ಇತ್ತೀಚಿನ ಸುದ್ದಿ
ಈಶ್ವರಪ್ಪನವರ ಮಾತಿಗೂ ಮೆದುಳಿಗೂ ಕನೆಕ್ಷನ್ ಇಲ್ಲ: ಪ್ರತಿಪಕ್ಷದ ಉಪ ನಾಯಕ ಖಾದರ್ ಲೇವಡಿ
14/03/2023, 22:00
ಮಂಗಳೂರು(reporterkarnataka.com): ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಅವರ ಮಾತನ್ನು ಯಾರೂ ಅಷ್ಟು ಗಂಭೀರವಾಗಿ ಪರಿಗಣಿಸಬೇಡಿ. ಅವರ ಮಾತಿಗೂ, ಮೆದುಳಿಗೂ ಯಾವುದೇ ಕನೆಕ್ಷನ್ ಇಲ್ಲ ಎಂದು ಪ್ರತಿಪಕ್ಷದ ಉಪ ನಾಯಕ ಯು.ಟಿ. ಖಾದರ್ ಹೇಳಿದರು.
ನಗರದಲ್ಲಿ ಪತ್ರಿಕಾಗೋಷ್ಢಿಯಲ್ಲಿ ಮಾತನಾಡಿದ ಅವರು, ಚುನಾವಣೆ ಬಂದಾಗ ಧರ್ಮದ ರಾಜಕಾರಣ ಯಾರೂ ಕೂಡ ಮಾಡಬಾರದು. ಸ್ಪರ್ಧಾತ್ಮಕವಾಗಿ ಚುನಾವಣೆಯನ್ನು ಎದುರಿಸೋಣ. ಧಾರ್ಮಿಕ ಭಾವನೆ ಕೇರಳಿಸುವುದು, ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ಹೇಳಿಕೆ ನೀಡಿವುದನ್ನು ಎಲ್ಲರೂ ಬಿಡಬೇಕು ಎಂದರು.
ಬಿಜೆಪಿಯ ಎಲ್ಲ ಸಚಿವರು ವಿಧಾನಸೌಧದ ಕಚೇರಿಗಳಿಗೆ ಬಾಗಿಲು ಹಾಕಿ ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿದ್ದಾರೆ. ಜನರ ಸಮಸ್ಯೆಗಳಿಗೆ ಸ್ಪಂದಿಸುವ ಬದಲು ರಿಪೋರ್ಟ್ ಕಾರ್ಡ್ ಗಾಗಿ ಜನರ ಮುಂದೆ ಹೊರಟಿದ್ದಾರೆ. ತಾಯಿ ಕಾರ್ಡ್, ಮಾರ್ಕ್ಸ್ ಕಾರ್ಡ್ ನೀಡುವ ಯೋಗ್ಯತೆ ಇಲ್ಲದ ಸರಕಾರ ವಿಜಯ ಸಂಕಲ್ಪ ಯಾತ್ರೆ ನಡೆಸುತ್ತಿದೆ ಎಂದು ಟೀಕಿಸಿದರು.
ಜನ ಕುಡಿವ ನೀರು ಇಲ್ಲದೇ ಪರದಾಡುವ ಸ್ಥಿತಿ ಇದೆ. ಕನಿಷ್ಠ ಕುಡಿವ ನೀರು ಕೊಡಲು ಸಾಧ್ಯವಾಗದ ಬಿಜೆಪಿಯವರ ವಿಜಯ ಸಂಕಲ್ಪ ಯಾತ್ರೆಯು, ಸೋಲಿನ ಯಾತ್ರೆ ಆಗಲಿದೆ ಎಂದು ಅವರು ನುಡಿದರು.
ಉಳ್ಳಾಲದ ರಾಣಿ ಅಬ್ಬಕ್ಕನ ಬಗ್ಗೆ ಮಾತನಾಡುವುದಕ್ಕೆ ಬಿಜೆಪಿಗರಿಗೆ ನಾಚಿಕೆ ಆಗಬೇಕು. ಕಾಂಗ್ರೆಸ್ ಸರ್ಕಾರದ ಅಧಿಕಾರದ ಅವಧಿಯಲ್ಲಿ 40 ಲಕ್ಷ ಅನುದಾನವನ್ನು ಅಬ್ಬಕ್ಕ ಉತ್ಸವಕ್ಕೆ ನೀಡಿತ್ತು. ಬಿಜೆಪಿ ಸರ್ಕಾರ ಅನುದಾನ ಕಡಿತಗೊಳಿಸಿ 10 ಲಕ್ಷವನ್ನು ನೀಡಿದ್ದು ನಿಜಕ್ಕೂ ಬೇಸರದ ಸಂಗತಿ. ಬಿಜೆಪಿ ಸರಕಾರವು ಪರ್ಸೆಂಟೆಜ್ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂದು ಆಪಾದಿಸಿದರು.














