9:25 AM Wednesday18 - February 2026
ಬ್ರೇಕಿಂಗ್ ನ್ಯೂಸ್
ಆಗುಂಬೆ ಬಸ್ ನಿಲ್ದಾಣ ಬಳಿ ಎರಡು ಪ್ರತ್ಯೇಕ ಅಪಘಾತ: ಇಬ್ಬರಿಗೆ ಗಾಯ ಪ್ರೇಮಿಗಳ ದಿನಾಚರಣೆಯ ಎಫೆಕ್ಟ್ ?: ಪ್ರೇಮ ನಿವೇದನೆ ಒಪ್ಪಿಕೊಳ್ಳದ ಯುವತಿಗೆ ಬಿಯರ್ ಬಾಟ್ಲಿಯಿಂದ… ಕೊಪ್ಪಳದಲ್ಲಿ ವಿದೇಶಿ ಮಹಿಳೆಯ ಅತ್ಯಾಚಾರ, ಕೊಲೆ ಪ್ರಕರಣ: 3 ಮಂದಿ ಆರೋಪಿಗಳಿಗೆ ಗಲ್ಲು ಸಿದ್ದರಾಮಯ್ಯನವರ ಸರ್ಕಾರ ಜೀರೋ ಅಭಿವೃದ್ಧಿಯ ಸರ್ಕಾರ: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಹಾಶಿವರಾತ್ರಿ | ಮಲೆ ಮಹದೇಶ್ವರ ಬೆಟ್ಟದಲ್ಲಿ ಮಾದಪ್ಪನಿಗೆ ಎಣ್ಣೆ ಮಜ್ಜನ: ವಿಶೇಷ ಪೂಜೆ ಟಿ20 ವಿಶ್ವಕಪ್: ಪಾಕಿಸ್ತಾನ ವಿರುದ್ದ ಭಾರತಕ್ಕೆ 61 ರನ್ ಜಯ; ಸೂಪರ್ 8… ರಾಜ್ಯದಲ್ಲಿ 2030ರ ವರೆಗೆ ಹಂತ ಹಂತವಾಗಿ ಪೊಲೀಸ್ ವಸತಿಗೃಹ ನಿರ್ಮಾಣ: ಗೃಹ ಸಚಿವ… ಅಮೆರಿಕ ಜೊತೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ: ರೈತರು ತೋಳಿಗೆ ಕಪ್ಪುಪಟ್ಟಿ ಕಟ್ಟಿ… ನಿಯಂತ್ರಣ ತಪ್ಪಿದ ಕೆಎಸ್‌ಆರ್‌ಟಿಸಿ ಬಸ್; ಮೈಸೂರಿನಲ್ಲಿ ಸರಣಿ ಅಪಘಾತ; ಟ್ರಾಫಿಕ್ ಜಾಮ್ ಕೊಡಗಿನಲ್ಲಿ ಸೂಪರ್ ಸ್ಟಾರ್ ರಜನಿಕಾಂತ್: ಮಡಿಕೇರಿ ಸಮೀಪ ರೆಸಾರ್ಟ್ ಉದ್ಘಾಟನೆ

ಇತ್ತೀಚಿನ ಸುದ್ದಿ

ಗುಜ್ಜರಕೆರೆ ಅಭಿವೃದ್ಧಿ:  ವಾಕಿಂಗ್ ಟ್ರ್ಯಾಕ್ ಬದಲು ಸ್ಮಾರ್ಟ್ ಸಿಟಿಯಡಿ ರಸ್ತೆಯೇ ನಿರ್ಮಾಣ!; ತೆರಿಗೆದಾರರ ಹಣಕ್ಕಿಲ್ಲ ನಯಾ ಪೈಸೆಯ ಬೆಲೆ !!

03/07/2021, 18:46

ಅಶೋಕ್ ಕಲ್ಲಡ್ಕ ಮಂಗಳೂರು

ಅನುಷ್ ಪಂಡಿತ್ ಮಂಗಳೂರು

info.reporterkarnataka@gmail.com

ನಗರದ ಮಂಗಳಾದೇವಿ ದೇವಾಲಯದ ಸಮೀಪವಿರುವ ಐತಿಹಾಸಿಕ ಗುಜ್ಜರಕೆರೆ ಅಭಿವೃದ್ಧಿ ಕಾರ್ಯ ಭರದಿಂದ ನಡೆಯುತ್ತಿದ್ದು, ಕೆರೆಯ ಸುತ್ತ ವಾಕಿಂಗ್ ಟ್ರ್ಯಾಕ್ ನಿರ್ಮಿಸುವ ಬದಲಿಗೆ ರಸ್ತೆಯನ್ನೇ ನಿರ್ಮಿಸುವ ಕೆಲಸಕ್ಕೆ ಕೈಹಾಕುವ ಮೂಲಕ ಮಂಗಳೂರು ಸ್ಮಾರ್ಟ್ ಸಿಟಿ ಕಂಪನಿ ಸಾರ್ವಜನಿಕರಲ್ಲಿ ಅಚ್ಚರಿ ಮೂಡಿಸಿದೆ.

ಕೆರೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಇಲ್ಲಿನ ಗುಜ್ಜರಕೆರೆ ತೀರ್ಥ ಸಂರಕ್ಷಣಾ ವೇದಿಕೆಯು ಕಳೆದ ಎರಡು ದಶಕಗಳಿಂದ ನಡೆಸಿದ ಹೋರಾಟದ ಫಲವಾಗಿ ಕೊನೆಗೂ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು. ಸ್ಮಾರ್ಟ್ ಸಿಟಿ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗೆ ಮುನ್ನುಡಿ ಬರೆಯಲಾಯಿತು.

ಸುಮಾರು 3.43 ಎಕರೆ ವಿಸ್ತೀರ್ಣವುಳ್ಳ ಗುಜ್ಜರಕೆರೆಯ ಸುತ್ತಮುತ್ತ ಒತ್ತುವರಿ ನಡೆದು ದಶಕಗಳೇ ಉರುಳಿವೆ ಎಂದು ಸ್ಥಳೀಯರು ಆರೋಪಿಸುತ್ತಾರೆ. ಅತಿಕ್ರಮಣ ನಡೆದಿದ್ದರೆ ತೆರವುಗೊಳಿಸುವುದಾಗಿ ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದ್ದರು. ಆದರೆ ಅತಿಕ್ರಮಣವನ್ನು ತೆರವುಗೊಳಿಸುವ ಯಾವುದೇ ಪ್ರಕ್ರಿಯೆ ನಡೆಸದೆ ಕೆರೆಯ ಸುತ್ತ ಅಗಲವಾದ ರಸ್ತೆ ನಿರ್ಮಿಸಲಾಗುತ್ತಿದೆ. ಪ್ರಸ್ತುತ ನಿರ್ಮಿಸಲುದ್ದೇಶಿಸಿದ ವಾಕಿಂಗ್ ಟ್ರ್ಯಾಕ್ ಎಂದು ಕರೆಸಿಕೊಳ್ಳುವ ರಸ್ತೆಯಲ್ಲಿ ಏಕಕಾಲದಲ್ಲಿ ಎರಡು ಬಸ್ ಅಥವಾ ಎರಡು ಲಾರಿ ಹಾದು ಹೋಗುವಷ್ಟು ಅವಕಾಶ ಕಲ್ಪಿಸಲಾಗಿದೆ.

ವಾಸ್ತವದಲ್ಲಿ ಒತ್ತುವರಿಯನ್ನು ತೆರವುಗೊಳಿಸಿಯೇ ವಾಕಿಂಗ್ ಟ್ರ್ಯಾಕ್ ಕಾಮಗಾರಿ ಆರಂಭಿಸಬೇಕಿತ್ತು. ಆದರೆ ಇದು ಯಾವುದೇ ಕಾರ್ಯವನ್ನು ಪಾಲಿಕೆ ನಡೆಸದೆ ಎರಡು ಬಸ್ ಗಳು ಹಾದು ಹೋಗುವ ರಸ್ತೆಯನ್ನೇ ನಿರ್ಮಿಸಲು ಮುಂದಾಗಿರುವುದು ನಗೆಪಾಟಲಿಗೆ ದಾರಿ ಮಾಡಿಕೊಟ್ಟಿದೆ. ಸ್ಮಾರ್ಟ್ ಸಿಟಿ ಕಂಪನಿಯ ಅರ್ಥಾತ್ ತೆರಿಗೆದಾರರ ಹಣವನ್ನು ನೀರಿನಂತೆ ಚೆಲ್ಲಲಾಗುತ್ತಿದೆ.

ಗುಜ್ಜರಕೆರೆಯ  ಸುತ್ತಲೂ ವಾಕಿಂಗ್ ಟ್ರಾಕ್ ಬದಲು ರಸ್ತೆಯನ್ನೇ ನಿರ್ಮಿಸುವುದರಿಂದ ಈಗಾಗಲೇ ಒತ್ತುವರಿ ಮಾಡಿದವರಿಗೆ ಮತ್ತಷ್ಟು ಅವಕಾಶ ನೀಡಿದಂತಾಗುತ್ತದೆ. ವಾಹನಗಳನ್ನು ಇಲ್ಲಿ ಪಾರ್ಕ್ ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ. ಮುಂದೆ ಇದರಿಂದ ಕೆರೆಯ ಪರಿಸರಕ್ಕೆ ಧಕ್ಕೆ ಬರುವ ಸಂಭವವೇ ಹೆಚ್ಚು. ಕೆರೆಯ ಭೂಮಿಯನ್ನು ಈಗಾಗಲೇ ಕೆಲವರು ತಮ್ಮ ತೆಕ್ಕೆಗೆ ಹಾಕಿರುವ ಕಾರಣ ಕೆರೆಯ ಉಳಿದಿರುವ ಭೂಮಿಯಲ್ಲಿ ಇಷ್ಟು ಅಗಲದ ರಸ್ತೆ ನಿರ್ಮಾಣ ಅವಶ್ಯಕತೆಯೇ ಇಲ್ಲ. ವಾಕಿಂಗ್ ಟ್ರ್ಯಾಕ್ ಬದಲಿಗೆ ಅಗಲವಾದ ರಸ್ತೆ ಇಲ್ಲಿ ನಿರ್ಮಿಸುವ ಉದ್ದೇಶವೇನು ಎಂಬುದನ್ನು ಶಾಸಕ ಡಿ. ವೇದವ್ಯಾಸ ಕಾಮತ್, ಮೇಯರ್ ಪ್ರೇಮಾನಂದ ಶೆಟ್ಟಿ ಹಾಗೂ ಸ್ಮಾರ್ಟ್ ಸಿಟಿ ಮತ್ತು ಪಾಲಿಕೆ ಎಂಜಿನಿಯರ್ ಗಳು ಸಾರ್ವಜನಿಕರ ಮುಂದೆ ವಿಶದಪಡಿಸುವ ಅಗತ್ಯವಿದೆ. ಯಾಕೆಂದರೆ ಕೆರೆಯ ಪರಿಸರದ ಮೂಲಕ ಘನ ವಾಹನಗಳು ಸಂಚರಿಸಲು ಪಾಲಿಕೆಯೇ ಮುನ್ನುಡಿ ಬರೆದಂತೆ ಆಗುವುದಿಲ್ಲವೇ? ಎನ್ನುವುದನ್ನು ಇವರು ಮನಗಾಣಬೇಕಾಗಿದೆ.

ಕೆರೆಯ ರಸ್ತೆ ಸಂಪರ್ಕಿಸುವ ಪರಿಸರದ  ರಸ್ತೆಗಳೇ 4-5 ಅಡಿ ಅಗಲ ಇದ್ದು, ಈ ಕೆರೆಯ ಸುತ್ತ ಇಷ್ಟು ಅಗಲ ರಸ್ತೆ ನಿರ್ಮಾಣ ಯಾತಕ್ಕಾಗಿ? ಬದಲಿಗೆ ವಾಕಿಂಗ್ ಟ್ರ್ಯಾಕ್ ನ ಅಗಲ ಕಿರಿದುಗೊಳಿಸಿ ಕೆರೆಯ ಸುತ್ತಲೂ ಮರಗಿಡಗಳನ್ನು ನೆಟ್ಟು ಹಸುರೀಕರಣ ಮಾಡಲು ಅವಕಾಶವಿದೆ. ವಾಯು ವಿಹಾರಕ್ಕೆ ಬರುವವರಿಗೆ ಹಾಗೂ ಹಕ್ಕಿಗಳಿಗೆ ಪೂರಕ ವಾತಾವರಣ ಸೃಷ್ಟಿಸಿದಂತಾಗುತ್ತದೆ. ಅದು ಬಿಟ್ಟು ಕೆರೆ ಸುತ್ತ ವಾಹನ ಓಡಿಸಲು ಅವಕಾಶ ಮಾಡಿಕೊಡುವುದು ಮೂರ್ಖ ನಿರ್ಧಾರವಾದೀತು ಎಂದು ಪ್ರಜ್ಞಾವಂತರು ಹೇಳುತ್ತಾರೆ.

ಇತ್ತೀಚಿನ ಸುದ್ದಿ

ಜಾಹೀರಾತು