8:35 AM Monday16 - June 2025
ಬ್ರೇಕಿಂಗ್ ನ್ಯೂಸ್
Bangalore | ಮೋದಿ ಎದುರು ನಿಲ್ಲಬಲ್ಲ ಇನ್ನೊಬ್ಬ ನಾಯಕ ಇಲ್ಲ: ಮಾಜಿ ಪ್ರಧಾನಿ… ಬಸವಸಾಗರ ಜಲಾಶಯ ಭರ್ತಿ: 8 ಸಾವಿರ ಕ್ಯೂಸೆಕ್ ನೀರು ಕೃಷ್ಣಾ ನದಿಗೆ ಬಿಡುಗಡೆ Kalburgi | ಮೀಸಲಾತಿ, ಜಾತಿ ಗಣತಿ ಕಾಂಗ್ರೆಸ್ಸಿನ ರಾಜಕೀಯ ಡ್ರಾಮಾ: ಕೇಂದ್ರ ಸಚಿವ… ಆರೋಗ್ಯ ಆವಿಷ್ಕಾರ’ದಂತಹ ಕಾರ್ಯಕ್ರಮ ಬಿಜೆಪಿ ಕಲ್ಪನೆಗೂ ಬರಲಿಕ್ಕೆ ಸಾಧ್ಯವಿಲ್ಲ: ಆರೋಗ್ಯ ಸಚಿವ ದಿನೇಶ್… Mangaluru | ಕೋಮು ಹಿಂಸಾಚಾರ ಹತ್ತಿಕ್ಕಲು ವಿಶೇಷ ಕಾರ್ಯಪಡೆ ರೆಡಿ: 4 ತುಕಡಿಗಳ… ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ ಮರು ಸಮೀಕ್ಷೆಗೆ ಸಚಿವ ಸಂಪುಟ ತೀರ್ಮಾನ: ಮುಖ್ಯಮಂತ್ರಿ… ಲಕ್ಕೀ ಲೇಡಿ: ಟ್ರಾಫಿಕ್ ನಲ್ಲಿ 10 ನಿಮಿಷ ಸಿಲುಕಿದ ಮಹಿಳೆಗೆ ಫ್ಲೈಟ್ ಮಿಸ್;… ಅಹಮದಾಬಾದ್: ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಏರ್ ಇಂಡಿಯಾ ಬೋಯಿಂಗ್ ಪತನ; ಬೆಂಕಿಯುಂಡೆಯಾದ… New Delhi | ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ… Mangaluru | ಕೋಮು ನಿಗ್ರಹ ಪಡೆ ಮುಖ್ಯಸ್ಥರಾಗಿ ಅಮಿತ್ ಸಿಂಗ್ ನೇಮಕ: ತುಳುನಾಡು,…

ಇತ್ತೀಚಿನ ಸುದ್ದಿ

ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ಕೇಂದ್ರ ಸರಕಾರಕ್ಕೆ ಸಂಪೂರ್ಣ ಸಹಕಾರ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ

23/04/2025, 17:52

ಬೆಂಗಳೂರು(reporterkarnataka.com): ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡಲಿದೆ. ಕೇಂದ್ರ ಸರ್ಕಾರ ಕೂಡ ಸರ್ವಪಕ್ಷ ಸಭೆ ಕರೆದು ಎಲ್ಲರ ಅಭಿಪ್ರಾಯ ಪಡೆಯಬೇಕು ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕರೂ ಆಗಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಕಾಶ್ಮೀರದಲ್ಲಿನ ಭಯೋತ್ಪಾದನೆ ದಾಳಿ ಕುರಿತು ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಮಲ್ಲಿಕಾರ್ಜುನ ಖರ್ಗೆ ಅವರು ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಜಮ್ಮು ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ನಿನ್ನೆ ಬಹಳ ದುರದೃಷ್ಟಕರ ಘಟನೆ ನಡೆದಿದ್ದು, ಮಧ್ಯಾಹ್ನ 2.30ಕ್ಕೆ ಭೋತ್ಪಾದಕರು ಪ್ರವಾಸಿಗರನ್ನು ನಿರ್ದಯವಾಗಿ ಹತ್ಯೆ ಮಾಡಿದ್ದಾರೆ. ಈ ಘಟನೆ ನಮಗೆ ಆಘಾತಕಾರಿಯಾಗಿದ್ದು, ಮನಸ್ಸಿಗೆ ಬಹಳ ನೋವಾಗಿದೆ. ಕಾಂಗ್ರೆಸ್ ಪಕ್ಷ ಈ ಹೇಡಿತನದ ಕೃತ್ಯವನ್ನು ಕಟುವಾಗಿ ಖಂಡಿಸುತ್ತದೆ. ಈ ದಾಳಿಯು ದೇಶದ ಏಕತೆ ಹಾಗೂ ಸಮಗ್ರತೆ ಮೇಲಿನ ನೇರ ದಾಳಿಯಾಗಿದೆ. ಇದು ದೇಶದ ಇತಿಹಾಸದಲ್ಲಿ ಅತ್ಯಂತ ಕರಾಳ ದಾಳಿಯಾಗಿದೆ ಎಂದರು.
ಅಮಾಯಕ ನಾಗರೀಕರ ಮೇಲೆ ದಾಳಿ ಮಾಡುವವರು ಮನುಷ್ಯರಲ್ಲ. ನಿನ್ನೆ ಕೇಂದ್ರ ಸಚಿವ ಅಮಿತ್ ಶಾ ಅವರ ಜತೆ ಮಾತನಾಡಿದ್ದು, ಜಮ್ಮು ಕಾಶ್ಮೀರದ ಉಮರ್ ಅಬ್ದುಲ್ಲಾ ಹಾಗೂ ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಅನೇಕ ಮಾಹಿತಿ ಕಲೆಹಾಕಿದ್ದೇನೆ. ಈ ಕೃತ್ಯದ ಹಿಂದೆ ಯಾರೇ ಇದ್ದರೂ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಅಮಿತ್ ಶಾ ಅವರು ತಿಳಿಸಿದ್ದಾರೆ ಎಂದರು.
ಈ ವಿಚಾರವಾಗಿ ನಾಳೆ ಬೆಳಗ್ಗೆ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯನ್ನು ದೆಹಲಿಯ ಎಐಸಿಸಿ ಕಚೇರಿಯಲ್ಲಿ ಕರೆಯಲಾಗಿದೆ. ಹೀಗಾಗಿ ನಾನು ಇಂದು ಸಂಜೆ ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದೇನೆ. ಅನಾರೋಗ್ಯದಿಂದ ಬಳಲುತ್ತಿರುವ ನನ್ನ ಮಗನನ್ನು ನೋಡಲು ನಾನು ಪ್ರತಿವಾರ ಬೆಂಗಳೂರಿಗೆ ಆಗಮಿಸುತ್ತೇನೆ. ನನ್ನ ನಿಗದಿತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ ದೆಹಲಿಗೆ ತೆರಳುತ್ತಿದ್ದೇನೆ ಎಂದು ಹೇಳಿದರು.
ರಾಜಕೀಯ ಮಾಡುವ ಸಮಯ ಇದಲ್ಲ. ಇದು ಎಲ್ಲರೂ ಒಗ್ಗಟ್ಟಾಗಿ ಮೃತರ ಕುಟುಂಬಗಳಿಗೆ ನ್ಯಾಯ ದೊರಕಿಸಿಕೊಡುವ ಸಮಯ. ಈ ಹೀನ ಕೃತ್ಯ ಮಾಡಿದವರಿಗೆ ಕಠಿಣ ಶಿಕ್ಷೆ ನೀಡುವ ಸಮಯ. ದೇಶದ ವಿವಿಧ ಭಾಗಗಳಿಂದ ತೆರಳಿದ್ದ ಪ್ರವಾಸಿಗರಲ್ಲಿ ಶಿವಮೊಗ್ಗದ ನಿವಾಸಿ ಮಂಜುನಾಥ್ ಎಂಬುವವರು, ಬೆಂಗಳೂರು ನಿವಾಸಿ ಭೂಷಣ್ ಕೂಡ ಹತ್ಯೆಯಾಗಿದ್ದು, ಈ ಇಬ್ಬರು ಮೃತರ ಧರ್ಮಪತ್ನಿಯರೊಂದಿಗೆ ನಾನು ಇಂದು ಬೆಳಗ್ಗೆ ಮಾತನಾಡಿ ಸಾಂತ್ವನ ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.
ರಾಜ್ಯ ಸರ್ಕಾರ ಕೂಡ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ನೇತೃತ್ವದ ತಂಡವನ್ನು ಕಾಶ್ಮೀರಕ್ಕೆ ಕಳುಹಿಸಿದ್ದು, ನಾನು ಸಂತೋಷ್ ಲಾಡ್ ಅವರ ಜತೆ ಮಾತನಾಡಿದ್ದೇನೆ. ಸಂತೋಷ್ ಲಾಡ್ ಅವರು ಮೃತರ ಕುಟುಂಬದವರು ಹಾಗೂ ಮಕ್ಕಳನ್ನು ಭೇಟಿ ಮಾಡಿದ್ದು, ಕಾಶ್ಮೀರದಲ್ಲಿ ಕರ್ನಾಟಕ ರಾಜ್ಯದಿಂದ ತೆರಳಿರುವ 200 ಪ್ರವಾಸಿಗರನ್ನು ಸಂಪರ್ಕ ಮಾಡಿದ್ದಾರೆ. ಈ ಪ್ರವಾಸಿಗರು ವಿವಿಧ ಹೋಟೇಲ್ ಗಳಿದ್ದು, ಅವರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆತರಲು ವಿಮಾನ ವ್ಯವಸ್ಥೆ ಕಲ್ಪಿಸುತ್ತಿದ್ದಾರೆ. ಇನ್ನು ಜಮ್ಮು ಕಾಶ್ಮೀರದ ಸಿಎಂ ಜತೆ ಚರ್ಚೆ ಮಾಡಿ ಇತರೆ ರಾಜ್ಯಗಳ ಪ್ರವಾಸಿಗರಿಗೆ ನೆರವು ನೀಡುವಂತೆ ಕೋರಿದ್ದೇನೆ. ಗೃಹ ಸಚಿವ ಅಮಿತ್ ಶಾ ಕೂಡ ಪ್ರವಾಸಿಗರ ಸುರಕ್ಷತೆ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ ಎಂದರು.
ಈ ದಾಳಿಯಲ್ಲಿ ಮೃತರಿಗೆ ಹಾಗೂ ಅವರ ಕುಟುಂಬಕ್ಕೆ ಸಂತಾಪ ಸೂಚಿಸುತ್ತೇನೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ಇದು ಬೇಸಿಗೆ ಆರಂಭದ ಕಾಲ. ಹೀಗಾಗಿ ಇದು ಪ್ರವಾಸೋದ್ಯಮ ಆರಂಭವಾಗುವ ಸಮಯ. ಪ್ರವಾಸೋದ್ಯಮ ಆ ರಾಜ್ಯದ ಆರ್ಥಿಕತೆಯ ಆಧಾರ. ಕಾಶ್ಮೀರ ಪ್ರವಾಸೋದ್ಯಮದ ಮೇಲೆ ಅವಲಂಬಿತವಾಗಿದೆ. ಈ ವರ್ಷದ ಪ್ರವಾಸೋದ್ಯಮದಿಂದ ಬರಬೇಕಾಗಿದ್ದ ಆದಾಯ ಸಂಪೂರ್ಣವಾಗಿ ನೆಲಕಚ್ಚಲಿದೆ ಎಂದು ಉಮರ್ ಅಬ್ದುಲ್ಲಾ ಅವರು ಹೇಳಿದ್ದಾರೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಜವಾಬ್ದಾರಿ ಹೆಚ್ಚಾಗಿರುತ್ತದೆ ಎಂದು ತಿಳಿಸಿದರು.
ಈ ಸಮಯದಲ್ಲಿ ನಾವು ಕೇಂದ್ರ ಸರ್ಕಾರದ ಜತೆ ನಿಲ್ಲುತ್ತೇವೆ. ಭಯೋತ್ಪಾದಕ ಕೃತ್ಯವನ್ನು ಕಟುವಾಗಿ ಖಂಡಿಸುತ್ತೇವೆ. ದೇಶದ ಏಕತೆ ಹಾಗೂ ಸಮಗ್ರತೆ ರಕ್ಷಣೆಗೆ ನಾವು ಒಂದಾಗಿ ನಿಲ್ಲುತ್ತೇವೆ. ಈ ದಾಳಿ ದೇಶದ ಮೇಲಿನ ದಾಳಿಯಾಗಿದೆ. ಇಡೀ ದೇಶ ಆಘಾತಕ್ಕೆ ಒಳಗಾಗಿದ್ದು, ಪಾಕಿಸ್ತಾನ ಭಯೋತ್ಪಾದಕ ಸಂಸ್ಧೆ ಈ ದಾಳಿಯ ಹೊಣೆ ಹೊತ್ತಿದೆ. ಹೀಗಾಗಿ ನಾವು ತಕ್ಕ ತಿರುಗೇಟು ನೀಡಬೇಕು. ಈ ವಿಚಾರದಲ್ಲಿ ನಾವೆಲ್ಲರೂ ಒಂದೇ. ಆದರೆ ಈ ವಿಚಾರದಲ್ಲಿ ಪರಿಸ್ಥಿತಿ ಸಮರ್ಥವಾಗಿ ನಿಭಾಯಿಸದೇ ಪ್ರಚಾರವನ್ನು ಪಡೆಯಬಾರದು. ಇಂತಹ ಸಂದರ್ಭದಲ್ಲಿ ಯಾರು ಹೆಚ್ಚು ಕೆಲಸ ಮಾಡಿದರು, ಯಾರು ಮಾಡಿಲ್ಲ ಎಂಬ ಚರ್ಚೆಗಳು ಬರಬಾರದು. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಂದೇ. ಕೇಂದ್ರ ಸರ್ಕಾರಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ. ಈ ಭಯೋತ್ಪಾದಕರನ್ನು ಹುಡುಕಿ ಹೊಡೆದುಹಾಕಬೇಕು. ಜಮ್ಮು ಕಾಶ್ಮೀರದ ಪ್ರವಾಸಿಗರ ವಿಶ್ವಾಸ ಗಳಿಸಬೇಕು ಎಂದು ಸಲಹೆ ನೀಡಿದರು.
ಅಮರನಾಥ ಯಾತ್ರೆ ವೇಳೆಯೂ ಇಂತಹ ದಾಳಿ ನಡೆದಿತ್ತು. ಹೀಗಾಗಿ ಕೇಂದ್ರ ಸರ್ಕಾರ ಹಾಗೂ ಅಲ್ಲಿನ ರಾಜ್ಯ ಸರ್ಕಾರ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು. ಅಮರನಾಥ ಯಾತ್ರೆಗೆ ತೆರಳುವ ಪ್ರವಾಸಿಗರಿಗೆ ಅಗತ್ಯ ಭದ್ರತೆ ಒದಗಿಸಿಕೊಡಬೇಕು. ಭಯೋತ್ಪಾದನೆ ಸವಾಲಿನ ಕುರಿತು ಸರ್ಕಾರ ಎಲ್ಲಾ ಪಕ್ಷಗಳ ಜತೆ ಚರ್ಚೆ ಮಾಡಬೇಕು. ಹೀಗಾಗಿ ಕೇಂದ್ರ ಸರ್ಕಾರ ಸರ್ವಪಕ್ಷ ಸಭೆ ಕರೆದು ಎಲ್ಲರ ಸಲಹೆ ಅಭಿಪ್ರಾಯ ಪಡೆಯಬೇಕು. ನಮ್ಮ ನಾಗರೀಕರನ್ನು ಭಯೋತ್ಪಾದಕರು ಹತ್ಯೆ ಮಾಡುವಾಗ ರಾಜಕೀಯ ಮಾಡುವುದು ಸರಿಯಲ್ಲ. ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸಲಿ, ಅಸಾಧ್ಯವಾಗದನ್ನು ತಿರಸ್ಕರಿಸಬಹುದು. ಸರ್ವಪಕ್ಷ ಸಭೆ ಮಾಡಿದಾಗ ಎಲ್ಲರೂ ಒಂದೇ ಎಂಬ ಭಾವನೆ ಮೂಡುತ್ತದೆ. ಇದಕ್ಕೆ ಅಗತ್ಯ ಸಹಕಾರ ನಾವು ನೀಡುತ್ತೇವೆ ಎಂದು ಭರವಸೆ ನೀಡಿದರು.
ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತೊಗೆಯಲು ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ. ಭಯೋತ್ಪಾದನೆ ಹಾಗೂ ಪ್ರತ್ಯೇಕತವಾದವನ್ನು ಕಾಂಗ್ರೆಸ್ ಪಕ್ಷ ನಿರಂತರವಾಗಿ ಖಂಡಿಸುತ್ತಲೇ ಬಂದಿದೆ. ಇದಕ್ಕಾಗಿ ನಮ್ಮ ನಾಯಕರು ಪ್ರಾಣತ್ಯಾಗ ಮಾಡಿದ್ದಾರೆ. ಭಯೋತ್ಪಾದನೆ ವಿರುದ್ಧ ಹೋರಾಟದಲ್ಲಿ ದೇಶವನ್ನು ಒಟ್ಟಾಗಿರಿಸುವಲ್ಲಿ ನಮ್ಮ ಪಕ್ಷವು ಅನೇಕ ಅಮೂಲ್ಯ ಜೀವಗಳನ್ನು ಕಳೆದುಕೊಂಡಿದೆ ಎಂದರು.
ಜಮ್ಮು ಕಾಶ್ಮೀರದಲ್ಲಿ ಪದೇ ಪದೆ ಇಂತಹ ಭದ್ರತಾ ವೈಫಲ್ಯಗಳು ನಡೆಯುತ್ತಿರುವುದಕ್ಕೆ ಕಾರಣವೇನು ಎಂದು ಕೇಳಿದಾಗ, ನಾನು ಇಲ್ಲಿ ವಾಸ್ತವಾಂಶಗಳನ್ನು ನಿಮ್ಮ ಮುಂದೆ ಇಡಲು ಬಂದಿದ್ದೇನೆಯೇ ಹೊರತು, ಸರ್ಕಾರದ ವೈಫಲ್ಯಗಳನ್ನು ಎತ್ತಿ ತೋರಿಸಲು ಅಲ್ಲ. ಇಂತಹ ವಿಚಾರಗಳನ್ನು ನಾಳೆ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಸರ್ವಪಕ್ಷ ಸಭೆ ಕರೆದರೆ ಅಲ್ಲಿ ನಾವು ಇಂತಹ ವಿಚಾರಗಳನ್ನು ಚರ್ಚೆ ಮಾಡುತ್ತೇವೆ. ಆದರೆ ಈಗ, ಇಲ್ಲಿ ಆ ವಿಚಾರವಾಗಿ ಚರ್ಚೆ ಮಾಡುವುದಿಲ್ಲ. ಸದ್ಯಕ್ಕೆ ನಾವು ಜನರಿಗೆ ನೆರವಾಗಿ ಅವರಿಗೆ ಸಾಂತ್ವನ ಹೇಳಬಯಸುತ್ತೇವೆ ಎಂದರು.
ಪ್ರಧಾನಮಂತ್ರಿಗಳು ಅಬುಧಾಬಿಯಲ್ಲಿದ್ದಾಗ ಇಂತಹ ದಾಳಿಯಾಗಿರುವುದನ್ನು ಹೇಗೆ ನೋಡುತ್ತೀರಿ ಹಾಗೂ ಧರ್ಮದ ಹೆಸರು ಕೇಳಿ ಹತ್ಯೆ ಮಾಡಿರುವುದನ್ನು ಹೇಗೆ ನೋಡುತ್ತೀರಿ ಎಂದು ಕೇಳಿದಾಗ “ಇದು ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುವ ಸಮಯ. ಸರ್ವಪಕ್ಷ ಸಭೆ ಕರೆದರೆ ಇಂತಹ ವಿಚಾರ ಚರ್ಚೆ ಮಾಡಬಹುದು” ಎಂದು ತಿಳಿಸಿದರು.

ಇತ್ತೀಚಿನ ಸುದ್ದಿ

ಜಾಹೀರಾತು