಿಂದ ಕೇವಲ ಒಂದೇ ಮಾತರಂ ವಿಭಜನೆ ಆಗಲಿಲ್ಲ, ದೇಶ ವಿಭಜನೆ ಆಯಿತು. ಕಾಂಗ್ರೆಸ್ ವಿಭಜನೆ ಆಯಿತು. ಅದರ ಪರಿಣಾಮ ಈಗಲೂ ಕಾಂಗ್ರೆಸ್ ನಲ್ಲಿ ವಿಭಜನೆ ನಿರಂತರ ಮುಂದುವರೆದಿದೆ. ಅದಕ್ಕೆ ಅವರು ಬೆಲೆ ತೆರಲೇಬೇಕು ಎಂದು ಹೇಳಿದರು.
ಮಾಜಿ ಉಪ ಪ್ರಧಾನಿ ಎಲ್.ಕೆ. ಅಡ್ವಾಣಿಯವರು ಮೊಹಮದ್ ಅಲಿ ಜಿನ್ನಾ ಅವರನ್ನು ಹೊಗಳಿದ್ದರು ಎಂದು ಕೇಳಿದ ಪ್ರಶ್ನೆಗೆ ಅಡ್ವಾಣಿಯವರು ಜಿನ್ನಾ ಅವರನ್ನು ಎಂದೂ ಹೊಗಳಿಲ್ಲ. ಕೆಲವು ಮಾತುಗಳನ್ನು ಆಡಿದ್ದರು. ಅವರ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿತ್ತು ಎಂದು ಹೇಳಿದರು.













