ಇತ್ತೀಚಿನ ಸುದ್ದಿ
ಸೈಬರ್ ಅಪರಾ್ಗಳು ತಡೆಗೆ ಹೆಚ್ಚು ಒತ್ತು; ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ಸೂಕ್ತ ನಿಗಾ: ಗೃಹ ಸಚಿವರ ಅಭಯ
06/03/2025, 23:18

ಬೆಂಗಳೂರು (reporterkarnataka.com) : ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡುವಂತ ಘಟನೆಗಳು ನಡೆಯದಂತೆ ಮುಂಗಡ ಮಾಹಿತಿಯನ್ನು ಕಲೆಹಾಕಿ ಅಹಿತಕರ ಘಟನೆಗಳು ನಡೆಯದಂತೆ ಸೂಕ್ತ ನಿಗಾವಹಿಸಲು ಅಗತ್ಯ ಕ್ರಮಗಳನ್ನು ಜಾರಿ ಮಾಡಲಾಗಿದೆ. ತಪ್ಪಿತಸ್ಥರನ್ನು ಶಿಕ್ಷಿಸಲು ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಅವರು ಹೇಳಿದರು.
ಇಂದು ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದ ಸಚಿವರು, ವೀಲ್ಹಿಂಗ್ ಮಾಡುವಂತಹ ಮತ್ತು ಕೈಯಲ್ಲಿ ಚಾಕು, ಚೂರಿ, ಲಾಂಗ್ ಹಿಡಿದುಕೊಂಡು ಓಡಾಡುತ್ತಾ ಸಮಾಜದಲ್ಲಿ ಶಾಂತಿ ಕದಡುತಿರುವುದು ಕಂಡುಬಂದಲ್ಲಿ ಅಂತಹವರನ್ನು ದಸ್ತಗಿರಿ ಮಾಡಿ ಬಂಧಿಸಲಾಗುವುದು ಹಾಗೂ ಕಾನೂನಿನ ರೀತ್ಯ ಕ್ರಮಗಳನ್ನು ಜರುಗಿಸಲಾಗುವುದು ಎಂದು ತಿಳಿಸಿದರು.
ಸಮಾಜದಲ್ಲಿ ಶಾಂತಿ ಹಾಳು ಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸಿ ಗಲಭೆ ಸೃಷ್ಟಿಸುವವರ ವಿರುದ್ದ ಸ್ವಯಂ ಪ್ರೇರಿತವಾಗಿ ಪ್ರಕರಣಗಳನ್ನು ದಾಖಲಿಸಿಕೊಂಡು ಸಾರ್ವಜನಿಕರ ನೆಮ್ಮದಿಯನ್ನು ಕಾಪಾಡಲಾಗುತ್ತಿದೆ.
ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಬೀಟ್ ವ್ಯವಸ್ಥೆ ಮಾಡಲಾಗಿದೆ. ಬೀಟ್ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಿ ಯಾವುದೇ ಅಪರಾಧ ಕೃತ್ಯಗಳು ಜರುಗದಂತೆ ನಿಗಾವಹಿಸಲಾಗುತ್ತಿದೆ. ಒಂದು ವೇಳೆ ಪೊಲೀಸ್ ಅಧಿಕಾರಿ / ಸಿಬ್ಬಂದಿಗಳ ಕರ್ತವ್ಯ ನಿರ್ಲಕ್ಷತೆಯಿಂದಾಗಿ ಅಪರಾಧ ಕೃತ್ಯಗಳು ಜರುಗಲು ಕಾರಣವಾಗಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿ / ಸಿಬ್ಬಂದಿಗಳ ವಿರುದ್ದ ಶಿಸ್ತು ಕ್ರಮಗಳನ್ನು ಜರುಗಿಸಲಾಗುತ್ತದೆ.
ಪದೇಪದೇ ಅಪರಾಧ ಕೃತ್ಯಗಳಲ್ಲಿ ತೊಡಗಿರುವ ರೌಡಿಗಳ ಬಗ್ಗೆ ನಿಗಾವಹಿಸಿ ಅವರುಗಳ ವಿರುದ್ದ ಸುಮೊಟೋ ಪ್ರಕರಣಗಳನ್ನು ದಾಖಲಿಸಿ ಗಡಿಪಾರು ಮಾಡುವಲ್ಲಿ ಕ್ರಮ ಕೈಗೊಳ್ಳಲಾಗುತ್ತಿದೆ. ಸುಸಜ್ಜಿತವಾದ ಗಸ್ತು ಕರ್ತವ್ಯವನ್ನು ನಿರ್ವಹಿಸಲು ನಗರದಲ್ಲಿ ಹೊಯ್ಸಳ ವಾಹನವನ್ನು ಮತ್ತು ಚೀತಾ ವಾಹನಗಳನ್ನು ನಿಯೋಜಿಸಲಾಗಿದೆ. ಈ ಮೂಲಕ ನಗರದ ಯಾವುದೇ ಸ್ಥಳದಿಂದ 112 ಸಂಖ್ಯೆಗೆ ಕರೆ ಮಾಡಿzಲ್ಲಿ ಕೆಲವೇ ನಿಮಿಷಗಳ ಒಳಗಾಗಿ ಆಸ್ಥಳವನ್ನು ತಲುಪಿ ನೊಂದ ವ್ಯಕ್ತಿಗೆ ನ್ಯಾಯ ಕೊಡಿಸುವ ಹಾಗೂ ಅಪರಾಧ ಕೃತ್ಯವನ್ನು ತಡೆಯುವ ಯೋಜನೆಯನ್ನು ರೂಪಿಸಲಾಗಿದೆ.
ಇತ್ತೀಚೆಗೆ ಸೈಬರ್ ಅಪರಾಧಗಳು ಹೆಚ್ಚಗುತ್ತಿದ್ದು, ಸೈಬರ್ ಅಪರಾಧಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಚ್ಚು ಒತ್ತು ನೀಡಲಾಗಿದೆ. ಈ ಸಂಬಂಧ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಹುದ್ದೆಯನ್ನು ಪ್ರತ್ಯೇಕವಾಗಿ ಸೃಜಿಸಲಾಗಿದೆ. ಡಿ.ಜಿ. ಅವರ ಕೆಳಗೆ ಎ.ಡಿ.ಜಿ.ಪಿ, ಐ.ಜಿ.ಪಿ ಹಾಗೂ 7 ಜನ ಎಸ್.ಪಿಗಳು ಸೇರಿದಂತೆ, ಇತರೆ ಪೊಲೀಸ್ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ. ಸೈಬರ್ ಅಪರಾಧಗಳ ಬಗ್ಗೆ ದೂರುಗಳನ್ನು ಸ್ವೀಕರಿಸಿ ಸೂಕ್ತ ಕ್ರಮ ವಹಿಸಲಾಗುತ್ತಿದೆ ಎಂದು ತಿಳಿಸಿದರು.