ಇತ್ತೀಚಿನ ಸುದ್ದಿ
ಹನಿಟ್ರ್ಯಾಪ್ ಪ್ರಕರಣ: ವಿಧಾನ ಸಭೆಯಲ್ಲಿ ಬಿಜೆಪಿ- ಜೆಡಿಎಸ್ ನಿಂದ ಭಾರೀ ಪ್ರತಿಭಟನೆ; ಸ್ಫೀಕರ್ ಪೀಠದತ್ತ ಕಾಗದ ಪತ್ರ ತೂರಿದ ಪ್ರತಿಪಕ್ಷದ ಸದಸ್ಯರು
21/03/2025, 21:02

ಬೆಂಗಳೂರು(reporterkarnataka.com): ಹನಿಟ್ರ್ಯಾಪ್ ಪ್ರಕರಣ ವಿಧಾನ ಸಭೆಯಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಹಾಗೂ ಪ್ರತಿಪಕ್ಷ ಬಿಜೆಪಿ ನಡುವೆ ಭಾರೀ ಗದ್ದಲಕ್ಕೆ ಕಾರಣವಾಯಿತು.
ಪ್ರಕರಣವನ್ನು ಸಿಬಿಐ ಅಥವಾ ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ತನಿಖೆ ನಡೆಸಬೇಕೆಂದು ಆಗ್ರಹಿಸಿದ ಬಿಜೆಪಿ ಸದಸ್ಯರು ಇಂದು ವಿಧಾನಸಭೆಯ ಬಾವಿಗಿಳಿದು ಪ್ರತಿಭಟಿಸಿದರು. ಬಜೆಟ್ ಹಾಗೂ ಮಸೂದೆಗಳ ಪ್ರತಿಗಳನ್ನು ಹರಿದು ಸ್ಪೀಕರ್ ಪೀಠದತ್ತ ತೂರಿದರು.
ಬಜೆಟ್ ಮೇಲೆ ನಡೆದ ಚರ್ಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ವಿಧಾನಸಭೆಯಲ್ಲಿ ಉತ್ತರ ನೀಡಲು ಸಿದ್ದರಾಗುತ್ತಿದ್ದಂತೆ, ಬಿಜೆಪಿ-ಜೆಡಿಎಸ್ ಶಾಸಕರು, ನಿನ್ನೆ ವಿಧಾನಸಭೆಯಲ್ಲಿ ಸಚಿವ ಕೆ.ಎನ್.ರಾಜಣ್ಣ ಬಹಿರಂಗಪಡಿಸಿದ ಹನಿಟ್ರಾಪ್ ಪ್ರಕರಣವನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಸ್ಪಷ್ಟನೆ ನೀಡಬೇಕೆಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ತನಿಖೆ ನಡೆಸುವುದಾಗಿ ಹೇಳಿದರು. ಆದರೆ, ಇದಕ್ಕೆ ತೃಪ್ತರಾಗದ ಪ್ರತಿಪಕ್ಷಗಳ ಶಾಸಕರು ಸ್ಪೀಕರ್ ಪೀಠದ ಮುಂದಿನ ಬಾವಿಗಿಳಿದು ಧರಣಿ ಶುರು ಮಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಜೆಟ್ ಮೇಲಿನ ಚರ್ಚೆಗೆ ಉತ್ತರ ಓದಲು ಆರಂಭಿಸಿದಾಗ, ಪ್ರತಿಪಕ್ಷಗಳ ಶಾಸಕರು ಘೋಷಣೆಗಳನ್ನು ಕೂಗಿ ಮುಖ್ಯಮಂತ್ರಿಗಳಿಗೆ ಅಡ್ಡಿಪಡಿಸಲು ಮುಂದಾದರು. ಅದರೆ, ಇದಕ್ಕೆ ಜಗ್ಗದ ಸಿದ್ದರಾಮಯ್ಯ ಅವರು ಉತ್ತರ ನೀಡುವುದನ್ನು ಮುಂದುವರೆಸಿದರು.
ಮುಖ್ಯಮಂತ್ರಿಯವರು ಲಿಖಿತ ಉತ್ತರ ಓದಿದ ಬಳಿಕ ಬಜೆಟ್ ಅಂಗೀಕಾರ ನೀಡುವಂತೆ ಸದನಕ್ಕೆ ಮನವಿ ಸಲ್ಲಿಸಿದರು. ಸಭಾಧ್ಯಕ್ಷ ಯು.ಟಿ.ಖಾದರ್ 2025-26ನೇ ಸಾಲಿನ ಬಜೆಟ್ನ ಹಣಕಾಸು ಮಸೂದೆ ಅಂಗೀಕರಿಸಲು ಮುಂದಾದಾಗ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ರಾಜ್ಯದ ತೆರಿಗೆದಾರರ ಹಣವನ್ನು ಕಾಂಗ್ರೆಸ್ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ. ಮುಸ್ಲಿಮರಿಗೆ ಗುತ್ತಿಗೆ ಕಾಮಗಾರಿಯಲ್ಲಿ ಶೇ.4ರಷ್ಟು ಮೀಸಲಾತಿ ನೀಡುತ್ತಿರುವುದು ಸರಿಯಲ್ಲ, ಇದು ರಾಜ್ಯಕ್ಕೆ ಮಾಡಿರುವ ದ್ರೋಹ. ಈ ಅಪರಾಧವನ್ನು ಜನ ಕ್ಷಮಿಸುವುದಿಲ್ಲ. ಸಚಿವರು ಹನಿಟ್ರ್ಯಾಪ್ ಬಗ್ಗೆ ಆರೋಪ ಮಾಡಿದ್ದರೂ ಸರ್ಕಾರ ಅದನ್ನು ಕಡೆಗಣಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಬಜೆಟ್ನ್ನೊಳಗೊಂಡ ವಿತ್ತೀಯ ವಿಧೇಯಕ ಅಂಗೀಕಾರವಾಗಿದೆ ಎಂದು ಸ್ಪೀಕರ್ ಖಾದರ್ ಅವರು ಪ್ರಕಟಿಸುತ್ತಿದ್ದಂತೆ ಬಿಜೆಪಿಯ ಶಾಸಕರು ಸಭಾಧ್ಯಕ್ಷರ ಪೀಠದ ಬಳಿ ಧಾವಿಸಿ ಅಲ್ಲಿಯೇ ನಿಂತು
ಬಜೆಟ್ ಹಾಗೂ ಮಸೂದೆಗಳ
ಕಾಗದ ಪತ್ರಗಳನ್ನು ಹರಿದು ಸ್ಪೀಕರ್ ಪೀಠದತ್ತ ತೂರಿ ಧಿಕ್ಕಾರದ ಘೋಷಣೆಗಳನ್ನು ಕೂಗಿದರು. ಮಾರ್ಷಲ್ಗಳು ಸ್ಪೀಕರ್ ರಕ್ಷಣೆಗೆ ಹತ್ತಿರ ಬರಲು ಪ್ರಯತ್ನಿಸಿದರು. ಆದರೆ ಸ್ಪೀಕರ್ ಅವರೇ ಮಾರ್ಷಲ್ಗಳನ್ನು ಮುಂದೆ ಬರದಂತೆ ಸೂಚನೆ ನೀಡಿದರು. ಬಿಜೆಪಿಯ ಸಿ.ಕೆ.ರಾಮಮೂರ್ತಿ, ಮಹೇಶ್ ಟೆಂಗಿನಕಾಯಿ ಸೇರಿದಂತೆ ಕೆಲವು ಶಾಸಕರು ಸಿಡಿಗಳನ್ನು ಹಿಡಿದು ಸ್ಪೀಕರ್ ಬಳಿಯೇ ನಿಂತು ಘೋಷಣೆ ಕೂಗಲಾರಂಭಿಸಿದರು. ಈ ಮಧ್ಯೆ ಮುಖ್ಯಮಂತ್ರಿಯವರು
ಸಭಾಧ್ಯಕ್ಷರ ಪೀಠ ಬಿಟ್ಟು ಕೆಳಗಿಳಿಯುವಂತೆ ಪ್ರತಿಪಕ್ಷದ ಶಾಸಕರಿಗೆ ಹಲವು ಬಾರಿ ಸೂಚನೆ ನೀಡಿದರು. ವಿಧಾನಸಭೆಯ ಜಂಟಿ ಕಾರ್ಯದರ್ಶಿಯವರು ಸಭಾಧ್ಯಕ್ಷರ ಬಳಿ ಬಂದು ಶಾಸಕರನ್ನು ಕೆಳಗಿಳಿಸುವಂತೆ ಸ್ಪೀಕರ್ ಅವರಿಗೆ ಸಲಹೆ ನೀಡಿದರು. ಸ್ಪೀಕರ್
ಸೂಚನೆ ಹೊರತಾಗಿಯೂ ಶಾಸಕರು ಕೆಳಗಿಳಿಯದೆ ಅಲ್ಲೇ ನಿಂತಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಶಾಸಕರು ಕೆಳಗೆ ಬರಬೇಕು. ಇಲ್ಲವಾದರೆ ಮಾರ್ಷಲ್ಗಳು ತಳ್ಳುತ್ತಾರೆ. ನಿಮಗೆ ತಳ್ಳಿಸಿಕೊಳ್ಳಲು ಆಸೆಯೇ? ಎಂದು ಗದರಿದರು. ಈ ಹಂತದಲ್ಲಿ ಸ್ಪೀಕರ್ ಕಲಾಪವನ್ನು 10 ನಿಮಿಷಗಳ ಕಾಲ ಮುಂದೂಡುವುದಾಗಿ ಪ್ರಕಟಿಸಿದರು. ಆದರೆ ಬಾಕಿ ಇರುವ ವಿಧೇಯಕಗಳ ಅಂಗೀಕಾರವನ್ನು ಪೂರ್ಣಗೊಳಿಸಿದ ನಂತರ ಕಲಾಪ ಮುಂದೂಡುವಂತೆ ಮುಖ್ಯಮಂತ್ರಿ ಹಾಗೂ ಸಚಿವರು ಸಲಹೆ ನೀಡಿದರು.
ಮುಖ್ಯಮಂತ್ರಿಯವರು ಇತರೆ ಹಣಕಾಸು ವಿಧೇಯಕಗಳನ್ನು ಮಂಡಿಸಿ, ಅಂಗೀಕಾರಕ್ಕೆ ಮನವಿ ಮಾಡಿದಾಗ ವಿರೋಧ ಪಕ್ಷಗಳಿಂದ ವ್ಯಾಪಕ ಆಕ್ರೋಶ ಕೇಳಿಬಂತು. ಕಾಗದಪತ್ರಗಳನ್ನು ತೂರಲಾರಂಭಿಸಿದರು. ಕೆಲವು ಶಾಸಕರು ಸಭಾಧ್ಯಕ್ಷರ ಪೀಠದ ಕಡೆಗೆ ಹಾಗೂ ಆಡಳಿತ ಪಕ್ಷದವರ ಕಡೆಗೆ ಕಾಗದ ಪತ್ರಗಳನ್ನು ಎಸೆಯುತ್ತಿದ್ದರು. ಮುಖ್ಯಮಂತ್ರಿಯವರಿಗೆ ಕೆಲವು ಕಾಗದ ಪತ್ರಗಳು ತಗುಲಿದವು. ಆಗ ಸಚಿವ ಭೈರತಿ ಸುರೇಶ್, ಶಾಸಕ ರಂಗನಾಥ್, ಕೆ.ಎಂ.ಶಿವಲಿಂಗೇಗೌಡ ಸೇರಿದಂತೆ ಹಲವರು ಮುಖ್ಯಮಂತ್ರಿಯವರ ಸುತ್ತಲೂ ಕಾವಲಿಗೆ ನಿಂತರು. ಕಾಂಗ್ರೆಸ್ನ ಇತರ ಶಾಸಕರು ಮುಖ್ಯಮಂತ್ರಿಯವರ ಹಿಂಭಾಗದ ಸಾಲುಗಳಲ್ಲಿ ಬಂದು ಜಮಾಯಿಸಿದರು.
ಮುಖ್ಯಮಂತ್ರಿಯವರ ಬಳಿ ನಿಂತಿದ್ದ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ನೀವೇನೂ ರೌಡಿಗಳೇ? ಹೊಡೆಯುತ್ತೀರಾ ಬನ್ನಿ ನೋಡೋಣ ಎಂದೆಲ್ಲಾ ವಾಗ್ವಾದಗಳು ವಿನಿಮಯವಾದವು. ಅತ್ತ ಸ್ಪೀಕರ್ ಅವರ ಮುಖಕ್ಕೆ ಕಾಗದಪತ್ರಗಳು ತಾಗದಂತೆ ಮಾರ್ಷಲ್ಗಳು ಕೈ ಅಡ್ಡ ಇಟ್ಟು ತಡೆಯುತ್ತಿದ್ದರು.
ಗದ್ದಲ ಜೋರಾದಾಗ ಪ್ರತಿಪಕ್ಷಗಳ ಎಲ್ಲಾ ಶಾಸಕರು ಸದನದ ಬಾವಿಯಲ್ಲಿ ಜಮಾಯಿಸಿ ಜೋರು ಗಲಾಟೆ ಮಾಡಿದರು. ಸದನದ ಹೊರಗಿದ್ದ ಎಲ್ಲಾ ಮಾರ್ಷಲ್ಗಳು ಒಳಗೆ ಧಾವಿಸಿ ರಕ್ಷಣೆಗೆ ನಿಂತರು. ಇತ್ತ ಮುಖ್ಯಮಂತ್ರಿಗಳ ಬಳಿಯೂ ಗದ್ದಲ ಹೆಚ್ಚಾದಾಗ ಒಂದು ಹಂತದಲ್ಲಿ ಮುಖ್ಯಮಂತ್ರಿ ಬಳಿ ನಿಂತಿದ್ದ ಸಚಿವ ಭೈರತಿ ಸುರೇಶ್ ಸಿಟ್ಟಿನಿಂದ ಕಿರುಪುಸ್ತಕವನ್ನು ವಿರೋಧ ಪಕ್ಷಗಳತ್ತ ಎಸೆದು ಆಕ್ರೋಶ ಹೊರಹಾಕಿದರು.
ಗದ್ದಲದ ನಡುವೆಯೂ ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ವಿಧೇಯಕ-2025, ಹಾಗೂ ಕರ್ನಾಟಕ ವಿಧಾನ ಮಂಡಲದ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳು (ತಿದ್ದುಪಡಿ) ವಿಧೇಯಕ-2025, ಕರ್ನಾಟಕ ಧನ ವಿನಿಯೋಗ ವಿಧೇಯಕ-2025, ಕರ್ನಾಟಕ ಧನ ವಿನಿಯೋಗ (ಸಂಖ್ಯೆ-2) ವಿಧೇಯಕ-2025, ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ (ತಿದ್ದುಪಡಿ) ವಿಧೇಯಕಗಳು ಧ್ವನಿ ಮತದ ಮೂಲಕ ಅಂಗೀಕಾರಗೊಂಡವು. ಗದ್ದಲ ಮಿತಿಮೀರಿದಾಗ ಅನಿವಾರ್ಯವಾಗಿ ಕಲಾಪವನ್ನು ಸಭಾಧ್ಯಕ್ಷರು 15 ನಿಮಿಷಗಳ ಕಾಲ ಮುಂದೂಡಿದರು.