ಇತ್ತೀಚಿನ ಸುದ್ದಿ
ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ: ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಗೀತಾಶ್ರೀ ಪ್ರಥಮ
07/05/2025, 10:42

ಮಂಗಳೂರು(reporterkarnataka.com): ಬೆಂಗಳೂರಿನ ಪ್ರಾದೇಶಿಕ ಸಹಕಾರ ನಿರ್ವಹಣಾ ಸಂಸ್ಥೆ ,ಮಂಗಳೂರಿನ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಸಮನ್ವಯದಲ್ಲಿ ಮಂಗಳೂರು ಕೇಂದ್ರವಾಗಿಸಿಕೊಂಡು ನಡೆಸಲ್ಪಡುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೋಮ (ಎಚ್.ಡಿ.ಸಿ.ಎಮ್) ಅಧಿವೇಶನ ದೂರ ಶಿಕ್ಷಣ ಕೋರ್ಸಿನ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ.
ಪ್ರಥಮ ಸ್ಥಾನವನ್ನು ಕಳಂಜ- ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಿಬ್ಬಂದಿಯಾದ ಗೀತಾಶ್ರೀ ಎಂ., ದ್ವಿತೀಯ ಸ್ಥಾನವನ್ನು ಭವ್ಯಶ್ರೀ ರೈ ಕೆ., ಶ್ರೀ ಗುರುದೇವ ವಿವಿಧೊದ್ದೇಶ ಸಹಕಾರಿ ಸಂಘದ ಸಿಬ್ಬಂದಿಯಾದ ಸೌಮ್ಯ ಡಿ. ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಈ ಬ್ಯಾಚ್ನಲ್ಲಿ ಅವಿಭಜಿತ ದ.ಕ. ಮತ್ತು ಉಡುಪಿ ಜಿಲ್ಲೆಯ ೧೨೭ ಶಿಕ್ಷಣಾರ್ಥಿಗಳು ಪರೀಕ್ಷೆ ಬರೆದಿರುತ್ತಾರೆ. ಇದರಲ್ಲಿ ೧೬ ಶಿಕ್ಷಣಾರ್ಥಿಗಳು ಉನ್ನತ ಶ್ರೇಣಿಯಲ್ಲಿ, ಮತ್ತು ೯೦ ಶಿಕ್ಷಣಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ. ೬ ಶಿಕ್ಷಣಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತಿರ್ಣರಾಗಿದ್ದಾರೆ.
ಪ್ರಾದೇಶಿಕ ಸಹಕಾರ ನಿರ್ವಹಣಾ ಕೇಂದ್ರ ಬೆಂಗಳೂರು, ಇವರು ನೀಡುತ್ತಿರುವ ಸಹಕಾರ ನಿರ್ವಹಣೆಯಲ್ಲಿ ಉನ್ನತ ಡಿಪ್ಲೊಮಾ ದೂರ ಶಿಕ್ಷಣ ಕೋರ್ಸ್ನ್ನು ಮಂಗಳೂರು ಕೇಂದ್ರಿತವಾಗಿ ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘ (ನಿ.) ಪಡೀಲ್, ಮಂಗಳೂರು ಇವರ ಸಹಭಾಗಿತ್ವದಲ್ಲಿ ಈಗಾಗಲೇ ೮ ಬ್ಯಾಚ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ೮೦೦ಕ್ಕೂ ಮಿಕ್ಕಿ ಶಿಕ್ಷಣಾರ್ಥಿಗಳು ಭಾಗವಹಿಸಿ ಇದರ ಪ್ರಯೋಜನವನ್ನು ಪಡೆದಿದ್ದು, ಮುಂದಿನ ಬ್ಯಾಚ್ಗೆ ನೋಂದಣಿ ಪ್ರಕ್ರಿಯೆಯು ಅತೀ ಶೀಘ್ರದಲ್ಲಿ ಆರಂಭವಾಗಲಿದ್ದು, ಆಸಕ್ತ ಸಹಕಾರ ಸಂಘಗಳ ಸಿಬ್ಬಂದಿಗಳು ಹಾಗೂ ಪದವೀದರರು ಕೋರ್ಸಿನ ವಿವರಗಳನ್ನು ಆತ್ಮಶಕ್ತಿ ವಿವಿಧೋದ್ಧೇಶ ಸಹಕಾರಿ ಸಂಘದ ಹತ್ತಿರದ ಶಾಖೆಯಲ್ಲಿ ಪಡೆಯಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ : ೦೮೨೪-೨೦೦೩೩೫೫, ೨೦೦೮೮೫೫, ೨೦೦೭೭೫೫, ೮೧೫೦೦೬೩೫೫೫ಕ್ಕೆ ಸಂಪರ್ಕಿಸಬಹುದು.