ಇತ್ತೀಚಿನ ಸುದ್ದಿ
ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ಮುಂಚೂಣಿಯತ್ತ ಸಾಗಿದೆ: ಕೃಷಿ ವಿಜ್ಞಾನಿ ಡಾ. ತಿಮಕಾಪುರ
28/02/2026, 15:24
ಬೆಂಗಳೂರು(reporterkarnataka.com): ಭಾರತ ಇಂದು ತಂತ್ರಜ್ಞಾನ ಹಾಗೂ ಸಂಶೋಧನಾ ಕ್ಷೇತ್ರದಲ್ಲಿ ಇತರರನ್ನು ಅವಲಂಬಿಸುವ ಸ್ಥಿತಿಯಿಂದ ಹೊರಗೆ ಬಂದಿದ್ದು, ತಂತ್ರಜ್ಞಾನ ಹಾಗೂ ಕೃಷಿ ಕ್ಷೇತ್ರದಲ್ಲಿ ಜಾಗತಿಕ ಮುಂಚೂಣಿಯತ್ತ ಸಾಗಿದೆ ಎಂದು ಕೃಷಿ ವಿಜ್ಞಾನಿ ಡಾ. ವಸಂತ ಕುಮಾರ ತಿಮಕಾಪುರ ಹೇಳಿದರು.
ಇಂದು ನೈಪುಣ್ಯ ಸ್ಕೂಲ್ ಆಫ್ ಎಕ್ಸಲೆನ್ಸ್ ಸಂಸ್ಥೆಯು ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಕನಕದಾಸನಗರದ ಕ್ಯಾಂಪಸ್ನಲ್ಲಿ ಆಯೋಜಿಸಲಾಗಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳ ವಿಜ್ಞಾನ, ಗಣಿತ, ರೋಬೋಟಿಕ್ಸ್ ಮತ್ತು ಸ್ಪೇಸ್ಲ್ಯಾಬ್ ಕುರಿತು ಮಕ್ಕಳು ತಯಾರಿಸಿದ್ದ ಮಾದರಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಹಿಂದೆ ಭಾರತ ಕೃಷಿ ಚಟುವಟಿಕೆಗಳಿಗೆ ಅವಶ್ಯವಿರುವ ಉಪಕರಣಗಳಿಗಾಗಿ ಹಾಗೂ ಔಷಧಗಳಿಗಾಗಿ ವಿದೇಶಗಳ ಆಮದನ್ನು ನಂಬಿಕೊಂಡಿತ್ತು. ಆದರೆ ಮುಂದುವರೆಯುತ್ತಿರುವ ಆಧುನಿಕ ತಂತ್ರಜ್ಞಾನ ಹಾಗೂ ಕೃಷಿ ಸಂಶೋಧನೆಗಳ ಪರಿಣಾಮ ಇಂದು ತನಗೆ ಬೇಕಾದ ಕೃಷಿ ಮೂಲಭೂತ ಸಾಮಗ್ರಿಗಳು, ಔಷಧಿಗಳು, ಕೃಷಿ ಉಪಕರಣಗಳನ್ನು ತಾನೇ ತಯಾರಿಸಿಕೊಳ್ಳುತ್ತಿದ್ದು, ಅದರಿಂದ ಬೆಳೆಯಲಾದ ಉತ್ಪನ್ನಗಳನ್ನು ವಿದೇಶಗಳಿಗೆ ಗಣನೀಯ ಪ್ರಮಾಣದಲ್ಲಿ ರಫ್ತು ಮಾಡುತ್ತಿದೆ. ಮಾನವನ ಆಹಾರ ಹಾಗೂ ಇನ್ನಿತರ ಅಗತ್ಯಗಳಿಗೆ ತಕ್ಕಂತೆ ತನ್ನ ಚಟುವಟಿಕೆಗಳನ್ನು ವಿಸ್ತರಿಸಿಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಕೃಷಿ ಉತ್ತೇಜಿಸಲು ಹಾಗೂ ಕೃಷಿಕರು ಅನುಭವಿಸುವ ನಷ್ಟವನ್ನು ತಪ್ಪಿಸಲು ಕೃಷಿ ಸಂಶೋಧನಾ ಕ್ಷೇತ್ರ ಬೆಳೆಯಬೇಕಿದೆ. ಹೊಸ ಹೊಸ ತಂತ್ರಜ್ಞಾನವನ್ನು ಕಂಡುಹಿಡಿಯಬೇಕಿದ್ದು, ಈ ಉದ್ದೇಶ ಈಗಾಗಲೇ ನಿರೀಕ್ಷಿತ ಗುರಿ ತಲುಪುತ್ತಿದೆ ಎಂದು ಅವರು ಹೇಳಿದರು. ಪ್ರಾಥಮಿಕ ಶಿಕ್ಷಣ ಹಂತದಲ್ಲೇ ತಂತ್ರಜ್ಞಾನ ಹಾಗೂ ಸಂಶೋಧನಾ ಪ್ರವೃತ್ತಿಯನ್ನು ಮಕ್ಕಳಿಗೆ ಉತ್ತೇಜಿಸುವುದು ಅತ್ಯವಶ್ಯಕವಾಗಿದ್ದು, ತಂತ್ರಜ್ಞಾನ ಹಾಗೂ ಕೃಷಿ ಜಾಗೃತಿ ಇಂದು ಶಿಕ್ಷಣದ ಒಂದು ಭಾಗವೇ ಆಗಬೇಕಾಗಿದೆ. ನೈಪುಣ್ಯ ಶಿಕ್ಷಣ ಸಂಸ್ಥೆಯು ಮಕ್ಕಳಿಗೆ ಸಂಶೋಧನೆ ಹಾಗೂ ಕೃಷಿ ಚಟುವಟಿಕೆಗಳನ್ನು ಶಿಕ್ಷಣದ ಭಾಗವಾಗಿ ಅಳವಡಿಸಿರುವುದು ಅತ್ಯಂತ ಶ್ಲಾಘನೀಯ ಕಾರ್ಯವಾಗಿದೆ ಎಂದು ಅವರು ಹೇಳಿದರು.
ನೈಪುಣ್ಯ ಶಾಲೆಯ ವಿದ್ಯಾರ್ಥಿಗಳು ಮಾನವ ವಿಕಾಸದ ಹಂತಗಳನ್ನು ವಿವರಿಸುವ ಮಾದರಿಗಳು, ಹುಣ್ಣಿಮೆಯಿಂದ ಅಮಾವಾಸ್ಯೆಯ ಪರಿವರ್ತನೆಯ ಹಂತಗಳ ಮಾದರಿಗಳು, ಮಾನವನ ದೇಹದ ವಿವಿಧ ಅಂಗಗಳ ಮಾದರಿಗಳು, ಚಂದ್ರಯಾನ-2 ರ ವಿಕ್ರಮ್ ಲಾಂಡರ್ ಮತ್ತು ಪ್ರಗ್ಯಾನ್ ರೋವರ್ ರಾಕೆಟ್, ನಾಸಾದ ವೋಯೇಜ್-2 ಮಾದರಿಯ ರಾಕೆಟ್, ಸೌರಮಂಡಲದ ಮಾದರಿ, ಭೂಮಿಯ ಒಳಪದರ ಮತ್ತು ಹೊರಪದರಗಳನ್ನು ವಿವರಿಸುವ ಮಾದರಿಗಳು, ವದ್ಯುತ್ ಉತ್ಪಾದನೆ, ಆಸಿಡ್ ಮಳೆ, ಮಳೆನೀರಿನ ನಿರ್ವಹಣೆ, ಹನಿ ನೀರಾವರಿ, ಜಾಗತಿಕ ತಾಪಮಾನ, ಮೆಂಟಲ್ ಮ್ಯಾಥ್, ಪೈಥಾಗೊರಸ್ ಮುಂತಾದ ವಿಷಯಗಳನ್ನು ಲೀಲಾಜಾಲವಾಗಿ ಮಾದರಿಗಳ ಮೂಲಕ ವಿವರಣೆ ಸಹಿತ ತಿಳಿಸಿಕೊಟ್ಟರು. ಈ ಸಂಬಂಧ ಉತ್ತಮ ಮಾದರಿಗಳನ್ನು ಪ್ರೋತ್ಸಾಹಿಸಲು ಅತ್ಯುತ್ತಮ ಮಾದರಿಗಳ ಆಯ್ಕೆಗೆ ತೀರ್ಪುಗಾರರಾಗಿ ತಜ್ಞರಾದ ರಾಮಚಂದ್ರ ಎಂ. ಎಸ್. ಹೇಮಲತಾ ಎಸ್. ಆರ್., ಅನುರಾಧ ಕೆ.ಎಸ್., ಮತ್ತು ಚೈತ್ರಾ ಶ್ರೀಪತಿ ಅವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರ್. ಕೌಟಿಲ್ಯ, ಪ್ರಾಂಶುಪಾಲರಾದ ಮಹೇಂದ್ರ ಎಂ. ಎನ್., ಶಿಕ್ಷಣ ಸಂಯೋಜಕಿ ಶ್ವೇತಾ ಕೆ.ಎಸ್., ಶಿಕ್ಷಕ ಸಿಬ್ಬಂದಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.












