ಇತ್ತೀಚಿನ ಸುದ್ದಿ
ಜಪ್ಪಿನಮೊಗರು: ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದಿಂದ ಉಚಿತ ನೇತ್ರ ಹಾಗೂ ದಂತ ತಪಾಸಣೆ ಚಿಕಿತ್ಸಾ ಶಿಬಿರ
26/03/2025, 11:36

ಮಂಗಳೂರು(reporterkarnataka.com): ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ವತಿಯಿಂದ ಕೆ.ವಿ.ಕೆ. ಸೇವಾ ಸಮಿತಿ ಕಸಿಹಿತ್ಲು, ಜಪ್ಪಿನಮೊಗರು, ಲಯನ್ಸ್ ಕ್ಲಬ್ ಕುಡ್ಲ, ಲಯನ್ಸ್ ಕ್ಲಬ್ ಮಂಗಳೂರು, ಪಂಪುವೆಲ್, ಕಲ್ಪವೃಕ್ಷ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರುಗಳ ಜಂಟಿ ಆಶ್ರಯದಲ್ಲಿ ಸಮುದಾಯ ದಂತ ಆರೋಗ್ಯ ವಿಭಾಗ, ಯೆನೆಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು , ಇವರ ನುರಿತ ತಜ್ಞ ವೈದ್ಯರ ತಂಡದೊಂದಿಗೆ ಉಚಿತ ದಂತ ತಪಾಸಣೆ ಮತ್ತು ನೇತ್ರ ತಪಾಸಣಾ ಶಿಬಿರ ಜಪ್ಪಿನಮೊಗರು ಕಸಿಹಿತ್ಲು ಕೆ.ವಿ.ಕೆ ಮೈದಾನದಲ್ಲಿ ಜರುಗಿತು.
ಈ ಕಾರ್ಯಕ್ರಮವನ್ನು ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ಅಧ್ಯಕ್ಷರಾದ ಲಯನ್ ಜಯರಾಜ್ ಪ್ರಕಾಶ್ ರವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ “ನಮ್ಮ ಇಂದಿನ ಜೀವನ ಶೈಲಿಯಲ್ಲಿ ಅತೀ ಹೆಚ್ಚು ವಿಷಕಾರಿ ವಸ್ತುಗಳನ್ನು ಸೇವಿಸುತ್ತಿದ್ದೇವೆ. ಈ ಕಾರಣದಿಂದ ನಮ್ಮ ಆರೋಗ್ಯ ಹದಗೆಡುತ್ತಿದೆ, ಯಾವಾಗ ಯಾವ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಹೀಗಿನ ಕಾಲದಲ್ಲಿ ಶೇಕಡ ೮೦ ರಷ್ಟು ಜನ ಔಷಧಿಗೆ ಅವಲಂಬಿತವಾಗಿ ಬದುಕುತ್ತಿದ್ದಾರೆ. ಆದುದ್ದರಿಂದ ನಾವು ಆರೋಗ್ಯಕರ ಆಹಾರವನ್ನು ಸೇವಿಸುವುದರ ಜೊತೆಗೆ ವ್ಯಾಯಾಮ ಕೂಡ ಮಾಡಬೇಕು. ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಜನರ ಆರೋಗ್ಯದ ಕಾಳಜಿಯಿಂದ ನಿರಂತರವಾಗಿ ಆರೋಗ್ಯ ಶಿಬಿರಗಳನ್ನು ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನೀಯ” ಎಂದರು.
ಮಾಜಿ ಕಾರ್ಪೋರೇಟರ್ ಹಾಗೂ ಕೆ.ವಿ.ಕೆ. ಸೇವಾ ಸಮಿತಿಯ ಅಧ್ಯಕ್ಷರಾದ ವೀಣಾ ಮಂಗಳ ರವರು ಮಾತನಾಡಿ “ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಗೆ ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ಸಮಾಜದ ಎಲ್ಲಾ ಜನರ ಆರೋಗ್ಯದ ಕಾಳಜಿಗಾಗಿ ನಿರಂತರವಾಗಿ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಾ ಬರುತ್ತಿರುವುದು ಶ್ಲಾಘನೀಯ. ಇವರ ಸಹಯೋಗದೊಂದಿಗೆ ಇಂತಹ ಆರೋಗ್ಯ ಶಿಬಿರಗಳನ್ನು ಆಯೋಜಿಸುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಸರಕಾರದ ವಿವಿಧ ಯೋಜನೆಗಳಾದ ಆಯುಷ್ಮಾನ್ ಕಾರ್ಡ್, ಈಶ್ರಮ್ ಕಾರ್ಡ್, ಕಾರ್ಮಿಕರ ಕಾರ್ಡ್, ಇವುಗಳ ನೋಂದಣಿಯು ಈ ಶಿಬಿರದಲ್ಲಿ ಲಭ್ಯವಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ವಿನಂತಿಸಿದರು. ಆಯುಷ್ಮಾನ್ ಕಾರ್ಡ್ ನಿಂದ ನಮಗೆ ತುಂಬಾ ಪ್ರಯೋಜನವಿದೆ. ಚಿಕಿತ್ಸೆಗೆ ಬಿಪಿಎಲ್ ಕಾರ್ಡ್ದಾರರಿಗೆ ಮತ್ತು ಎಪಿಲ್ ಕಾರ್ಡ್ನವರಿಗೆ ಹೆಚ್ಚಿನ ಚಿಕಿತ್ಸೆಗಳು ರಿಯಾಯತಿ ದರದಲ್ಲಿ ದೊರೆಯುತ್ತದೆ. ಇದರ ಪ್ರಯೋಜವನ್ನು ಸಮಾಜದ ಕಷ್ಟದಲ್ಲಿರುವ ಜನರು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಯೆನೆಪೋಯ ದಂತ ಆರೋಗ್ಯ ವಿಭಾಗದ ಮುಖ್ಯಸ್ಥೆಯಾದ ರೇಖಾ ಪಿ. ಶೆಣೈ ಇವರು ಮಾತನಾಡಿ “ಇತ್ತಿಚೀನ ಬಿಡುವಿಲ್ಲದ ದಿನಗಳಲ್ಲಿ ಜನರಿಗೆ ವೈದ್ಯರ ಬಳಿ ಹೋಗುವುದು, ಚಿಕಿತ್ಸೆ ಪಡೆದುಕೊಳ್ಳುವುದು ಕೂಡ ಕಷ್ಟವಾಗುತ್ತದೆ. ಭಾನುವಾರ ಎಲ್ಲರೂ ಹೆಚ್ಚಾಗಿ ಮನೆಯಲ್ಲಿ ಇರುತ್ತಾರೆ, ಆದುದ್ದರಿಂದ ಇಂತಹ ಶಿಬಿರಗಳಿಗೆ ಬಂದು ಭಾಗವಹಿಸಿ, ತಪಾಸಣೆ ಮಾಡಿಸಿಕೊಂಡು ಇಂತಹ ಶಿಬಿರಗಳ ಸದುಪಯೋಗ ಪಡೆಯುವಂತೆ ವಿನಂತಿಸಿದರು.
ಈ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷರಾದ ನೇಮಿರಾಜ್ ಪಿ. ರವರು ಮಾತನಾಡಿ, “ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘವು ಬ್ಯಾಂಕಿಂಗ್ ವ್ಯವಹಾರದ ಜೊತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಮತ್ತು ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ನಿರಂತರವಾಗಿ ನಮ್ಮ ೩೩ ಶಾಖೆಗಳಲ್ಲಿ ಕೂಡ ಆರೋಗ್ಯ ಶಿಬಿರವನ್ನು ಏರ್ಪಡಿಸುತ್ತಾ ಬಂದಿದ್ದೇವೆ. ಅಲ್ಲದೆ ಸುಮಾರು ೧೮೦೦೦ ಮಿಕ್ಕಿ ಉಚಿತ ಕನ್ನಡಕಗಳನ್ನು ಈವರೆಗೆ ವಿತರಿಸಿದ್ದೇವೆ. ಸಂಘವು ಸ್ಥಳೀಯರಿಗೆ ಆರೋಗ್ಯ ಸಂಬಂಧಿಸಿದ ವಿಷಯದಲ್ಲಿ ಪ್ರಯೋಜನ ಆಗುವ ನಿಟ್ಟಿನಲ್ಲಿ ವೈದ್ಯರ ತಂಡಗಳ ಸಹಯೋಗದೊಂದಿಗೆ ತಪಾಸಣೆ ಮಾಡಿ ಅವರಿಗೆ ಏನಾದರು ತೊಂದರೆ ಇದ್ದರೆ ಸ್ಥಳದಲ್ಲಿ ಅವರಿಗೆ ಚಿಕಿತ್ಸೆ ನೀಡಿ, ಹೆಚ್ಚಿನ ತೊಂದರೆ ಇದ್ದರೆ ಸೂಚಿಸಿದ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಒದಗಿಸುತ್ತಿದ್ದೇವೆ. ಶಿಬಿರಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಡಿ. ಕಾಮತ್, ಮಾಜಿ ಕಾರ್ಪೋರೇಟರ್ ಪ್ರವೀಣ್ ಚಂದ್ರ ಆಳ್ವ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾದ ಗೋಪಾಲ್ ಎಮ್, ಲಯನ್ಸ್ ಕ್ಲಬ್ ಕುಡ್ಲದ ಅಧ್ಯಕ್ಷರಾದ ಲಯನ್ ಪ್ರಮೋದ್ ರೈ, ಲಯನ್ಸ್ ಕ್ಲಬ್ ಮಂಗಳೂರು, ಪಂಪುವೆಲ್, ಕಲ್ಪವೃಕ್ಷ ಇದರ ಸ್ಥಾಪಕ ಅಧ್ಯಕ್ಷರಾದ ಲಯನ್ ರಾಜೇಶ್ ಶೆಟ್ಟಿ ಶಬರಿ, ಅಧ್ಯಕ್ಷರಾದ ಲಯನ್ ವಾಣಿ ಶೆಟ್ಟಿ, ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇದರ ನಿಕಟಪೂರ್ವ ಅಧ್ಯಕ್ಷರಾದ ಲಯನ್ ಶೀನ ಪೂಜಾರಿ, ಹಿಂದೂ ಯುವಸೇನೆ ಕೇಂದ್ರ ಮಂಡಳಿಯ ಗೌರವ ಅಧ್ಯಕ್ಷರಾದ ಭಾಸ್ಕರಚಂದ್ರ ಶೆಟ್ಟಿ, ಅಧ್ಯಕ್ಷರಾದ ಯಶೋದರ ಚೌಟ, ಪ್ರಸಾದ್ ನೇತ್ರಾಲಯದ ಕಣ್ಣಿನ ವೈದ್ಯರಾದ ಡಾ|| ಶೀತಲ್, ಸಮುದಾಯ ದಂತ ಆರೋಗ್ಯ ವಿಭಾಗದ ಸಾರ್ವಜನಿಕ ಸಂಪರ್ಕ ಅಧಿಕಾರಿ ಭರತ್, ಪ್ರಸಾದ್ ನೇತ್ರಾಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಸಯ್ಯದ್, ಮುಂತಾದವರು ಉಪಸ್ಥಿತರಿದ್ದರು.