ಇತ್ತೀಚಿನ ಸುದ್ದಿ
ಕರಾವಳಿಯಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ: ಮುಖ್ಯ ನ್ಯಾಯಮೂರ್ತಿ ಭೇಟಿ; ಪೂರಕವಾಗಿ ಸ್ಪಂದನೆ
06/12/2025, 22:29
ಮಂಗಳೂರು(reporterkarnataka.com): ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆ ಹಾಗೂ ಮಂಗಳೂರಿನಲ್ಲಿ ಸಂಚಾರ ಹೈಕೋರ್ಟ್ ಪೀಠ ಸ್ಥಾಪನೆ ಉದ್ದೇಶಕ್ಕಾಗಿ ಹೈಕೋರ್ಟ್ ಪೀಠ ಹೋರಾಟ ಸಮಿತಿಯ ನಿಯೋಗ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಮೂರ್ತಿಗಳಾದ ಗೌರವಾನ್ವಿತ ವಿಭು ಬಖ್ರು ರವರನ್ನು ಉಡುಪಿ ಸರ್ಕ್ಯೂಟ್ ಹೌಸ್ ನಲ್ಲಿ ಭೇಟಿಯಾಗಿ ಯಾಗಿ ಮನವಿ ಸಲ್ಲಿಸಲಾಯಿತು.


ಹೋರಾಟ ಸಮಿತಿಯ ಸಂಚಾಲಕರು ವಿಧಾನ ಪರಿಷತ್ ನ ಸದಸ್ಯ ಐವನ್ ಡಿಸೋಜ ಅವರು ಮನವಿಯನ್ನು ಸಲ್ಲಿಸಿ ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಬಹಳ ಮುಖ್ಯವಾಗಿದ್ದು, ಇದರಿಂದ ಸಾಮಾನ್ಯ ಜನರು ದೂರದ ಬೆಂಗಳೂರಿಗೆ ಹೋಗಿ ಕಾನೂನು ಹೋರಾಟದಲ್ಲಿ ತೊಡಗಿಸಿಕೊಳ್ಳಲು ಬಹಳ ಕಷ್ಟವಾಗುತ್ತದೆ. ಮಳೆಗಾಲದ ಸಂದರ್ಭದಲ್ಲಿ ದೂರದ ಬೆಂಗಳೂರಿನ ಸಂಪರ್ಕ ಆಗಾಗ ಕಡಿತಗೊಳ್ಳುವುದರಿಂದ ಜನರು ಹೈಕೋರ್ಟಿಗೆ ಸಂಚರಿಸಲು ಕಷ್ಟವನ್ನು ಅನುಭವಿಸಬೇಕಾಗಿದ್ದು ಅಲ್ಲದೆ ಕರಾವಳಿ ಭಾಗ ಉಡುಪಿ ಚಿಕ್ಕಮಗಳೂರು, ಕೊಡಗು ಜಿಲ್ಲೆಗಳ ದಾವೆಗಳ ವಿಲೇವಾರಿಯಲ್ಲಿ ವಿಳಂಬವಾಗುತ್ತಿದ್ದು ಇದರಿಂದ ಈ ಭಾಗದ ಜನರಿಗೆ ಬಹಳ ತೊಂದರೆಯಾಗುತ್ತಿರುವುದರಿಂದ, ಅಲ್ಲದೆ ರಾಜ್ಯದ ಮುಖ್ಯಮಂತ್ರಿಗಳು ಕರಾವಳಿ ಭಾಗದಲ್ಲಿ ಹೈಕೋರ್ಟ್ ಪೀಠ ಸ್ಥಾಪನೆಗೆ ಒಲವನ್ನು ತೋರಿಸಿರುವುದರಿಂದ, ಮೊದಲಿಗೆ ಸಂಚಾರಿ ಹೈಕೋರ್ಟ್ ಪೀಠ ಸ್ಥಾಪಿಸಲು ಒಪ್ಪಿಗೆ ನೀಡಬೇಕೆಂದು ವಿನಂತಿಸಿದರು.
ಈ ಮನವಿಗೆ ಪೂರಕವಾಗಿ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿಗಳು ತಮ್ಮ ಮನವಿಯ ಬಗ್ಗೆ ಆದಷ್ಟು ಬೇಗ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ಸಮಿತಿಯ ನಿಯೋಗದಲ್ಲಿ ಮಂಗಳೂರು ವಕೀಲ ಸಂಘದ ಅಧ್ಯಕ್ಷ ರಾಘವೇಂದ್ರ ಎಚ್. ವಿ., ಮಂಗಳೂರಿನ ಪ್ರಧಾನ ಜಿಲ್ಲಾ ಸರಕಾರಿ ವಕೀಲರಾದ ಎಂ. ಪಿ. ನರೋನ್ಹ, ಪ್ರಧಾನ ಕಾರ್ಯದರ್ಶಿ ಶ್ರೀಧರ್ ಎಚ್., ಉಡುಪಿ ವಕೀಲರ ಸಂಘದ ಅಧ್ಯಕ್ಷರ ರೊನಾಲ್ಡ್ ಮುಂತಾದವರು ಉಪಸ್ಥಿತರಿದ್ದರು.












