ಇತ್ತೀಚಿನ ಸುದ್ದಿ
ಎಕ್ಸ್ಪರ್ಟ್ ಕಾಲೇಜಿನಲ್ಲಿ ಈದ್ ಉಲ್ ಫಿತ್ರ್ ಆಚರಣೆ; ಅತ್ಯುತ್ತಮ ರಾಜಕಾರಣಿಗಳು ಭಾರತಕ್ಕೆ ಬೇಕು: ಸ್ಪೀಕರ್ ಖಾದರ್
31/03/2025, 16:28

ಮಂಗಳೂರು(reporterkarnataka.com): ವಳಚ್ಚಿಲ್ನ ಎಕ್ಸ್ಪರ್ಟ್ ಪದವಿ ಪೂರ್ವ ಕಾಲೇಜಿನಲ್ಲಿ ಈದ್ ಉಲ್ ಫಿತ್ರ್ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಉತ್ತಮ ವೈದ್ಯರು ಮತ್ತು ಎಂಜಿನಿಯರ್ ಗಳು ಎಷ್ಟು ಮುಖ್ಯವೋ ಅಷ್ಟೇ ಉತ್ತಮ ರಾಜಕಾರಣಿಗಳೂ ಈ ದೇಶಕ್ಕೆ ಮುಖ್ಯ. ಉತ್ತಮ ವಿದ್ಯಾರ್ಥಿಗಳು ಉತ್ತಮ ರಾಜಕಾರಣಿ ಆಗುವ ಕನಸನ್ನು ಹೊಂದಿರಬೇಕು ಎಂದರು.
ಎಕ್ಸ್ಪರ್ಟ್ ಶಿಕ್ಷಣ ಸಮೂಹ ಸಂಸ್ಧೆಗಳ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಅವರು ಮಾತನಾಡಿ,ನೀವು ವೈದ್ಯರಾದರೆ ಅಥವಾ ಎಂಜಿನಿಯರಾದರೆ ಅಥವಾ ಯಾವುದೇ ಕ್ಷೇತ್ರವನ್ನು ಆಯ್ಕೆ ಮಾಡಿದರೆ ಆ ಕ್ಷೇತ್ರದಲ್ಲಿ ಸದಾ ಅತ್ಯುತ್ತಮ ಸೇವೆ ನೀಡಿ ಶ್ರೇಷ್ಠರಾಗಬೇಕು ಎಂದು ಕಿವಿ ಮಾತು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾಪ್ರಭಾ ಎನ್. ನಾಯಕ್ ಮಾತನಾಡಿ, ಎಕ್ಸ್ ಪರ್ಟ್ ನಲ್ಲಿ ಎಲ್ಲಾ ಹಬ್ಬಗಳನ್ನು ಸಮಾನವಾಗಿ ಆಚರಿಸಲಾಗುತ್ತದೆ ಮತ್ತು ವಿದ್ಯಾರ್ಥಿಗಳು ತಮ್ಮ ಬದುಕಿಗೆ ಹೊಸತನವನ್ನು ತಂದುಕೊಡುವ ಮೂಲಕ ರಾಷ್ಟ್ರದ ಜವಾಬ್ದಾರಿಯುತ ನಾಗರಿಕರಾಗಬೇಕೆಂದು ಕರೆ ನೀಡಿದರು.
ಟ್ರಸ್ಟಿ ಉಸ್ತಾದ್ ರಫೀಕ್ ಖಾನ್, ಪ್ರಾಂಶುಪಾಲ ಡಾ. ಎನ್ ಕೆ ವಿಜಯನ್, ಉಪಪ್ರಾಂಶುಪಾಲ(ಶೈಕ್ಷಣಿಕ) ಸುಬ್ರಹ್ಮಣ್ಯ ಉಡುಪ, ಉಪ ಪ್ರಾಂಶುಪಾಲೆ(ಆಡಳಿತ) ಧೃತಿ ವಿ ಹೆಗ್ಡೆ ಉಪಸ್ಥಿತರಿದ್ದರು.
ಮಾಹಿತಿ ತಂತ್ರಜ್ಞಾನ ವಿಭಾಗದ ನಿರ್ದೇಶಕ ಅಂಕುಶ್ ಎನ್ ನಾಯಕ್ ಅವರು ಸ್ವಾಗತಿಸಿದರು.
ವಿದ್ಯಾರ್ಥಿನಿ ಪ್ರಣತಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಈದ್ ಉಲ್ ಫಿತ್ರ್ ಹಬ್ಬದ ಪ್ರಯುಕ್ತ ವಿಶೇಷ ಬಿರಿಯಾನಿ ಭೋಜನವನ್ನು ವಿದ್ಯಾರ್ಥಿಗಳು ಸವಿದರು.