ಇತ್ತೀಚಿನ ಸುದ್ದಿ
ಅಜ್ಜಿಯ ಇಷ್ಟ ತಂದಿತು ಸಂಕಷ್ಟ: ಬೆಳ್ತಂಗಡಿಯಲ್ಲಿ ಆಮೆ ಬೇಟೆ; ನಾಲ್ವರ ಬಂಧನ
16/02/2026, 16:55
ಬೆಳ್ತಂಗಡಿ(reporterkarnataka.com): ಅಜ್ಜಿಯ ತಿಥಿ ಕಾರ್ಯಕ್ಕೆ ಮಾಂಸಾಹಾರ ಮಾಡಲು ನದಿಯಲ್ಲಿ ಆಮೆ ಬೇಟೆಯಾಡಿ ಮಾಂಸ ಸುಡುವಾಗ ನಾಲ್ವರನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ. ಮಣಿಕಂಠ(42), ರಾಜೇಂದ್ರ (54), ವಿಘ್ನೇಶ್ (32) ಹಾಗೂ ಪ್ರಶಾಂತ್(35) ಎಂಬವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ.
ಬೆಳ್ತಂಗಡಿ ನಗರದ ಸೋಮಾವತಿ ನದಿಯಲ್ಲಿ ನಾಲ್ಕು ಆಮೆಯನ್ನು ಬೇಟೆಯಾಡಿ ನದಿ ತಟದಲ್ಲಿ ಮಾಂಸ ಮಾಡಲು ಯತ್ನಿಸುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕ ಬಳಿಕ ದಾಳಿ ಮಾಡಿ ಆಮೆಯನ್ನು ಜಪ್ತಿ ಮಾಡಿ, ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ಬೆಳ್ತಂಗಡಿ ಪೊಲೀಸರು ದಾಳಿ ಮುಂದಿನ ತನಿಖೆಗಾಗಿ ಬೆಳ್ತಂಗಡಿ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ. ಇವರನ್ನು ಬೆಳ್ತಂಗಡಿ ವಲಯ ಅರಣ್ಯಾಧಿಕಾರಿಗಳು ವಿಚಾರಣೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರಾಗಲು ನೋಟಿಸ್ ನೀಡಿ 14 ರಂದು ರಾತ್ರಿ ಬಿಡುಗಡೆ ಮಾಡಿದ್ದಾರೆ.
*ಅಜ್ಜಿಯ ಇಷ್ಟ ತಂದಿತು ಸಂಕಷ್ಟ:* ಆರೋಪಿಗಳು ಉಜಿರೆ ಗ್ರಾಮದ ಕುಂಟಿನಿ ನಿವಾಸಿ ಸಂಬಂಧಿ ಅಜ್ಜಿಯ ಉತ್ತರಕ್ರಿಯೆ ಕಾರ್ಯಕ್ರಮಕ್ಕಾಗಿ ಫೆ.13ರಂದು ಆಗಮಿಸಿದ್ದರು. ಮರುದಿನ ಅಜ್ಜಿಗೆ ಇಷ್ಟವಾದ ಆಮೆ ಮಾಂಸ ಮಾಡಲೆಂದು ಬೆಳ್ತಂಗಡಿಯ ಸೋಮವತಿ ನದಿಯಲ್ಲಿ ಬೇಟೆಯಾಡಿದ್ದಾರೆ. ಅಲ್ಲಿಯೇ ಮಾಂಸ ಸುಡುವಾಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.












