ಇತ್ತೀಚಿನ ಸುದ್ದಿ
ಇಬ್ಬರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಸಹಿತ 4 ಮಂದಿ ಬಂಧನ: 12 ಲಕ್ಷ ರೂ. ಮೌಲ್ಯದ ಡ್ರಗ್ಸ್, ಸೊತ್ತು ವಶ
22/02/2026, 12:41
ಮಂಗಳೂರು(reporterkarnataka.com): ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ, ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ನಾಲ್ವರು ಅಂತರ್ ರಾಜ್ಯ ಗಾಂಜಾ ಮಾರಾಟಗಾರರ ಬಂಧಿಸಲಾಗಿದ್ದು, ಅವರಿಂದ 22 ಕೆ.ಜಿ 250 ಗ್ರಾಂ ತೂಕದ ಅಕ್ರಮ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಮಹಾರಾಷ್ಟ್ರಜಲಗಾಂ ಜಿಲ್ಲೆಯ ಚೊಪ್ಪಡ ತಾಲೂಕಿನ
ಸಮತಾ ನಗರದ ಕರಣ್ ಬಾಬು ರಾಂ ಜಾದವ್ (27),
ಮಧ್ಯಪ್ರದೇಶದ ದೇವಾಸ್ ಜಿಲ್ಲೆಯ ತಾಶಿಲ್ ಬಗಳಿಯ
ಸಮೀರ್ ಶಾ (19),ಉಡುಪಿ ಜಿಲ್ಲೆಯ ಹೆಜಮಾಡಿ ಗ್ರಾಮದ
ಹೆಜಮಾಡಿ ಕೋಡಿಯ ನ್ಯೂ ಹೌಸ್ ನಿವಾಸಿ ಎಂ.ಹೆಚ್. ಮಯ್ಯದಿ (48) ಹಾಗೂ ಮಂಗಳೂರು ಕುದ್ರೋಳಿಯ ಕರ್ಬಾಲ ರೋಡ್ ನಿವಾಸಿ ಇಬ್ರಾಹಿಂ ಕಲೀಲ್ (47) ಬಂಧಿತರು ಎಂದು ತಿಳಿದು ಬಂದಿದೆ.
ಶನಿವಾರ ಜೋಕಟ್ಟೆ ಕ್ರಾಸ್ ರೈಲ್ವೇ ಬ್ರಿಡ್ಜ್ ಹತ್ತಿರ ಗಾಂಜಾವನ್ನು ಮಾರಾಟ ಮಾಡಲು ಹೊರ ರಾಜ್ಯ ದಿಂದ ತಂದಿರುವ ಬಗ್ಗೆ ಮಾಹಿತಿ ಪಡೆದು ಉತ್ತರ ಉಪ ವಿಭಾಗದ ಎಸಿಪಿ ಅವರು ಮತ್ತು ಅವರ ತಂಡದ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಪಣಂಬೂರು ಠಾಣಾ ಪಿ.ಎಸ್.ಐ ಮತ್ತು ಸಿಬ್ಬಂದಿಗಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಬಂಧಿತರಿಂದ 22 ಕೆಜಿ 250 ಗ್ರಾಂ ಗಾಂಜಾ (ಅಂದಾಜು ಮೌಲ್ಯ ರೂ. 11,12,500) ಮತ್ತು 6 ಮೊಬೈಲ್ ಪೋನ್ (ಅಂದಾಜು ಮೌಲ್ಯ ರೂ. 18,000) ನ್ನು ಹಾಗೂ ಗಾಂಜಾ ಸಾಗಿಸಲು ಬಳಸಿದ KA 20 H.E. 2915 ಮತ್ತು K.A 19 H.P 6021 ಸ್ಕೂಟರ್ ಗಳನ್ನು (ಅಂದಾಜು ಮೌಲ್ಯ ರೂ. 1,00,000) ಸ್ವಾಧೀನಪಡಿಸಿಕೊಳ್ಳಲಾಗಿದೆ.
ಆರೋಪಿತರ ಪೈಕಿ ಕರಣ್ ಬಾಬು ರಾಂ ಜಾದವ್ ಮತ್ತು ಸಮೀರ್ ಶಾ ಎಂಬವರು ಗಾಂಜಾವನ್ನು ಮಹಾರಾಷ್ಟ್ರ ಮಯ್ಯದಿ ಹಾಗೂ ಮಧ್ಯ ಪ್ರದೇಶ ಶಾರೂಕ್ ಎಂಬವರು ತಂದು ಉಡುಪಿ ಹೆಜಮಾಡಿ ಕೋಡಿಯ ಎಂ.ಹೆಚ್. ಮಯ್ಯದಿ ಮತ್ತು ಮಂಗಳೂರಿನ ಇಬ್ರಾಹಿಂ ಕಲೀಲ್ ರವರಿಗೆ ನೀಡುತ್ತಿದ್ದು, ಈ ಇಬ್ಬರು ಗಾಂಜಾವನ್ನು ಉಡುಪಿ, ಮಲ್ಪೆ, ಕಾರ್ಕಳ, ಮುಲ್ಕಿ, ಸುರತ್ಕಲ್, ಪಣಂಬೂರು, ಹಾಗೂ ಮಂಗಳೂರು ನಗರದ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡುತ್ತಿದ್ದುದಾಗಿ ತಿಳಿದು ಬಂದಿದೆ. ಈ ಹಿಂದೆ ಕೂಡಾ ಹಲವು ಭಾರಿ ಗಾಂಜಾವನ್ನು ಅಕ್ರಮವಾಗಿ ತಂದು ಉಡುಪಿ ಜಿಲ್ಲೆ ಮತ್ತು ಮಂಗಳೂರು ನಗರದಲ್ಲಿ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.
ಆರೋಪಿತರುಗಳಿಂದ ಸ್ವಾಧೀನಪಡಿಸಿಕೊಳ್ಳಲಾದ ಗಾಂಜಾ, ಮೊಬೈಲ್ ಮತ್ತು ಸ್ಕೂಟರ್ ಗಳ ಒಟ್ಟು ಮೌಲ್ಯ 12,30,500 ರೂಗಳಾಗಿದ್ದು, ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ.21/2026 ಕಲಂ:8(C), 20(b),(ii)(C) NDPS Act ನಂತೆ ಪ್ರಕರಣ ದಾಖಲಿಸಿ ತನಿಖೆ ನಡೆಯುತ್ತಿದೆ.












